6 ವರ್ಷದ ಪುಟ್ಟ ಅಭಿಮಾನಿಯ ಆಸೆ ಈಡೇರಿಸುತ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
ಸ್ಟಾರ್ ನಟರಿಗೆ ಅಸಂಖ್ಯಾತ ಅಭಿಮಾನಿಗಳಿರುತ್ತಾರೆ. ತಮ್ಮ ಜೀವನದಲ್ಲಿ ಒಮ್ಮೆ ಆದರೂ ನೆಚ್ಚಿನ ನಟ ಅಥವಾ ನಟಿಯನ್ನು ನೋಡಬೇಕು, ಮಾತನಾಡಿಸಬೇಕು, ಸಾಧ್ಯವಾದರೆ ಜೊತೆಗೊಂದು ಫೋಟೊ ಕ್ಲಿಕ್ಕಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ರೀತಿಯ ನಟನನ್ನು ಭೇಟಿ ಮಾಡುವುದು ಸವಾಲಿನ ಕೆಲಸವೇ ಸರಿ.
ರಜನಿಕಾಂತ್ ಯಾವಾಗ ಎಲ್ಲಿ ಹೋಗ್ತಾರೆ ಎಲ್ಲಿ ಬರ್ತಾರೆ ಎನ್ನುವುದು ಗೊತ್ತಾಗಲ್ಲ. ಅವರ ಸುತ್ತಾ ಸದಾ ಭದ್ರತಾ ಸಿಬ್ಬಂದಿ ಇರ್ತಾರೆ. ಇದ್ದಕ್ಕಿದಂತೆ ಭೇಟಿ ಮಾಡಬೇಕು ಎಂದರೆ ಸಾಧ್ಯವಾಗದ ಮಾತು. ಮಲೇಷಿಯಾ ಮೂಲದ ಕುಟುಂಬವೊಂದು ರಜನಿಕಾಂತ್ ಭೇಟಿ ಮಾಡಬೇಕು ಎಂದು ಬಯಸಿದೆ. 3 ತಲೆಮಾರುಗಳಿಂದ ನಮ್ಮ ಕುಟುಂಬದವರು ನಿಮ್ಮ ಅಭಿಮಾನಿಗಳು. ನನ್ನ 6 ವರ್ಷದ ಮಗ ಕೂಡ ನಿಮ್ಮ ಅಭಿಮಾನಿ. ಈ ಬಾರಿ ಚೆನ್ನೈಗೆ ಬಂದಾಗ ಅವನನ್ನು ಭೇಟಿ ಮಾಡಿ ಎಂದು ಬಾಲಕನ ತಾಯಿ ಮನವಿ ಮಾಡಿ ಒಂದು ಪತ್ರ ಬರೆದಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮಲೇಷಿಯಾದಲ್ಲಿ ನೆಲೆಸಿರುವ ಪ್ರೇಮಾನಂದ ಹಾಗೂ ವಿಜಯಲಕ್ಷ್ಮಿ ನಮ್ಮ ಇಡೀ ಕುಟುಂಬ ರಜನಿಕಾಂತ್ ಅವರ ದೊಡ್ಡ ಅಭಿಮಾನಿಗಳು. ನಮ್ಮ ಮಗ ಮಾವನ್ ಆನಂದ್ ಪಾಲಿಗೆ ಅವರು ರಜನಿ ತಾತ.. ಅವನು ಯಾವಾಗಲೂ ನಿಮ್ಮ ಬಗ್ಗೆ ಮಾತನಾಡುತ್ತಿರುತ್ತಾನೆ. ಅವನಿಗೆ 3 ವರ್ಷ ವಯಸ್ಸಾಗಿದ್ದಾಗ ನಿಮ್ಮ ಬಗ್ಗೆ ಅಭಿಮಾನ ಶುರುವಾಯಿತು. ಅಂದಿನಿಂದ ಸದಾ ನಿಮ್ಮದೇ ಧ್ಯಾನ. 2003ರಲ್ಲಿ ನಾವು ಭಾರತಕ್ಕೆ ಬಂದಾಗ ಮೊದಲು ಚೆನ್ನೈ ಪೊಯೆಸ್ ಗಾರ್ಡನ್ನಲ್ಲಿರುವ ನಿವಾಸದ ಬಳಿ ಬಂದಿದ್ದೆವು. ಆದರೆ ನಿಮ್ಮ ಭೇಟಿ ಸಾಧ್ಯವಾಗಿರಲಿಲ್ಲ. ಅವತ್ತು ಬಹಳ ಅತ್ತುಬಿಟ್ಟ. ನೀವು ಮನೆಯಲ್ಲಿ ಇಲ್ಲ ಎಂದು ಹೇಳಿ ಮಗನನ್ನು ಸಮಾಧಾನ ಮಾಡಿದ್ದೆವು ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ಬರೆದಿದ್ದಾರೆ.
ಈ ವರ್ಷ ಜೂನ್ ಮೊದಲ ವಾರದಲ್ಲಿ ನಾವು ಭಾರತಕ್ಕೆ ಬರ್ತಿದ್ದೇವೆ. ಚೆನ್ನೈಗೆ ಬರೋಕೆ ತಯಾರಿ ನಡೆಸಿದ್ದೇವೆ. ನನ್ನ ಮಗ ಈಗಾಗಲೇ ರಜನಿ ತಾತಾ ಮನೆಗೆ ಕರ್ಕೊಂಡ್ ಹೋಗಿ, ಭೇಟಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಅವನಿಗೆ ಮನಸ್ಸಿಗೆ ನೋವು ಮಾಡಲು ತಾಯಿಯಾಗಿ ನನಗೆ ಇಷ್ಟವಿಲ್ಲ. ದಯವಿಟ್ಟು ಕೆಲ ನಿಮಿಷಗಳ ಕಾಲ ಅವನನ್ನು ಭೇಟಿ ಆಗಿ ಮಾತನಾಡಿಸಿ. ಅದು ಅವನ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ. ನೀವು ಬಹಳ ಬ್ಯುಸಿ ಎಂದು ಗೊತ್ತು. ನಿಮ್ಮ ಪ್ರೈವೆಸಿಗೆ ನಾವು ತೊಂದರೆ ಕೊಡಲ್ಲ. ಆದ್ರೆ ಒಬ್ಬ ತಾಯಿ ಮಗುವಾಗಿ ಇದು ನನ್ನ ವಿನಮ್ರ ಮನವಿ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ನೆಟ್ಟಿಗರು ವಿಜಯಲಕ್ಷ್ಮಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಖಂಡಿತ ರಜನಿಕಾಂತ್ ಸರ್ ನಿಮ್ಮ ಆಸೆ ಪೂರೈಸುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಜನಿಕಾಂತ್ ಹಾಗೂ ಪುತ್ರಿ ಸೌಂದರ್ಯ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಸೌಂದರ್ಯ ಮೇಡಂ ನೀವಾದರೂ ಆ ಬಾಲಕನ ಆಸೆ ಈಡೇರಿಸಲು ಸಹಾಯ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕಳೆ ವರ್ಷ 'ಕೂಲಿ' ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ರಜನಿಕಾಂತ್ ಇದೀಗ 'ಜೈಲರ್'-2 ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೀತಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. 'ಜೈಲರ್'-2 ಬಳಿಕ ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ತಲೈವಾ ನಟಿಸಬೇಕಿದೆ. ಕಮಲ್ ಜೊತೆ ಒಂದು ಮಲ್ಟಿಸ್ಟಾರರ್ ಸಿನಿಮಾ ಕೂಡ ಘೋಷಣೆಯಾಗಿದೆ. ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications