ಬಿಜೆಪಿ ಫೈರ್ಬ್ರ್ಯಾಂಡ್ ಅಣ್ಣಾಮಲೈ ಬಯೋಪಿಕ್? ಖಡಕ್ IPS ಆಫೀಸರ್ ಆಗಿ ಆ ಹೀರೊ ನಟನೆ
ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದ ಕೆ ಅಣ್ಣಾಮಲೈ ಈಗ ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕೊನೆಯದಾಗಿ ಸೇವೆ ಸಲ್ಲಿಸಿದ್ದ ಅವರು 4 ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದೀಗ ಅಣ್ಣಾಮಲೈ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ.
ಕೆ ಅಣ್ಣಾಮಲೈ ರಾಜೀನಾಮೆ ವಿಚಾರ ಭಾರೀ ಅಚ್ಚರಿಗೆ ಕಾರಣವಾಗಿತ್ತು. ರಾಜಕೀಯರಂಗ ಸೇರಲು ಅವರು ಈ ನಿರ್ಧಾರ ಕೈಗೊಂಡಿದ್ದಾಗ ಆಗ ಸುದ್ದಿಯಾಗಿತ್ತು. ಬಳಿಕ ಅದು ನಿಜವೂ ಆಗಿತ್ತು. ಸದ್ಯ ತಮಿಳುನಾಡಿನ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭೆ ಚುನಾವಣೆಯ ಕಣದಲ್ಲಿದ್ದಾರೆ. 9 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು.

ತಮ್ಮ ಖಡಕ್ ಕಾರ್ಯವೈಖರಿಯಿಂದ ಅಣ್ಣಾಮಲೈ ಕರ್ನಾಟಕ ಪೊಲೀಸ್ನ ಸಿಂಗಂ ಎಂದೇ ಖ್ಯಾತರಾಗಿದ್ದರು. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿದ್ದರು.
ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ 2011ರಲ್ಲಿ ವೃತ್ತಿ ಆರಂಭಿಸಿ ಅಣ್ಣಾಮಲೈ 2013ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಅಲ್ಲಿಂದ ಚಿಕ್ಕಮಗಳೂರು ಎಸ್ಪಿಯಾಗಿ ತಮ್ಮ ಖಡಕ್ ನಿರ್ಧಾರಗಳಿಂದ ಸದ್ದು ಮಾಡಿದ್ದರು. ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಖಡಕ್ ಅಧಿಕಾರಿಯಾಗಿ ಗುರ್ತಿಸಿಕೊಂಡಿದ್ದರು. ಅಲ್ಲಿನ ಜನರ ಪಾಲಿಗೆ 'ಸಿಂಗಂ' ಆಗಿದ್ದರು.
ಬಳಿಕ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. 2018ರ ಅಕ್ಟೋಬರ್ 17ರಿಂದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಅಣ್ಣಾಮಲೈ ಕುರಿತು ತಮಿಳಿನಲ್ಲಿ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ವಿಶಾಲ್ ತೆರೆಮೇಲೆ ಅಣ್ಣಾಮಲೈ ಆಗಿ ನಟಿಸುತ್ತಾರೆ ಎನ್ನಲಾಗ್ತಿದೆ.

ಸದ್ಯ ವಿಶಾಲ್ ನಟನೆಯ 'ರತ್ನಂ' ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗ್ತಿದೆ.
3 ವರ್ಷಗಳ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಪಕ್ಷ ಸೇರಿದ್ದರು. ದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಹಾಗೂ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಎಲ್. ಮುರಗನ್ ಸಮ್ಮುಖದಲ್ಲಿ ಅಣ್ಣಾಮಲೈ ಪಕ್ಷ ಸೇರಿದ್ದರು. ಕೊಯಮತ್ತೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಕಣಕ್ಕಿಳಿದಿದ್ದಾರೆ. ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿ ಫೈರ್ಬ್ರ್ಯಾಂಡ್ ಆಗಿ ಅಣ್ಣಾಮಲೈ ತಮ್ಮ ಆವೇಶಭರಿತ ಭಾಷಣಗಳಿಂದ ಗಮನ ಸೆಳೆಯುತ್ತಿದ್ದಾರೆ. ಆದರೂ ಈ ಬಾರಿ ಕೋಯಮತ್ತೂರು ಕ್ಷೇತ್ರದಿಂದ ಅವರು ಗೆಲ್ಲುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಕೂಡ ಅಣ್ಣಾಮಲೈ ಬಿಜೆಪಿ ಅಭ್ಯರ್ಥಿ ವಿರುದ್ಧ ಚುನಾವಣೆ ಪ್ರಚಾರ ನಡೆಸಿದ್ದರು. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಅಣ್ಣಾಮಲೈ ರೋಡ್ ಶೋ ನಡೆಸಿ ಮತಯಾಚಿಸಿದರು. ಇನ್ನು ನಿಜಕ್ಕೂ ಅಣ್ಣಾಮಲೈ ಬಯೋಪಿಕ್ ಸಿನಿಮಾ ಬರುತ್ತಾ? ಅಥವಾ ಇದು ಬರೀ ಪ್ರಚಾರದ ಗಿಮಿಕ್ಕಾ ಕಾದು ನೋಡಬೇಕಿದೆ.


Click it and Unblock the Notifications










