ಶೇ.100 ಆಸನ ಭರ್ತಿಗೆ ತಮಿಳುನಾಡು ಸರ್ಕಾರದ ಅನುಮತಿ; ವೈದ್ಯರಿಂದ ನಟ ವಿಜಯ್ ಗೆ ಬಹಿರಂಗ ಪತ್ರ
ಕೊರೊನಾ ಕಾರಣದಿಂದ ಚಿತ್ರಮಂದಿರಗಳ ಮೇಲೆ ವಿಧಿಸಲಾಗಿದ್ದ ನಿಯಮವಾಳಿಗಳಲ್ಲಿ ಕೆಲವು ಸಡಿಲಿಕೆ ಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತ್ತು. ಶೇ.50 ಆಸನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ತಮಿಳುನಾಡು ಸರ್ಕಾರ ಶೇ 100 ಆಸನ ಭರ್ತಿಗೆ ಅವಕಾಶ ನೀಡಿದೆ. ಆದರೆ ತಮಿಳುನಾಡು ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರದ ಗೃಹ ಇಲಾಖೆ ಆಕ್ಷೇಪಣೆ ಎತ್ತಿದೆ.
ಚಿತ್ರಮಂದಿರಗಳಲ್ಲಿ ಕೇವಲ 50% ಸೀಟುಗಳಷ್ಟೆ ಭರ್ತಿ ಮಾಡಿ ಸಿನಿಮಾ ಪ್ರದರ್ಶಿಸಬೇಕು ಎಂಬ ನಿಯಮ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಇದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ 100% ಆಸನ ಭರ್ತಿಗೆ ಅವಕಾಶ ನೀಡಿದೆ.
ತಮಿಳು ನಾಡಿನಲ್ಲಿ ಸದ್ಯ ವಿಜಯ್ ಮತ್ತು ಸಿಂಬು ನಟನೆಯ ಸಿನಿಮಾಗಳು ಪೊಂಗಲ್ ಗೆ ರಿಲೀಸ್ ಆಗುತ್ತಿವೆ. ಈ ಸಮಯದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಿದ್ದು ಸಿನಿಮಾ ಮಂದಿಗೆ ಸಂತಸದ ವಿಚಾರವಾಗಿದೆ. ಆದರೀಗ ಈ ನಿರ್ಧಾರಕ್ಕೆ ಅನೇಕರ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ವ್ಯವಹಾರಿಕ ದೃಷ್ಟಿಯಿಂದ ಉತ್ತಮ ನಿರ್ಧಾರವಾದರೂ, ಕೊರೊನಾ ಸಾಂಕ್ರಾಮಿಕ ರೋಗವನ್ನು ಪರಿಗಣಿಸಿದರೆ ಇದು ಒಪ್ಪಿತ ನಿರ್ಧಾರವಲ್ಲ ಎನ್ನುತ್ತಿದ್ದಾರೆ.

ತಮಿಳು ಸರ್ಕಾರದ ಈ ನಿರ್ಧಾರವನ್ನು ಮತ್ತು ವಿಜಯ್ ಹಾಗೂ ಸಿಂಬು ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ವೈದ್ಯರು ಬಹಿರಂಗ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ. ಪುದುಚೇರಿಯ ಅರವಿಂದ್ ಶ್ರೀನಿವಾಸ್ ಎಂಬ ವೈದ್ಯರು ವಿಜಯ್ ಮತ್ತು ಸಿಂಬು ಅವರಿಗೆ ಪತ್ರ ಬರೆದು ಸಾಂಕ್ರಾಮಿಕ ರೋಗ ಇನ್ನು ಮುಗಿದಿಲ್ಲ. ಈ ಸಮಯದಲ್ಲಿ ಇಂತ ನಿರ್ಧಾರ ಯಾಕೆ ತೆಗೆದುಕೊಂಡಿರಿ ಎಂದಿದ್ದಾರೆ.
'ವಿಜಯ್ ಮತ್ತು ಸಿಂಬು ಹಾಗೂ ತಮಿಳುನಾಡಿನ ಗೌರವಾನ್ವಿತ ಸರ್ಕಾರ, ನಾನು ದಣಿದಿದ್ದೇನೆ. ನಾವೆಲ್ಲರೂ ದಣಿದಿದ್ದೇವೆ. ನನ್ನಂತಹ ಸಾವಿರಾರು ವೈದ್ಯರು ದಣಿದಿದ್ದಾರೆ. ಆರೋಗ್ಯ ಕಾರ್ಯಕರ್ತರು, ಪೊಲೀಸರು ಎಲ್ಲರೂ ದಣಿದಿದ್ದಾರೆ. ನಾವು ತುಂಬಾ ಶ್ರಮಿಸಿದ್ದೇವೆ. ನನ್ನ ಕೆಲಸವನ್ನು ನಾನು ವೈಭವೀಕರಿಸುತ್ತಿಲ್ಲ. ನೋಡುಗರ ದೃಷ್ಟಿಗೆ ಇದೇನು ಗ್ರೇಟ್ ಅಲ್ಲ ಅನಿಸಿರಬಹುದು. ನಮ್ಮ ಮುಂದೆ ಇಲ್ಲಿ ಕ್ಯಾಮರಾಗಳಿಲ್ಲ. ನಾವು ಸ್ಟಂಟ್ ಮಾಡುವುದಿಲ್ಲ. ನಾವು ವೀರರಲ್ಲ. ಆದರೆ ನಾವು ಉಸಿರಾಡಲು ಅರ್ಹರು. ಇನ್ನೊಬ್ಬರ ಸ್ವಾರ್ಥ ಮತ್ತು ದುರಾಸೆಗೆ ಬಲಿಯಾಗಲು ಬಯಸುವುದಿಲ್ಲ' ಎಂದಿದ್ದಾರೆ.
ಇನ್ನು ಸಾಂಕ್ರಾಮಿಕ ರೋಗ ಮುಗಿದಿಲ್ಲ. ಇನ್ನು ಜನ ಸಾಯುತ್ತಿದ್ದಾರೆ. ಶೇ.100ಅನುಮತಿ ನೀಡಿರುವುದು ಆತ್ಮಹತ್ಯೆ ನಿರ್ಧಾರವಿದು' ಎಂದು ಸಿನಿಮಾತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅರವಿಂದ್ ಶ್ರೀನಿವಾಸ್ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಕೇಂದ್ರ ಗೃಹ ಇಲಾಖೆ ಆಕ್ಷೇಪ ಎತ್ತಿದ ಹಿನ್ನಲೆ ತಮಿಳುನಾಡಿ ಸರ್ಕಾರ ಯಾವ ನಿರ್ಧಾರಕ್ಕೆ ಬರಲಿದೆ ಇನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











