CSK vs SRH: ಐಪಿಎಲ್ ಪಂದ್ಯ ವೀಕ್ಷಿಸಲು ಬಂದ ಅಜಿತ್; ಫ್ಯಾನ್ಸ್ ಕನಸು ನನಸು
ಐಪಿಎಲ್ 18ನೇ ಸೀಸನ್ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದ ಅದ್ಭುತ ಪ್ರದರ್ಶನ ತೋರುತ್ತಿದೆ. ಆದರೆ 5 ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆ ಪ್ರದರ್ಶನ ನೀರಸವಾಗಿದೆ. ಚೆನ್ನೈ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಸಿಎಸ್ಕೆ vs ಎಸ್ಆರ್ಹೆಚ್ ಪಂದ್ಯವನ್ನು ತಮಿಳು ನಟ ಅಜಿತ್ ವೀಕ್ಷಿಸಿದರು.
ಕಾಲಿವುಡ್ ನಟ ಅಜಿತ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಸಿನಿಮಾ ಚಿತ್ರೀಕರಣ ಬಿಟ್ಟರೆ ಪ್ರಚಾರಕ್ಕೆ ಕೂಡ ಬರಲ್ಲ. ಇನ್ನು ಕಾರ್ ರೇಸ್, ಬೈಕ್ ರೈಡ್ ಅಂತ ವಿಭಿನ್ನ ಹವ್ಯಾಸಗಳನ್ನು ಅವರು ರೂಢಿಸಿಕೊಂಡಿದ್ದಾರೆ. ಇದ್ದಕ್ಕಿಂದಂತೆ ಅಜಿತ್ ಪತ್ನಿ ಹಾಗೂ ಮಗನ ಸಮೇತ ಐಪಿಎಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದು ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು.

ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಏಪ್ರಿಲ್ 10ಕ್ಕೆ ತೆರೆಗೆ ಬಂದ ಸಿನಿಮಾ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಅಜಿತ್ ವೃತ್ತಿ ಜೀವನದಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಎರಡು ತಿಂಗಳ ಹಿಂದೆ ಅವರು ನಟಿಸಿದ್ದ 'ವಿಡಾಮುಯರ್ಚಿ' ಸಿನಿಮಾ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.
ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಜೊತೆ ಕೂಡ ಅಜಿತ್ ಹಾಗೂ ಪತ್ನಿ ಶಾಲಿನಿ ಸಿಎಸ್ಕೆ vs ಎಸ್ಆರ್ಹೆಚ್ ಪಂದ್ಯ ವೀಕ್ಷಿಸಿದರು. ಮತ್ತೊಬ್ಬ ನಟ ಶಿವಕಾರ್ತಿಕೇಯನ್ ಕೂಡ ಪತ್ನಿ ಸಮೇತರಾಗಿ ಕ್ರೀಡಾಂಗಣಕ್ಕೆ ಬಂದಿದ್ದರು. ಅವರು ಕೂಡ ಅಜಿತ್ ದಂಪತಿ ಜೊತೆ ಕೂತು ಪಂದ್ಯ ವೀಕ್ಷಿಸಿದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ಗಳ ಗೆಲುವು ದಾಖಲಿಸಿತು.
ಚೆನ್ನೈ ಮತ್ತೊಂದು ಪಂದ್ಯ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿಯುವಂತಾಗಿದೆ. ಈ ಮೂಲಕ ಐಪಿಎಲ್ 2025 ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೇರುವ ಸಿಎಸ್ಕೆ ಕನಸು ಬಹುತೇಖ ನುಚ್ಚು ನೂರಾಗಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಎಸ್ಆರ್ಹೆಚ್ ತಂಡ 154 ರನ್ಗಳಿಗೆ ಸಿಎಸ್ಕೆ ಬ್ಯಾಟ್ಸಮನ್ಗಳನ್ನು ಕಟ್ಟಿ ಹಾಕಿದ್ದರು. ಅಂತಿಮವಾಗಿ 19.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಸಾಧಾರಣ ಮೊತ್ತ ಕಲೆ ಹಾಕಿತ್ತು.
155 ರನ್ ಟಾರ್ಗೆಟ್ ಬೆನ್ನತ್ತಿದ ಎಸ್ಆರ್ಹೆಚ್ ತಂಡ ಇನ್ನು 8 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಧೋನಿ ಇವತ್ತಿನ ಪಂದ್ಯದಲ್ಲಿ ಕೂಡ ನಿರಾಸೆ ಮೂಡಿಸಿದರು. ಚೆನ್ನೈ ಪರ ಆಯುಷ್ ಮಹಾತ್ರೆ 30 ರನ್, ರವೀಂದ್ರ ಜಡೇಜಾ 21 ರನ್, ಡೆವ್ಲಾಟ್ ಬ್ರೆವಿಸ್ 42 ರನ್ ಹಾಗೂ ದೀಪಕ್ ಹೂಡಾ 22 ರನ್ ಗಳಿಸಿ ತಂಡಕ್ಕೆ ಆಸರೆ ಆಗಿದ್ದರು.
ಭರವಸೆಯಿಂದಲೇ ಬ್ಯಾಟಿಂಗ್ ಆರಂಭಿಸಿದ್ದ ಹೈದರಾಬಾದ್ ತಂಡ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡಿತ್ತು. ಬಳಿಕ ಇಶಾನ್ ಕಿಶನ್(44 ರನ್) ಹಾಗೂ ಕಾಮಿಂಡು ಮೆಂಡಿಸ್(32 ರನ್) ಉತ್ತಮ ರನ್ ನೆರವಿನಿಂದ ತಂಡ ಗೆಲುವಿನ ನಗೆ ಬೀರಿತು. ನಟ ಅಜಿತ್ ಅವರನ್ನು ಅಭಿಮಾನಿಗಳು 'ಥಲಾ'(ನಾಯಕ) ಎಂದು ಪ್ರೀತಿಯಿಂದ ಕರೆಯುತ್ತಾರೆ. ಆದರೆ ನನಗೆ ಯಾವುದೇ ಬಿರುದು ಬೇಡ ಎಂದು ಅಜಿತ್ ಮನವಿ ಮಾಡಿದ್ದಾರೆ.
ಇನ್ನು ಸಿಎಸ್ಕೆ ತಂಡದ ಆಟಗಾರ ಧೋನಿ ಅವರನ್ನು ಕೂಡ ಅಭಿಮಾಗಳು 'ಥಲಾ' ಎಂದು ಸಂಬೋಧಿಸುತ್ತಾರೆ. ಇವತ್ತು ಕ್ರಿಕೆಟ್ ಥಲಾ ಆಟ ನೋಡಲು ಸಿನಿಮಾ ಥಲಾ ಬಂದಿದ್ದು ಬಂದಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು. ತವರಿನಲ್ಲೇ ಸಿಎಸ್ಕೆ ತಂಡ ಆರ್ಸಿಬಿ ವಿರುದ್ಧ ಸೋತಿತ್ತು. ಮೇ 3ರಂದು ಬೆಂಗಳೂರಿನಲ್ಲಿ ಬಂದು ಆರ್ಸಿಬಿ ತಂಡವನ್ನು ಎದುರಿಸಲಿದೆ. ಆ ಪಂದ್ಯ ಬಹಳ ಕುತೂಹಲ ಮೂಡಿಸಿದೆ.


Click it and Unblock the Notifications











