ತಮಿಳು ನಟ ಅಜಿತ್ ಕುಮಾರ್ ಮನೆಗೆ ಬಾಂಬ್ ಬೆದರಿಕೆ ಕರೆ
ತಮಿಳು ನಟ ಅಜಿತ್ ಕುಮಾರ್ ಅವರ ಇಂಜಂಬಕ್ಕಂ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿರುವುದು ವರದಿಯಾಗಿದೆ. ಸೋಮವಾರ (ಮೇ 31) ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿ ಅಜಿತ್ ಮನೆಯಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಅನಾಮಿಕ ಕರೆ ಬಂದಿದೆ.
ಅನಾಮಿಕ ಕರೆಯಿಂದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಅಜಿತ್ ಮನೆಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಮನೆಯೊಳಗೆ ಹಾಗೂ ಮನೆಯ ಸುತ್ತಮುತ್ತ ಸಂಪೂರ್ಣವಾಗಿ ಸ್ಥಳ ಪರಿಶೀಲನೆ ಮಾಡಿದ ಬಳಿಕ ಇದೊಂದು ನಕಲಿ ಕರೆ ಎಂದು ನಿರ್ಧರಿಸಲಾಗಿದೆ.
ಅಜಿತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಸಮಯ ಬಿಗು ವಾತಾವರಣ ಸೃಷ್ಟಿಯಾಗಿತ್ತು. ಅಭಿಮಾನಿಗಳಲ್ಲಿ ಆತಂಕವೂ ಹೆಚ್ಚಾಗಿತ್ತು. ನಂತರ ಇದು ಹುಸಿ ಬಾಂಬ್ ಕರೆ ಎಂದು ತಿಳಿದ ಮೇಲೆ ಫ್ಯಾನ್ಸ್ ಸಮಾಧಾನಗೊಂಡರು.

ಅಂದ್ಹಾಗೆ, ಅಜಿತ್ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯು ಇಂತಹ ಘಟನೆಗಳು ವರದಿಯಾಗಿದೆ. 2014ರಲ್ಲಿ ಹೀಗೆ ಅಜಿತ್ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಫೋನ್ ಕಾಲ್ ಬಂದಿತ್ತು. ಆಮೇಲೆ ಅದು ನಕಲಿ ಕರೆ ಎಂದು ತಿಳಿಯಿತು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಮಿಳು ನಟ ಧನುಶ್ ಮತ್ತು ನಟ-ರಾಜಕಾರಣಿ ವಿಜಯ್ ಕಾಂತ್ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆ ಬಂದಿತ್ತು. ಅದಕ್ಕೂ ಮುಂಚೆ ಸೂಪರ್ ಸ್ಟಾರ್ ರಜನಿಕಾಂತ್, ತಮಿಳು ನಟ ಸೂರ್ಯ, ವಿಜಯ್ ಮನೆಗೂ ಹುಸಿ ಬಾಂಬ್ ಕರೆ ಬಂದಿದ್ದವು.
ಅಜಿತ್ ನಟಿಸಿರುವ 'ವಾಲಿಮೈ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೋವಿಡ್ ಕಾರಣದಿಂದ ರಿಲೀಸ್ ಬಗ್ಗೆ ಪ್ರಕಟಣೆಯಾಗಿಲ್ಲ. ಕೊನೆಯದಾಗಿ 2019ರಲ್ಲಿ 'ನೇರ್ಕೊಂಡ ಪಾರ್ವೈ' ಸಿನಿಮಾ ತೆರೆಕಂಡಿತ್ತು.


Click it and Unblock the Notifications











