IPL 2025: ಇದೇನು ಕ್ರಿಕೆಟ್ಟಾ ಸರ್ಕಸ್ಸಾ.. ಕರ್ಮ.. ಧೋನಿ ವಿರುದ್ಧ ಖ್ಯಾತ ನಟ ಗರಂ
ಐಪಿಎಲ್ 18ನೇ ಸೀಸನ್ ಕಾವೇರುತ್ತಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕವಾಗುತ್ತದೆ. ಆದರೆ ಕೆಲವು ಪಂದ್ಯಗಳು ನಿರಾಸೆ ಮೂಡಿಸುತ್ತಿದೆ. ಒಂದು ತಂಡದ ಕೈ ಮೇಲಾಗಿ ಎದುರಾಳಿ ತಂಡದ ಅಭಿಮಾನಿಗಳು ಬೇಸರಗೊಳ್ಳುತ್ತಿದ್ದಾರೆ. ಈ ಟೂರ್ನಿಯಲ್ಲಿ ಸಿಎಸ್ಕೆ ತಂಡದ ಪ್ರದರ್ಶನ ಬಹಳ ಕಳಪೆಯಾಗಿದೆ.
ಸತತ 5 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಂಡಿದೆ. ಒಂದ್ಕಾಲದಲ್ಲಿ ಸಿಎಸ್ಕೆ ಅದ್ಭುತ ಪ್ರದರ್ಶನ ನೋಡಿದ್ದ ಅಭಿಮಾನಿಗಳು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಸ್ಟಾರ್ ಪ್ಲೇಯರ್ ಧೋನಿ ಆಟದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನಕ್ಕೆ ಕಾರಣ ಧೋನಿ ಎಂದು ಸಾಕಷ್ಟು ಟೀಕೆ, ಟ್ರೋಲ್ ಎದುರಾಗಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದಕ್ಕೆ ಸಂಬಂಧಿಸಿದ ವೀಡಿಯೋ, ಪೋಸ್ಟ್, ಮೀಮ್ಸ್ ಹರಿದಾಡುತ್ತಿದೆ. ಧೋನಿ ಬ್ಯಾಟಿಂಗ್ ಮಾಡಲು ಹಿಂಜರಿಯುತ್ತಿದ್ದಾರೆ. ಕೊನೆ ಹಂತದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಾರೆ. ಕೊನೆಗೆ ಒಂದೆರಡು ಸಿಕ್ಸ್ ಬಾರಿಸಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಪಂದ್ಯ ಗೆಲ್ಲಿಸಬೇಕು ಎಂದು ಅವರು ಆಡುವಂತೆ ಕಾಣುತ್ತಿಲ್ಲ ಎಂದು ಆಕ್ರೋಶ ಹೆಚ್ಚಾಗುತ್ತಿದೆ.
ಕಳೆದ ಎರಡು ವರ್ಷದಿಂದ ಸಿಎಸ್ಕೆ ತಂಡದ ನಾಯಕತ್ವದಿಂದ ಧೋನಿ ದೂರ ಉಳಿಸಿದ್ದರು. ಆದರೆ ನಿನ್ನೆ(ಏಪ್ರಿಲ್ 11) ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ದಿಢೀರನೆ ನಾಯಕತ್ವ ವಹಿಸಿಕೊಂಡಿದ್ದರು. ಆದರೂ ತಂಡ ಮಾತ್ರ ಗೆಲ್ಲಲೇ ಇಲ್ಲ. ಧೋನಿ ಕೊನೆ ಹಂತದಲ್ಲಿ ಬ್ಯಾಟಿಂಗ್ಗೆ ಇಳಿದು ಕೇವಲ 1 ರನ್ ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ಹಾಗಾಗಿ ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಟ ವಿಷ್ಣು ವಿಶಾಲ್ ಟ್ವೀಟ್ ಮಾಡಿ "ಇಷ್ಟು ಕೆಳ ಹಂತದಲ್ಲಿ ಯಾಕೆ ಬ್ಯಾಟ್ ಮಾಡಲು ಬರಬೇಕು. ಯಾರಾದರೂ ಗೆಲ್ಲಬಾರದು ಎಂದು ಆಟ ಆಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. "ಇದು ಕ್ರಿಕೆಟ್ ತರ ಕಾಣ್ತಿಲ್ಲ, ಸರ್ಕಸ್ ತರ ಇದೆ. ಆಟಕ್ಕಿಂತ ದೊಡ್ಡವರು ಇಲ್ಲಿ ಯಾರು ಇಲ್ಲ" ಎಂದು ಕುಟುಕಿದ್ದಾರೆ. ಸಾಕಷ್ಟು ಜನ ವಿಷ್ಣು ವಿಶಾಲ್ ಟ್ವೀಟ್ಗೆ ಬೆಂಬಲ ಸೂಚಿಸಿದ್ದಾರೆ. ರಿಪ್ಲೇ ಮಾಡಿ ಪ್ರತಿಕ್ರಿಯಿಸಿದ್ದಾರೆ.
"9ನೇ ಸ್ಥಾನದಲ್ಲಿ ಧೋನಿ ಬ್ಯಾಟಿಂಗ್ಗೆ ಬಂದಿದ್ದು ದಾರುಣ. ನಿವೃತ್ತಿ ಹೊಂದುವುದು ಉತ್ತಮ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಬಹಳ ಧೈರ್ಯವಾಗಿ ಸತ್ಯ ಮಾತನಾಡಿದ್ದೀರಿ, ವಿಷ್ಣು ವಿಶಾಲ್ ನಿಮಗೆ ನನ್ನ ಗೌರವ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
"ಈ ವ್ಯಕ್ತಿ ಗಳಿಸಿದ್ದ ಎಲ್ಲಾ ಖ್ಯಾತಿ ಹಾಗೂ ಗೌರವ ಬಹಳ ಬೇಗ ಕ್ಷೀಣಿಸುತ್ತಿದೆ. ಬಹುತೇಕ ಕ್ರೀಡಾಪಟುಗಳು ತಮ್ಮ ಖ್ಯಾತಿ ಮತ್ತು ಘನತೆಯನ್ನು ಜೀವನಪರ್ಯಂತ ಕಾಪಾಡಿಕೊಳ್ಳಲು ಉತ್ತುಂಗದಲ್ಲಿದ್ದಾಗ ಆಟದಿಂದ ನಿರ್ಗಮಿಸುತ್ತಾರೆ. ಜನರು ನಿಮ್ಮ ಕೊನೆಯ ದಿನಗಳನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ, ಥಲಾ ಜೋಕರ್ ರೀತಿ ನಿರ್ಗಮಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಐಪಿಎಲ್ 18ನೇ ಸೀಸನ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ಗಳಿಂದ ಗೆದ್ದಿತ್ತು. ಬಳಿಕ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ 50 ರನ್ಗಳ ಅಂತರದಲ್ಲಿ ಸೋತಿತ್ತು. ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳನ್ನು ಬದ್ಧ ವೈರಿಗಳಂತೆ ಬಿಂಬಿಸಲಾಗುತ್ತದೆ. ಆ ಪಂದ್ಯದಲ್ಲಿ ಚೆನ್ನೈ ತಂಡದ ಪ್ರದರ್ಶನ ಭಾರೀ ಟೀಕೆಗೆ ಗುರಿಯಾಗಿತ್ತು. ಸಿಕ್ಕಾಪಟ್ಟೆ ಟ್ರೋಲ್ ಎದುರಿಸವಂತಾಗಿತ್ತು.
ಬಳಿಕ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರಾಭವ ಅನುಭವಿಸಿದೆ. ಸಿಎಸ್ಕೆ ತಂಡದ ಆಟಗಾರರ ಆಯ್ಕೆಯೇ ಸರಿಯಿಲ್ಲ, ಧೋನಿ ಅವರನ್ನು ಇನ್ನು ತಂಡದಲ್ಲಿ ಉಳಿಸಿಕೊಂಡಿರುವುದು ಸರಿಯಲ್ಲ. ಧೋನಿಗೆ ವಯಸ್ಸಾಯಿತು, ಇನ್ನಾದರೂ ನಿವೃತ್ತಿ ಘೋಷಿಸಬೇಕು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಧೋನಿ ಆಟದ ಬಗ್ಗೆ ಕಟು ಟೀಕೆ ಹೆಚ್ಚಾಗುತ್ತಿದೆ.


Click it and Unblock the Notifications











