ನಟ ಕ್ಯಾಪ್ಟನ್ ವಿಜಯಕಾಂತ್ ಆರೋಗ್ಯದ ಬಗ್ಗೆ ವದಂತಿಗಳನ್ನು ನಂಬಬೇಡಿ: ಹಿರಿಯ ನಟನ ಮನವಿ
ತಮಿಳು ಸಿನಿರಂಗದ ಖ್ಯಾತ ನಟ ಮತ್ತು ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಆರೋಗ್ಯದ ವಿಷಯ ಹಲವು ದಿನಗಳಿಂದ ಚರ್ಚೆಯ ವಿಷಯವಾಗಿದೆ. ಅವರ ಅನಾರೋಗ್ಯದ ಸುತ್ತ ವದಂತಿಗಳು ಹಬ್ಬುತ್ತಿವೆ. ಅವರನ್ನು ಆಕ್ಸಿಜನ್ ಸಪೋರ್ಟ್ನಲ್ಲಿ ಇಡಲಾಗಿದೆ. ಅವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿಗಳು ಹರಡುತ್ತಿದ್ದು, ಹಿರಿಯ ನಟ ನಾಸರ್ ಇವುಗಳನ್ನು ತಳ್ಳಿಹಾಕಿದ್ದಾರೆ.
ಕ್ಯಾಪ್ಟನ್ ವಿಜಯಕಾಂತ್ ಎಂದರೇ ಖ್ಯಾತರಾಗಿರುವ ವಿಜಯಕಾಂತ್ ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ನಟ ಸುಮಾರು ಐದು ದಶಕಗಳಿಂದ ಚಲನಚಿತ್ರೋದ್ಯಮದ ಸಕ್ರಿಯ ಭಾಗವಾಗಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಉತ್ತಮ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ. ತಮಿಳುನಾಡಿನ ವಿಧಾನಸಭೆಯಲ್ಲಿ 2011 ರಿಂದ 2016 ರವರೆಗೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಕೆಮ್ಮು ಮತ್ತು ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲು
ನವೆಂಬರ್ 20 ರಂದು 71 ವರ್ಷದ ನಟ ವಿಜಯಕಾಂತ್ ಅವರು ನಿರಂತರ ಕೆಮ್ಮು ಮತ್ತು ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಶ್ವಾಸಕೋಶದ ಬೆಂಬಲವನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಇತ್ತೀಚಿನ ವರದಿಯಲ್ಲಿ ನಾಡಿಗರ್ ಸಂಗಮ್ (ತಮಿಳು ನಟರ ಒಕ್ಕೂಟ) ಅಧ್ಯಕ್ಷರಾಗಿರುವ ಹಿರಿಯ ನಟ ನಾಸರ್, ಸಂಘದ ಕೆಲವು ಹಿರಿಯ ಸದಸ್ಯರೊಂದಿಗೆ ಆಸ್ಪತ್ರೆಗೆ ಭೇಟಿ ಹೋಗಿ ನಟ ವಿಜಯಕಾಂತ್ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ವಿಜಯಕಾಂತ್ ಅವರ ಆರೋಗ್ಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವದಂತಿಗಳನ್ನು ನಂಬಬೇಡಿ: ನಟ ನಾಸರ್ ವಿನಂತಿ
ವಿಜಯಕಾಂತ್ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಟ ನಾಸರ್, ವಿಜಯಕಾಂತ್ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಟನ ಆರೋಗ್ಯದ ಬಗ್ಗೆ ಪ್ರಮುಖ ವೈದ್ಯರೊಂದಿಗೆ ಮಾತನಾಡಿರುವುದಾಗಿಯೂ ಮಾಹಿತಿ ನೀಡಿದ್ದರು.
ಇದರ ಜೊತೆಗೆ ತಾವು ವೈದ್ಯಕೀಯ ಸಿಬ್ಬಂದಿ ಮತ್ತು ವಿಜಯಕಾಂತ್ ಅವರ ಕುಟುಂಬದೊಂದಿಗೆ ಮಾತ್ರ ಮಾತನಾಡಿರುವುದಾಗಿಯೂ, ಸೋಂಕಿನ ಅಪಾಯವನ್ನು ತಪ್ಪಿಸಲು ವಿಜಯಕಾಂತ್ ದಾಖಲಾಗಿರುವ ಐಸಿಯುಗೆ ಭೇಟಿ ನೀಡಲಿಲ್ಲ ಎಂದು ನಾಸರ್ ತಿಳಿಸಿದ್ದಾರೆ.
ಕ್ಯಾಪ್ಟನ್ ವಿಜಯಕಾಂತ್ ಮತ್ತು ಸಿನಿಮಾರಂಗ
ಕ್ಯಾಪ್ಟನ್ ವಿಜಯಕಾಂತ್ ಅವರು 1979 ರಲ್ಲಿ 'ಇನಿಕ್ಕುಂ ಇಳಮೈ' ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ' ಸೆಂಟೂರ ಪೂವೆ' ಚಲನಚಿತ್ರಕ್ಕಾಗಿ 1988 ರಲ್ಲಿ ಅತ್ಯುತ್ತಮ ನಟ ಎಂದು ತಮಿಳುನಾಡು ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. 2015 ರ ಸಗಪ್ತಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.
ಕ್ಯಾಪ್ಟನ್ ವಿಜಯಕಾಂತ್ ಮತ್ತು ರಾಜಕೀಯ
ನಟನೆಯ ಹೊರತಾಗಿ, ವಿಜಯಕಾಂತ್ ಅವರು ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡವರು. 2005 ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಎಂಬ ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು. 2006ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದೇ ಒಂದು ಸ್ಥಾನ ಗೆದ್ದಿದ್ದರು. 2011 ರಲ್ಲಿ, ಪಕ್ಷವು ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ನಟ ಚುನಾವಣೆಯಲ್ಲಿ ಗೆದ್ದು ಮುಂದಿನ ಐದು ವರ್ಷಗಳ ಕಾಲ (2011 ರಿಂದ 2016) ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.


Click it and Unblock the Notifications










