ರಜನಿಗೆ ಲಾಭಕ್ಕಷ್ಟೇ ಕರ್ನಾಟಕ ಬೇಕು, ಇಂಥವರ ಸಿನಿಮಾ ಏಕೆ ನೋಡ್ಬೇಕು?
ವಿಷ್ಣುವಿನ ರೀತಿ ದಶಾವತಾರ, ಅವಧೂತರಂತೆ ಕೆಲವು ಪವಾಡಗಳು ಇವೆಲ್ಲದರ ಕಥೆಗಳನ್ನು ಈ ವರೆಗೆ ಹೊಸೆದಿಲ್ಲ ಅನ್ನೋದನ್ನು ಬಿಟ್ಟರೆ ರಜನೀಕಾಂತ್ ಬಗ್ಗೆ ಏನು ಹೇಳದೆ ಬಿಡಲಾಗಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಾನು ರಜನೀಕಾಂತ್ ಮೊದಲ ಸಿನಿಮಾ ನೋಡಿದಾಗ ಆರನೇ ಕ್ಲಾಸ್ ಓದ್ತಿದ್ದೆ. ಆ ನಂತರ ಬೇಕಾದಷ್ಟು ಸಿನಿಮಾ ರಜನಿಯದ್ದು ನೋಡಿದ್ದೀನಿ.
ಪಾತ್ರದ ಹೆಸರುಗಳಷ್ಟೇ ಬದಲಾಗ್ತಿದ್ದವು ಬಿಟ್ಟರೆ ಕತೆಗಳೆಲ್ಲ ಸೇಮ್ ಟು ಸೇಮ್ ಒಂದೇ ಥರ ಇರ್ತಿದ್ದವು. ಆರಂಭದಲ್ಲಿ ಶ್ರೀಮಂತಿಕೆ- ಮಧ್ಯದಲ್ಲಿ ಬಡತನ-ಕೊನೆಯಲ್ಲಿ ಶ್ರೀಮಂತಿಕೆ, ಅಥವಾ ಈ ಮಿಶ್ರಣದಲ್ಲಿ ಚೂರು ಹೆಚ್ಚು ಕಡಿಮೆ ಇರುವಂಥ ಕಥೆ, ದ್ವೇಷ ಸಾಧನೆ ಬಿಟ್ಟರೆ ಆಚೀಚೆ ಹೋಗದ ರಜನೀಕಾಂತ್ ಅದ್ಯಾವಾಗ ಬಾಬಾ ಸಿನಿಮಾ ಮಾಡಿದರೋ ಅಲ್ಲಿಗೆ ಪೂರ್ತಿ ಬದಲಾಗಿಬಿಟ್ಟರು.
ಏನೋ ಅಧ್ಯಾತ್ಮ ಅಂತಾರೆ, ಕುಡಿತ- ಸಿಗರೇಟು, ಮಾದಕವಾದ ಹೀರೋಯಿನ್ ಯಾವುದಕ್ಕೂ ಕೊರತೆ ಇರಲ್ಲ. ಅವರ ವ್ಯಕ್ತಿತ್ವದ ಬಗ್ಗೆ ಮೂಡುವ ಅನುಮಾನಗಳೇ ಸಿನಿಮಾಗಳ ಬಗ್ಗೆಯೂ ಮುಂದುವರಿಯುತ್ತವೆ. ಇನ್ನು ಅವರ ಕಾಲಾ ಸಿನಿಮಾಗೆ ಕರ್ನಾಟಕದಲ್ಲಿ ತಡೆಯೇ ಮಾಡಬಾರದಿತ್ತು. ಹೇಗಿದ್ದರೂ ಮೂರು ದಿನ ಆದ ನಂತರ ಜನರೇ ಚಿತ್ರಮಂದಿರದ ಕಡೆ ಹೋಗ್ತಿರಲಿಲ್ಲ: ಅಷ್ಟು ಸುಮಾರಾಗಿದೆ ಸಿನಿಮಾ.

ಸಿನಿಮಾ ಓಡಲಿಲ್ಲ ಅನ್ನೋಕೆ ಕಾರಣ ಸಿಕ್ಕಿತು
ಈಗ, ಕರ್ನಾಟಕದಲ್ಲಿ ಕಾವೇರಿ ಗಲಾಟೆಯಿಂದ ಕಾಲಾ ಸಿನಿಮಾ ಓಡಲಿಲ್ಲ ಅಂತ ಹೇಳಿಕೊಳ್ಳುವುದಕ್ಕೆ ರಜನೀಕಾಂತ್ ಗೆ ಕಾರಣವೊಂದು ಸಿಕ್ಕಂತೆ ಆಗಿಹೋಯಿತು. ಅವರೊಬ್ಬ ನಟ ಅನ್ನೋದರ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಹಾಗಿಲ್ಲದಿದ್ದರೆ ಬಾಲಚಂದರ್ ಅಂಥ ನಿರ್ದೇಶಕರ ಜತೆ ಕೆಲಸ ಮಾಡುವುದಕ್ಕೆ ಆಗ್ತಿತ್ತಾ? ಆದರೆ ಮಹಾನ್ ಕಲಾವಿದರಾ ಅಂದರೆ, ಅದಕ್ಕೆ ಬಲ್ಲವರೇ ಉತ್ತರಿಸಬೇಕು. ಚೌಕಟ್ಟಿನೊಳಗಿನ ಅಂದರೆ ಒಂದು ನಿರ್ದಿಷ್ಟ ಫ್ರೇಮ್ ನೊಳಗೆ ಚೆನ್ನಾಗಿ ಒಪ್ಪುವ ರಜನೀಕಾಂತ್ ಅದರಾಚೆಗೆ ಉಹುಂ, ಏನು ಮಾಡಿದರೂ ಸಹಿಸಲು ಸಾಧ್ಯವಿಲ್ಲ.

ಅನುಕೂಲಸಿಂಧು ಕನ್ನಡ ಪ್ರೀತಿ
ಒಬ್ಬ ನಟರಾಗಿ ರಜನೀಕಾಂತ್ ಹೇಳಿಕೊಳ್ಳುವುದಕ್ಕೆ ಸಾಕಷ್ಟು ಸಿನಿಮಾ ಸಿಗಬಹುದು. ಅದ್ಭುತ ಕಲಾವಿದ ಎಂದು ಸಾಬೀತು ಮಾಡುವುದಕ್ಕೆ ಯಾವ ಸಿನಿಮಾ ಇದೆ? ಇದರ ಜತೆಗೆ ಕರ್ನಾಟಕದಲ್ಲಿ ಅವರು ಹುಟ್ಟಿದ್ದು ಎಂಬ ವಿಚಾರವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ತಮಗೋ ಅಥವಾ ತಮ್ಮ ಅಳಿಯನಿಗೋ ರೀಮೇಕ್ ಆಗಬಹುದು ಎನಿಸುವಂಥ ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಪ್ರೀತಿ ಮೆರೆದರೆ ವಿನಾ ಅಥವಾ ತಮಗೆ ಅನುಕೂಲ ಆಗುವಂಥ ನಿರ್ಮಾಣ ಸಂಸ್ಥೆ ಜತೆಗೆ ಸಂಬಂಧ ಚೆನ್ನಾಗಿಟ್ಟುಕೊಂಡರೆ ವಿನಾ ಬೆಟ್ಟದ ಜೀವದಂಥ ಸಿನಿಮಾ ನೋಡಿ, ಮೆಚ್ಚಿ ಪ್ರೋತ್ಸಾಹಿಸಿದ ವ್ಯಕ್ತಿ ಅವರೇನಲ್ಲ.

ಸಿನಿಮಾ ಬಿಡುಗಡೆ ಆಗಲಿ, ನೋಡದಿದ್ದರಾಯಿತು
ಕಮರ್ಷಿಯಲ್ ಸೂತ್ರಗಳಿರುವ ಸಿನಿಮಾದೊಳಗೆ ಟ್ವೆಂಟಿ-ಟ್ವೆಂಟಿ ಮ್ಯಾಚ್ ನಂತೆ ರೋಚಕತೆ ತರುವ ರಜನೀಕಾಂತ್ ಗೆ ದೊಡ್ಡ ಉಪದೇಶದ ಮಾತುಗಳಿರುವ ಸಿನಿಮಾ ಸರಿಹೊಂದುವುದಿಲ್ಲ ಅನ್ನೋದಿಕ್ಕೆ ಕಾಲಾ ಸಿನಿಮಾ ಮತ್ತೊಂದು ಸೇರ್ಪಡೆ. ಪಾಪ, ನಿರ್ದೇಶಕ ರಂಜಿತ್ ರ ಬಹಳ ವರ್ಷಗಳು ಹಾಳಾದವು ಅಂತ ಬೇಸರ ಆಗುತ್ತದೆ. ಕಾವೇರಿ ವಿಚಾರ ಬಂದಾಗ ತಮಿಳುನಾಡು ಪರ ಮಾತನಾಡಲೇಬೇಕಾದದ್ದು ರಜನೀಕಾಂತ್ ಪಾಲಿಗೆ ಬ್ರೆಡ್- ಬಟರ್. ಇಲ್ಲದಿದ್ದರೆ ರಜನೀ ಕರ್ನಾಟಕದ ಪರ ಅನ್ನೋ ಭಾವನೆ ಬಂದುಬಿಡುತ್ತದೆ ಎಂಬ ಕಾರಣಕ್ಕೆ ತನ್ನ ನಿಷ್ಠೆಯನ್ನು ಪ್ರದರ್ಶಿಸಲೇಬೇಕು. ಹಾಗೆಯೇ ಒಂದು ತಮಿಳು ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಂತೆ ತಡೆಯುವುದು ಕೋರ್ಟ್ ಗೆ ಸಂಬಂಧಿಸಿದ ವಿಚಾರ ಆಗುತ್ತದೆ. ಆದ್ದರಿಂದ ಸಿನಿಮಾ ನೋಡದೆ ಉಳಿದುಬಿಟ್ಟರೆ ಆಯಿತು.

ಕನ್ನಡದ ನಿರ್ಮಾಪಕರೇ ರಜನಿ ಬೆನ್ನಿಗೆ ನಿಲ್ತಾರೆ
ಪ್ರತಿ ಸಲ ರಜನೀಕಾಂತ್ ಸಿನಿಮಾ ಬಿಡುಗಡೆ ಸಮಸ್ಯೆ ಆದಾಗ ಕನ್ನಡದ ಕೆಲ ನಿರ್ಮಾಪಕರು- ವಿತರಕರೇ ಅವರ ಬೆನ್ನಿಗೆ ನಿಲ್ಲುತ್ತಾರೆ. ಮುಂದಿನಿಂದ ನಿಂತು ಬೆಂಬಲಿಸದೆ ಇರಬಹುದು. ಬಿಡುಗಡೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ. ಅವರು ದೊಡ್ಡ ಹೆಸರಿನ ನಿರ್ಮಾಪಕರು ಹಾಗೂ ವಿತರಕರು. ಕನ್ನಡ ಭಾಷೆಯನ್ನು ಉಳಿಸುವ ಹೊಣೆ ಹೊತ್ತವರು. ಹೋರಾಟಗಾರರು- ಚಳವಳಿ ಮಾಡುವವರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದು ಬೈಸಿಕೊಳ್ಳಬೇಕು, ಕೇಸು ಹಾಕಿಸಿಕೊಳ್ಳಬೇಕು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ಆರಾಮವಾಘಿ ಬಿಡುಗಡೆ ಆಗುತ್ತದೆ. ಟಿಕೆಟ್ ಬೆಲೆ ಐನೂರು- ಸಾವಿರ ಇದ್ದರೂ ಯಾರೂ ಕೇಳಲ್ಲ.


Click it and Unblock the Notifications











