ಆಗ ಅಬ್ಬರಸಿ ಬೊಬ್ಬಿರಿದಿದ್ದ ನಟ ಇಂದು ಆಸ್ಪತ್ರೆಯಲ್ಲಿ ಅನಾಥ!
ಮೂವತ್ತು ವರ್ಷಗಳಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿದ್ದ ತಮಿಳಿನ ಖ್ಯಾತ ಹಾಸ್ಯ ಮತ್ತು ಪೋಷಕ ನಟ ತವಸಿ ಇಂದು ಹೀನಾಯ ಸ್ಥಿತಿಯಲ್ಲಿದ್ದಾರೆ.
ರಜನೀಕಾಂತ್ ಸೇರಿದಂತೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿರುವ ತವಸಿ ಕ್ಯಾನ್ಸರ್ಗೆ ತುತ್ತಾಗಿದ್ದು, ಅವರ ದೈತ್ಯ ದೇಹ ಮುರುಟಿ ಕೃಷವಾಗಿ ಗುರುತು ಹಿಡಿಯಲು ಆಗದ ಸ್ಥಿತಿ ತಲುಪಿದ್ದಾರೆ.
ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ತವಸಿ, ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದು, ವೈದ್ಯಕೀಯ ನೆರವಿಗಾಗಿ ಕೈಮುಗಿದು ಅಂಗಲಾಚಿದ್ದಾರೆ. ತವಸಿ ಅವರ ಚಿತ್ರಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಗಾಗಲೇ ಕೆಲವು ನಟರು ತವಸಿ ಸಹಾಯಕ್ಕೆ ಧಾವಿಸಿದ್ದಾರೆ.

ಮೂವತ್ತು ವರ್ಷಗಳ ಕಾಲ ನಟನೆ
ಮೂವತ್ತು ವರ್ಷಗಳಿಂದಲೂ ಹಾಸ್ಯ ನಟ, ವಿಲನ್, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ತವಸಿ ಕ್ಯಾನ್ಸರ್ಗೆ ತುತ್ತಾಗಿದ್ದಾರೆ. ವಿಡಿಯೋದಲ್ಲಿ ಸಹಾಯಕ್ಕೆ ಮನವಿ ಮಾಡಿರುವ ತವಸಿ, ಆರೋಗ್ಯ ಕ್ಷೀಣಿಸುತ್ತಿದ್ದು, ಚಿಕಿತ್ಸೆಗೆ ಹಣ ಬೇಕಿದೆ ಹಣದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ತವಸಿ ಆಗಿನ-ಈಗಿನ ಚಿತ್ರ ವೈರಲ್ ಆಗಿದೆ
ದೊಡ್ಡ ಮೀಸೆ ಬಿಟ್ಟು, ಡೊಳ್ಳು ಹೊಟ್ಟೆ, ದಡೂತಿ ದೇಹ ಹೊಂದಿದ್ದ ತವಸಿ, ಪೂರ್ಣ ಕೃಷವಾಗಿ ಗುರುತೇ ಸಿಗದಂತೆ ಆಗಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಕೂತು ತವಸಿ ಕೈಮುಗಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸೂರ್ಯಾ ಚಾರಿಟೇಬಲ್ ಟ್ರಸ್ಟ್ನಿಂದ ಸಹಾಯ
ತವಸಿ ಚಿಕಿತ್ಸೆಗೆ ಈಗಾಗಲೇ ಹಲವು ನಟರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸೂರ್ಯಾ ಅವರ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ತವಸಿ ಚಿಕಿತ್ಸೆಗೆ ನೆರವು ಒದಗಿಸಿದೆ. ನಟ ಶಿವಕಾರ್ತಿಕೇಯನ್ ಸಹ ತಾವು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.

10 ಲಕ್ಷ ಘೋಷಿಸಿದ ವಿಜಯ್ ಸೇತುಪತಿ
ಖ್ಯಾತ ನಟ ವಿಜಯ್ ಸೇತುಪತಿ ತವಸಿ ಚಿಕಿತ್ಸೆಗೆ 10 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರೆ. ಡಿಎಂಕೆ ಶಾಸಕ ಶರವಣ ಅವರು ತವಸಿ ದಾಖಲಾಗಿರುವ ಮಧುರೈ ನ ಆಸ್ಪತ್ರೆಗೆ ಭೇಟಿ ನೀಡಿದ್ದು, ತಾವೂ ಸಹ ಹಣ ಸಹಾಯ ಮಾಡುವುದಾಗಿ ಹೇಳಿದ್ದಾರೆ.


Click it and Unblock the Notifications











