ರಮ್ಯಾಗೆ ದರ್ಶನ್ ಫ್ಯಾನ್ಸ್ ಕಿರುಕುಳ ಕೊಟ್ಟಂತೆ ವಿಜಯ್ ಫ್ಯಾನ್ಸ್ಗೆ 'ಕಿರಾತಕ' ನಟಿ ಟಾರ್ಗೆಟ್
ಕರೂರು ಕಾಲ್ತುಳಿತ ದುರಂತ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿದೆ. ಘಟನೆಗೆ ಕಾರಣ ಏನು ಎಂದು ತನಿಖೆ ಆರಂಭವಾಗಿದೆ. ಟಿವಿಕೆ ಪಕ್ಷದ ಸ್ಥಾಪಕ, ನಟ ವಿಜಯ್ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಎಂಕೆ ಸರ್ಕಾರ ಬೇಕೆಂದೇ ವಿಜಯ್ ಅವರನ್ನು ಟಾರ್ಗೆಟ್ ಮಾಡ್ತಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ 'ಕಿರಾತಕ' ನಟಿ ಒವಿಯಾಗೆ ವಿಜಯ್ ಫ್ಯಾನ್ಸ್ ಕಿರುಕುಳ ನೀಡುತ್ತಿದ್ದಾರೆ.
ತಮಿಳು ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷ ಸಂಘಟನೆಗಾಗಿ ಸಮಾವೇಶ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ನಿನ್ನೆ ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ 39 ಜನ ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವಿಚಾರ ದೇಶದ್ಯಂತ ಆಘಾತ ಉಂಟುಮಾಡಿದೆ.

ಕಾಲ್ತುಳಿತ ಪ್ರಕರಣಕ್ಕೆ ವಿಜಯ್ ಬೇಜವಾಬ್ದಾರಿಯೇ ಕಾರಣ, ಹಾಗಾಗಿ ಅವರನ್ನು ಬಂಧಿಸಬೇಕು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಕಿರಾತಕ' ಚಿತ್ರದಲ್ಲಿ ನಟಿಸಿದ್ದ ನಟಿ ಒವಿಯಾ ಕೂಡ ವಿಜಯ್ ಅವರನ್ನು ಬಂಧಿಸಬೇಕು ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಅದನ್ನು ಡಿಲೀಟ್ ಸಹ ಮಾಡಿದ್ದಾರೆ. ಆದರೆ ಆಕೆ ಆ ರೀತಿ ಪೋಸ್ಟ್ ಮಾಡಿದ್ದಕ್ಕೆ ವಿಜಯ್ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.
ನಟಿ ಒವಿಯಾಗೆ ಕೆಟ್ಟ, ಕೊಳಕ ಭಾಷೆಯಲ್ಲಿ ಮೆಸೇಜ್ ಮಾಡಿ ನಿಂದಿಸುತ್ತಿದ್ದಾರೆ. ಎಂತೆಂಥಾ ಸಿನಿಮಾಗಳಲ್ಲಿ ನಟಿಸಿದ್ದ ನೀನು ಈಗ ವಿಜಯ್ ಬಗ್ಗೆ ಮಾತನಾಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿ ಆಕೆಗೆ ಮೆಸೇಜ್ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಅನ್ನು ಒವಿಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಟ ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ನಟಿ ರಮ್ಯಾ ಇದೇ ರೀತಿ ಸ್ಕ್ರೀನ್ ಶಾಟ್ ತೆಗೆದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ದೂರು ನೀಡಿದ್ದರು.

ಸೋಶಿಯಲ್ ಮೀಡಿಯಾ ಟ್ರೋಲಿಂಗ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಯಾರೇ ಏನೇ ಮಾತನಾಡಿದ್ದರೂ ಅವರನ್ನು ಅವರ ಕುಟುಂಬದವರನ್ನು ಟಾರ್ಗೆಟ್ ಮಾಡಿ ಕೆಟ್ಟ ಕೆಟ್ಟದಾಗಿ ನಿಂದಿಸುವ ಕೆಲಸ ನಡೀತಿದೆ. ಇದರಿಂದ ಸಾಕಷ್ಟು ಜನ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಬಗ್ಗೆಯೂ ಕೆಟ್ಟ ಕೆಟ್ಟದಾಗಿ ಕಿಡಿಗೇಡಿಗಳು ಟ್ರೋಲ್ ಮಾಡಿದ್ದರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿತ್ತು. ಇದರ ಬೆನ್ನಲ್ಲೇ "ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ" ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ ಅವರ ಬಗ್ಗೆ ಟ್ರೋಲ್ ಮಾಡಲಾಗಿತ್ತು. ಅದೇ ಸಮಯದಲ್ಲಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು.
ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್ ಮಾಡುತ್ತಿದ್ದರು. ಆದರೆ ಈಗ ನೇರವಾಗಿ ಮೆಸೇಜ್ ಕಳುಹಿಸಿ ಕಿರುಕುಳ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ. ಸೈಬರ್ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಇದಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ.


Click it and Unblock the Notifications











