ಕಾನೂನಿಗೆ ತಲೆಬಾಗಿದ ವಿಜಯ್: ರೋಲ್ಸ್ ರಾಯ್ಸ್ನ ಪೂರ್ಣ ತೆರಿಗೆ ಪಾವತಿ
ನಟ ವಿಜಯ್ ಇತ್ತೀಚೆಗೆ ತಮ್ಮ ಕಾರಿನಿಂದಾಗಿ ಸುದ್ದಿಗೆ ಬಂದಿದ್ದರು. ಕೆಲವು ವರ್ಷಗಳ ಹಿಂದೆ ವಿಜಯ್ ವಿದೇಶದಲ್ಲಿ ಖರೀದಿಸಿ ಭಾರತಕ್ಕೆ ತರಿಸಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ತೆರಿಗೆ ಮನ್ನಾ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡಿದ್ದರು.
ಆದರೆ ವಿಜಯ್ ಹಾಕಿದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗಿ ವಿಜಯ್ಗೆ ಖಾರವಾಗಿಯೇ ತಪರಾಕಿ ಹಾಕಿದರು. ಜೊತೆಗೆ ದಂಡವನ್ನೂ ವಿಧಿಸಿದ್ದರು. ಇದಕ್ಕೆ ವಿಜಯ್ ಪರ ವಕೀಲರು ಅಸಮಾಧಾನದ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ವಿಜಯ್ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದು ಬಾಕಿ ಇರುವ ಎಲ್ಲ ತೆರಿಗೆಯನ್ನು ಪಾವತಿಸಿದ್ದಾರೆ.
2012ರಲ್ಲಿ ನಟ ವಿಜಯ್ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಲಂಡನ್ನಿಂದ ಖರೀದಿಸಿದ್ದರು. ವಿದೇಶದಿಂದ ಐಶಾರಾಮಿ ಕಾರು ಖರೀದಿಸಿದ ಕಾರಣ ಎಂಟ್ರಿ ಟ್ಯಾಕ್ಸ್ ಅನ್ನು ವಿಜಯ್ ಪಾವತಿಸಬೇಕಿತ್ತು. ಆದರೆ ವಿಜಯ್, ಎಂಟ್ರಿ ಟ್ಯಾಕ್ಸ್(ತೆರಿಗೆ) ವಿನಾಯಿತಿ ನೀಡಬೇಕು ಎಂದು ಅರ್ಜಿ ಹಾಕಿದ್ದರು.

ವಿಜಯ್ ವಿರುದ್ಧ ಹರಿಹಾಯ್ದಿದ್ದ ನ್ಯಾಯಮೂರ್ತಿ
ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ವಿಜಯ್ರ ಅರ್ಜಿಯನ್ನು ಮಾಡುವ ವೇಳೆ ''ರೀಲ್ ಹೀರೋಗಳು ರಿಯಲ್ ಹೀರೋಗಳಂತೆ ವರ್ತಿಸಲಿ'' ಎಂದಿದ್ದರು. ಮುಂದುವರೆದು, ''ತಮಿಳುನಾಡಿನಲ್ಲಿ ಸಿನಿಮಾ ನಟರು ರಾಜ್ಯ ಆಳುವ ನಾಯಕರಾಗಿ ಹೊರಹೊಮ್ಮಿದ್ದಾರೆ ಹಾಗಾಗಿ ಅವರನ್ನು ಜನರು ಅನುಸರಿಸುತ್ತಾರೆ. ಹಾಗಾಗಿ ಅವರು ರೀಲ್ ಹೀರೋಗಳಾಗಿ ಮಾತ್ರವೇ ಉಳಿಯದೇ ನಿಜ ಜೀವನದ ಹೀರೋಗಳಾಗಿ ವರ್ತಿಸಬೇಕು'' ಎಂದಿದ್ದರು. ವಿಜಯ್ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಅವರ ಉದ್ಯೋಗದ ಮಾಹಿತಿ ಹಾಕದೇ ಇರುವ ಬಗ್ಗೆಯೂ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತೆರಿಗೆ ಜೊತೆಗೆ ಒಂದು ಲಕ್ಷ ರು. ದಂಡ ಕಟ್ಟುವಂತೆಯೂ ಆದೇಶ ನೀಡಿದ್ದರು.

40 ಲಕ್ಷ ರು ತೆರಿಗೆ ಪಾವತಿಸಿದ ವಿಜಯ್
ಇದಕ್ಕೆ ಪ್ರತಿಯಾಗಿ ವಿಜಯ್ ಪರ ವಕೀಲರು ಅಪೀಲು ಹಾಕಿ, 'ವಿಜಯ್ ಕುರಿತಾಗಿ ಹಾಗೂ ಒಟ್ಟಾರೆ ನಟ ಸಮುದಾಯದ ಕುರಿತಾಗಿ ಅವಹೇಳನಕಾರಿ ಹೇಳಿಕೆಯನ್ನು ನ್ಯಾಯಮೂರ್ತಿಗಳು ಹೇಳಿದ್ದಾರೆ'' ಎಂದು ವಾದಿಸಿದರು. ವಾದ ಆಲಿಸಿದ ದ್ವಿಸದಸ್ಯ ಪೀಠವು ಈ ಹಿಂದಿನ ನ್ಯಾಯಮೂರ್ತಿಗಳ ಆದೇಶಕ್ಕೆ ತಡೆ ನೀಡಿತು ಜೊತೆಗೆ ವಿಜಯ್ ಪೂರ್ಣ ತೆರಿಗೆ ಪಾವತಿಸಬೇಕೆಂದು ನಿರ್ದೇಶನ ಸಹ ನೀಡಲಾಗಿತ್ತು. ನ್ಯಾಯಾಲಯದ ಅಣತಿಯಂತೆ ಈಗ ನಟ ವಿಜಯ್ ತಮ್ಮ ರೋಲ್ಸ್ ರಾಯ್ಸ್ ಕಾರಿನ ಪೂರ್ಣ ತೆರಿಗೆ 40 ಲಕ್ಷ ರುಗಳನ್ನು ಪಾವತಿ ಮಾಡಿದ್ದಾರೆ.

2015ರಲ್ಲಿ ಕಾರು ಕೊಂಡಿದ್ದ ಧನುಷ್
ವಿಜಯ್ ಪ್ರಕರಣದ ನಂತರ ತಮಿಳಿನ ನಟ ಧನುಷ್ ಪ್ರಕರಣವೂ ಸಹ ಸುದ್ದಿಗೆ ಬಂತು, 2015 ರಲ್ಲಿ ನಟ ಧನುಷ್ ವಿದೇಶಿದಿಂದ ಭಾರಿ ದುಬಾರಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಆಮದು ಮಾಡಿಕೊಂಡಿದ್ದರು. ಅದಕ್ಕೆ ಹೇರಲಾಗುವ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಹೂಡಿದ್ದರು. ಇದೀಗ ಆ ಅರ್ಜಿಯು ವಿಚಾರಣೆಗೆ ಬಂದಿದ್ದು ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಎಚ್ಚೆತ್ತುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು ಧನುಷ್ ಯತ್ನಿಸಿದ್ದಾರೆ. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ಒಪ್ಪಿಗೆ ನೀಡಿಲ್ಲ.

ಗಡುವು ನೀಡಿದ್ದ ಮದ್ರಾಸ್ ಹೈಕೋರ್ಟ್
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಾಗ ಧನುಷ್ ಪರ ವಕೀಲರು, ಧನುಷ್ ಈಗಾಗಲೇ 50% ತೆರಿಗೆ ಪಾವತಿಸಿದ್ದು ಇನ್ನುಳಿದ ತೆರಿಗೆ ಪಾವತಿಸಲು ಅವರು ತಯಾರಿದ್ದಾರೆ. ಹಾಗಾಗಿ 2015 ರಲ್ಲಿ ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ಅವಕಾಶ ನೀಡದೇ ನಿರ್ದಿಷ್ಟ ಗಡುವು ನೀಡಿ ಈ ಗಡುವಿನ ಒಳಗೆ ಧನುಷ್ ಪೂರ್ಣ ತೆರಿಗೆ ಪಾವತಿಸಬೇಕು ಎಂದಿದ್ದರು.


Click it and Unblock the Notifications











