ನನಗೆ ರಾಷ್ಟ್ರ ಪ್ರಶಸ್ತಿ ಕೊಟ್ರು ತಿಪ್ಪೆಗೆ ಬಿಸಾಕ್ತೀನಿ"- ನಟ ವಿಶಾಲ್
ತಮಿಳು ನಟ ವಿಶಾಲ್ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕನಾಗಿ ನಿರ್ಮಾಪಕನಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ತಮಿಳು ಕಲಾವಿದರ ಸಂಘದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಪ್ರಶಸ್ತಿಗಳ ವಿಚಾರದಲ್ಲಿ ಸದ್ಯ ವಿಶಾಲ್ ಹೇಳಿಕೆ ವೈರಲ್ ಆಗ್ತಿದೆ.
ಕೆಲ ನಟ, ನಟಿಯರಿಗೆ ಪ್ರಶಸ್ತಿಗಳು, ಆಯ್ಕೆ ಸಮಿತಿ ಬಗ್ಗೆ ಅಸಮಾಧಾನವಿದೆ. ನಟ ಸುದೀಪ್ ಸೇರಿದಂತೆ ಕೆಲವರು ಪ್ರಶಸ್ತಿಗಳಿಂದ ಪ್ರಶಸ್ತಿ ಸಮಾರಂಭಗಳಿಂದ ದೂರವೇ ಉಳಿಯುತ್ತಾರೆ. ಜನರ ತೀರ್ಪೇ ಅಂತಿಮ. ಯಾರೋ ನಾಲ್ಕು ಜನ ಕೂತು ವಿಜೇತರನ್ನು ತೀರ್ಮಾನಿಸುವುದಲ್ಲ ಎನ್ನುವ ವಾದ ಕೆಲವರದ್ದು. ನಟ ವಿಶಾಲ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮದೇ ಯೂಟ್ಯೂಬ್ ಚಾನಲ್ ಪಾಡ್ಕಾಸ್ಟ್ನಲ್ಲಿ ನಟ ವಿಶಾಲ್ ಮಾತನಾಡಿದ್ದಾರೆ. ಸಾಕಷ್ಟು ಪ್ರಶ್ನೆಗಳಿಗೆ ನೇರನೇರ ಉತ್ತರ ನೀಡಿದ್ದಾರೆ. ಪ್ರಶಸ್ತಿಗಳ ಬಗ್ಗೆ ಕೇಳಿದ ಪ್ರಶ್ನೆಗೆ "ನನಗೆ ಪ್ರಶಸ್ತಿಗಳಲ್ಲಿ ನಂಬಿಕೆ ಇಲ್ಲ. ಅದೆಲ್ಲಾ ಹುಚ್ಚುತನ. 4 ಜನ ಕೂತು 8 ಕೋಟಿ ಜನರಿಗೆ ಯಾವುದು ಇಷ್ಟವಾದ ಸಿನಿಮಾ, ನಟನೆ ಎಂದು ತೀರ್ಮಾನಿಸುವವರು ದೊಡ್ಡ ಮೇಧಾವಿಗಳಾ?" ಎಂದು ಪ್ರಶ್ನಿಸಿದ್ದಾರೆ.
ಸಣ್ಣ ಪುಟ್ಟ ಪ್ರಶಸ್ತಿಗಳು ಮಾತ್ರವಲ್ಲ ರಾಷ್ಟ್ರಪ್ರಶಸ್ತಿಯಲ್ಲಿ ಕೂಡ ನನಗೆ ನಂಬಿಕೆ ಇಲ್ಲ ಎಂದು ವಿಶಾಲ್ ಹೇಳಿದ್ದಾರೆ. "ರಾಷ್ಟ್ರಪ್ರಶಸ್ತಿ ನೀಡಲು ಕಮಿಟಿ ಇದೆ. ಸರ್ವೇ ಮಾಡಿ. ಜನರ ಅಭಿಪ್ರಾಯವೇ ಮುಖ್ಯ. ನೀವು ಯಾರೋ ಏಳೆಂಟು ಜನ ಸಿನಿಮಾ ನೋಡಿ ಇವ್ರು ಅತ್ಯುತ್ತಮ ನಟ, ನಟಿ ಎಂದು ನಿರ್ಧರಿಸುವುದನ್ನು ನಾನು ಒಪ್ಪಲ್ಲ, ನಂಬುವುದಿಲ್ಲ. ನನಗೆ ಪ್ರಶಸ್ತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಈ ಮಾತು ಹೇಳ್ತಿಲ್ಲ. ಆ ಮಾನದಂಡ ಒಪ್ಪಲ್ಲ" ಎಂದಿದ್ದಾರೆ.
ಯಾವುದೇ ಸಿನಿಮಾ ಮಾಡುವಾಗ ಪ್ರಶಸ್ತಿ ಬರಬೇಕು ಎಂದು ಬಯಸುವುದಿಲ್ಲವೇ ಎನ್ನುವ ಪ್ರಶ್ನೆಗೆ "ಖಂಡಿತ ಇಲ್ಲ. ನಾನು ಮೊದ್ಲೆ ಹೇಳ್ತೀನಿ. ಒಂದು ವೇಳೆ ಪ್ರಶಸ್ತಿ ಕೊಟ್ರು ನಾನು ಹೋಗ್ತಾ ದಾರಿಯಲ್ಲಿ ಕಸದ ಗುಂಡಿಗೆ ಹಾಕ್ತೀನಿ. ಚಿನ್ನದ ಪ್ರಶಸ್ತಿ ಆಗಿದ್ದರೆ ಅದನ್ನು ಮಾರಿ ಹಣ ಒಳ್ಳೆ ಕಾರ್ಯಕ್ಕೆ ಕೊಟ್ಟುಬಿಡ್ತೀನಿ. ಯಾರು ನಿಜಕ್ಕೂ ಅರ್ಹರು ಇರ್ತಾರೆ ಅವರಿಗೆ ಪ್ರಶಸ್ತಿ ಕೊಡಿ ಅಂತೀನಿ. ಬೇರೆಯವರಿಗೆ ಪ್ರಶಸ್ತಿ ಮೇಲೆ ನಂಬಿಕೆ ಇರಬಹುದು. ಆದರೆ ಏಳೆಂಟು ಜನ ಕೂತು ನಿರ್ಧರಿಸಿ ಪ್ರಶಸ್ತಿ ಕೊಡುವ ಆ ಕಾನ್ಸೆಪ್ಟ್ ಅನ್ನು ನಾನು ಒಪ್ಪಲ್ಲ" ನಟ ವಿಶಾಲ್ ವಿವರಿಸಿದ್ದಾರೆ.
ಇದೇ ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳನ್ನು ವಿಶಾಲ್ ಬಿಚ್ಚಿಟ್ಟಿದ್ದಾರೆ. ಪಿಯುಸಿಯಲ್ಲಿ ಇದ್ದಾಗ ಒಂದು ಸಿನಿಮಾ ನೋಡಿ ಬಂದೆ. ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡ್ತಿದ್ದೆ. ಅವ್ರೇ ನಟಿಸೋಕೆ ಹೇಳಿದ್ರು. ಲಿಂಗುಸ್ವಾಮಿ ಬರೆದಿದ್ದ 'ಸಂಡೇಕೋಳಿ' ಸಿನಿಮಾ ಬಗ್ಗೆ ಕೇಳಿ ನಾನೇ ಹೋಗಿ ಕತೆ ಕೇಳಿ ಒಪ್ಪಿ ನಟಿಸಿದ್ದೆ ಎಂದಿದ್ದಾರೆ. ನಾನು ಸ್ಟಂಟ್ಸ್ ಮಾಡುವಾಗ ಡ್ಯೂಪ್ ಹಾಗಲ್ಲ. 109 ಹೊಲಿಗೆ ಹಾಕಿಸಿಕೊಂಡಿದ್ದೇನೆ.
ಕಾಲೇಜು ಮುಗಿಸಿದ ಬಳಿಕ ಚಿತ್ರರಂಗಕ್ಕೆ ಬರಬೇಕು ಅಂದುಕೊಂಡೆ. ಆದರೆ ಅಪ್ಪ ತಮ್ಮ ಬ್ಯುಸಿನೆಸ್ನಲ್ಲಿ ಸಹಾಯ ಮಾಡುವಂತೆ ಹೇಳಿದ್ರು. ಅಪ್ಪನದ್ದು ಗ್ರಾನೈಟ್ ಬ್ಯುಸಿನೆಸ್. ನಾನು 2 ವರ್ಷ ಕೆಜಿಎಫ್ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವಂತಾಗಿತ್ತು. ಬಳಿಕ ಅರ್ಜುನ್ ಸರ್ಜಾ ಸರ್ ಬಳಿ ಸಹಾಯಕನಾಗಿ ಸೇರಿದೆ. 100 ರೂ. ನನ್ನ ಮೊದಲ ಸಂಭಾವನೆ ಎಂದು ವಿಶಾಲ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











