ಧನ್ಸಿಕಾಗೆ ಬೈದು ಗೋಳು ಹುಯ್ದುಕೊಂಡಿದ್ದ ಸಿಂಬು ತಂದೆ; ಇದೇ ವಿಶಾಲ್ ಜೊತೆ ಪ್ರೀತಿಗೆ ದಾರಿ ಆಗಿತ್ತು!
ತಮಿಳು ನಟ ವಿಶಾಲ್ ಹಾಗೂ ನಟಿ ಧನ್ಸಿಕಾ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಇತ್ತೀಚೆಗೆ ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಘೋಷಿಸಿದ್ದಾರೆ. ಆಗಸ್ಟ್ 29ರಂದು ಅದ್ಧೂರಿಯಾಗಿ ಇಬ್ಬರ ಮದುವೆ ನಡೆಯಲಿದೆ. ಇಬ್ಬರೂ ಒಟ್ಟಿಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ, ಆದರೆ ಪರಿಚಯ ಹೇಗಾಯ್ತು? ಪ್ರೀತಿ ಹುಟ್ಟಿದ್ದೇಗೆ ಎನ್ನುವುದೇ ಇಂಟ್ರೆಸ್ಟಿಂಗ್.
ಸಿಂಬು ತಂದೆ ನಟ, ನಿರ್ದೇಶಕ, ನಿರ್ದೇಶಕ ಟಿ. ರಾಜೇಂದರ್ ಒಮ್ಮೆ ಕ್ಷುಲ್ಲಕ ಕಾರಣಕ್ಕೆ ಧನ್ಸಿಕಾ ಜೊತೆ ಕ್ಯಾತೆ ತೆಗೆದಿದ್ದರು. ಇದು ಮುಂದೆ ದೊಡ್ಡ ವಿವಾದವಾಗಿತ್ತು. ಈ ವೇಳೆ ಧನ್ಸಿಕಾ ಬೆಂಬಲಕ್ಕೆ ವಿಶಾಲ್ ನಿಂತಿದ್ದರು. ಅದೇ ಸಮಯದಲ್ಲಿ ಶುರುವಾಗಿದ್ದ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿತ್ತು. ಬಳಿಕ ಇಬ್ಬರೂ ಪ್ರೀತಿಸಿ ಈಗ ಮದುವೆಗೆ ಸಜ್ಜಾಗುತ್ತಿದ್ದಾರೆ.

ನಟಿ ಧನ್ಸಿಕಾ ಕನ್ನಡದ ಎರಡು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಮಗಳ ಪಾತ್ರದಲ್ಲಿ ನಟಿಸಿ ಆಕೆ ಗಮನ ಸೆಳೆದಿದ್ದರು. ಆಕೆ ತಮಿಳುನಾಡಿನ ತಂಜಾವೂರು ಮೂಲದವರು. ವಿಶಾಲ್ ಹೆಸರು ಇದಕ್ಕೂ ಮುನ್ನ ಇಬ್ಬರು ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು. ಹೈದರಾಬಾದ್ ಮೂಲದ ಹುಡುಗಿ ಜೊತೆ ಮದುವೆ ಎಂಗೇಜ್ಮೆಂಟ್ ನಡೆದು ಮುರಿದು ಬಿದ್ದಿತ್ತು. ಇದೀಗ 47ನೇ ವಯಸ್ಸಿನಲ್ಲಿ ಮದುವೆಗೆ ಸಿದ್ಧರಾಗುತ್ತಿದ್ದಾರೆ.
ಧನ್ಸಿಕಾ ವಯಸ್ಸು 35 ವರ್ಷ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ಇತ್ತೀಚೆಗೆ ಧನ್ಸಿಕಾ ನಟನೆಯ 'ಯೋಗಿಡ' ಚಿತ್ರದ ಸುದ್ದಿಗೋಷ್ಠಿ ನಡೀತು. ಈ ಕಾರ್ಯಕ್ರಮಕ್ಕೆ ನಟ ವಿಶಾಲ್ ಅತಿಥಿಯಾಗಿ ಹೋಗಿದ್ದರು. ಇದೇ ವೇಳೆ ವೇದಿಕೆಯಲ್ಲಿ ಇಬ್ಬರೂ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಮಾತನಾಡಿದ್ದರು. 2017ರಲ್ಲಿ ಧನ್ಸಿಕಾ ನಟನೆಯ 'ವಿಳಿತಿರು' ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಸಿಂಬು ತಂದೆ ಟಿ. ರಾಜೇಂದರ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಚಿತ್ರದ ಸುದ್ದಿಗೋಷ್ಠಿಯಲ್ಲಿ ಟಿ. ರಾಜೇಂದರ್ ಹಾಗೂ ಧನ್ಸಿಕಾ ಇಬ್ಬರೂ ವೇದಿಕೆಯಲ್ಲಿದ್ದರು. ತಮ್ಮ ಸರದಿ ಬಂದಾಗ ಧನ್ಸಿಕಾ ಸಿನಿಮಾ ಬಗ್ಗೆ ಮಾತನಾಡಿದ್ದರು. ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಎಲ್ಲರ ಹೆಸರು ಹೇಳಿ ಎಲ್ಲರ ಜೊತೆ ಕೆಲಸ ಮಾಡಿಸ ಅನುಭವ ಚೆನ್ನಾಗಿತ್ತು. ಧನ್ಯವಾದ ಎಂದಿದ್ದರು. ಆದರೆ ಟಿ. ರಾಜೇಂದರ್ ಹೆಸರು ಹೇಳುವುದನ್ನು ಮರೆತುಬಿಟ್ಟರು. ಇದೇ ಕಾರಣಕ್ಕೆ ಟಿ. ರಾಜೇಂದರ್ ಗರಂ ಆಗಿದ್ದರು.
ಎಲ್ಲರ ಹೆಸರು ಹೇಳಿ ನನ್ನ ಹೆಸರು ಯಾಕೆ ಹೇಳಲಿಲ್ಲ, ಮರೆತುಬಿಟ್ಟಾ? ಅಷ್ಟು ಉದಾಸೀನವೇ? ಎಂದು ತಮಾಷೆಯಾಗಿ ಟಿ. ರಾಜೇಂದರ್ ಮಾತನಾಡಲು ಆರಂಭಿಸಿದರು. ಕೂಡಲೇ ಧನ್ಸಿಕಾ ಎದ್ದು ನಿಂತು ತಪ್ಪಾಯಿತು, ಸರ್ ಮರೆತುಬಿಟ್ಟೆ ಕ್ಷಮಿಸಿ ಎಂದರು. ಆದರೆ ಅವರು ಕೇಳಲಿಲ್ಲ. ನೋಡ ನೋಡುತ್ತಲೇ ಬಹಳ ಗಂಭೀರವಾಗಿ ಮಾತನಾಡಲು ಆರಂಭಿಸಿದ್ದರು. ನೀವು ದೊಡ್ಡ ನಟಿ, ಮೈಕ್ ಕೊಟ್ಟಾಗ ಮಾತನಾಡಬೇಕು ಆಮೇಲೆ ಮಾತನಾಡುವುದಲ್ಲ, ಸ್ವಾರಿ ಎಲ್ಲಾ ಬೇಡ, ವೇದಿಕೆಯಲ್ಲಿ ಒಂದು ನಾಗರೀಕತೆ ಇರಬೇಕು ಎಂದು ಮೂದಲಿಸಿದ್ದರು. ಕೊನೆಗೆ ಧನ್ಸಿಕಾ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದರು.
ಆ ಸಮಯದಲ್ಲಿ ನಟ ವಿಶಾಲ್ ತಮಿಳು ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ವಿವಾದದಲ್ಲಿ ಧನ್ಸಿಕಾ ಪರ ನಿಂತಿದ್ದರು. ಅಧಿಕೃತವಾಗಿ ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲ, ವೈಯಕ್ತಿಕವಾಗಿ ಮಾತನಾಡಿ ಧೈರ್ಯ ತುಂಬಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡುವಾಗ ವಿಶಾಲ್ ಪರೋಕ್ಷವಾಗಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆ ಘಟನೆ ಸಮಯದಲ್ಲಿ ಇಬ್ಬರೂ ಸ್ನೇಹಿತರಾಗಿದ್ದೆವು ಎಂದಿದ್ದರು.


Click it and Unblock the Notifications











