ಐವಿಎಫ್ ಚಿಕಿತ್ಸೆ ಮೂಲಕ ಹೆಣ್ಣು ಮಗುವನ್ನು ಪಡೆದ ತಾರಾ ಜೋಡಿ
ಸದ್ಯ ಐವಿಎಫ್ ಚಿಕಿತ್ಸೆ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ನಟಿ ಭಾವನಾ ರಾಮಣ್ಣ ಮದುವೆ ಆಗದೇ ಈ ವಿಧಾನದಲ್ಲಿ ಗರ್ಭಿಣಿ ಆಗಿರುವುದು. ಈ ಬಗ್ಗೆ ಆಕೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. (ಇನ್ ವಿಟ್ರೊ ಫರ್ಟಿಲೈಸೇಶನ್ ಎನ್ನುವುದು ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಪಡೆಯಲು ಇರುವ ದಾರಿ.
ಸಾಮಾನ್ಯವಾಗಿ ಕಾರಣಾಂತರಗಳಿಂದ ಮಕ್ಕಳನ್ನು ಪಡೆಯಲು ವಿಫಲವಾದ ದಂಪತಿ ಈ ವಿಧಾನದಿಂದ ತಮ್ಮ ಕನಸು ನನಸು ಮಾಡಿಕೊಳ್ಳುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ತಮಿಳು ನಟ ವಿಷ್ಣು ವಿಶಾಲ್ ಅವರ ಪತ್ನಿ ಜ್ವಾಲಾ ಗುಟ್ಟಾ ಕೂಡ ಇದೇ ವಿಧಾನದಲ್ಲಿ ಹೆಣ್ಣು ಮಗು ಪಡೆದಿದ್ದಾರೆ. ಆದರೆ ಕೆಲವೊಮ್ಮೆ ಮದುವೆಯಾಗದ ಮಹಿಳೆಯರು ಈ ಚಿಕಿತ್ಸೆ ಮೂಲಕ ಮಕ್ಕಳು ಪಡೆಯುವುದು ಇದೆ. ನಟಿ ಭಾವನಾ ರಾಮಣ್ಣ ಇದೇ ಪ್ರಯತ್ನದಲ್ಲಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ತಮ್ಮ ಐವಿಎಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಇನ್ನು ಈ ಚಿಕಿತ್ಸೆ ಪಡೆಯಲು ನೆರವಾದ ಬಾಲಿವುಡ್ ನಟ ಆಮೀರ್ ಖಾನ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಆಮೀರ್ ಖಾನ್ ಅವರ ಹೆಸರಿನಲ್ಲಿರುವ ಮೀರ್ ಎಂಬ ಪದವನ್ನು 'ಮಿರಾ' ಅಂತ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಷ್ಣು, ಜ್ವಾಲಾ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಸಹ ಭಾಗಿ ಆಗಿದ್ದರು.
ಐವಿಎಫ್ ಚಿಕಿತ್ಸೆ ಕೂಡ ಅಷ್ಟು ಸುಲಭವಾಗಿ ಯಶಸ್ವಿಯಾಗಿ ಹೆಣ್ಣು ಗರ್ಭಿಣಿ ಆಗಲು ಸಾಧ್ಯವಿಲ್ಲ. ಇದರಲ್ಲಿ ನಾನಾ ವಿಚಾರಗಳು ಮುಖ್ಯವಾಗುತ್ತವೆ. ವಿಷ್ಣು, ಜ್ವಾಲಾ ದಂಪತಿ ವಿಚಾರದಲ್ಲಿ ಕೂಡ ಇದೇ ರೀತಿ ಆಗಿತ್ತು. ಇನ್ನು ತಾವು ಮಗು ಪಡೆಯಲು ಸಾಧ್ಯವಾಗುವುದೇ ಇಲ್ಲ ಎಂದು ದಂಪತಿ ನಿರ್ಧರಿಸಿದ್ದ ಸಮಯದಲ್ಲಿ ಅಚಾನಕ್ ಆಗಿ ಬಾಲಿವುಡ್ ನಟ ಆಮೀರ್ ಖಾನ್ ಭೇಟಿ ಆಗಿತ್ತು. ಅವರ ಮಾರ್ಗದರ್ಶನದಂತೆ ಮುಂಬೈನ ಐವಿಎಫ್ ಸೆಂಟರ್ಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಅದು ಯಶಸ್ವಿಯಾಗಿ ಜ್ವಾಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇತ್ತೀಚೆಗೆ ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟ ವಿಷ್ಣು ಮಾತನಾಡಿದ್ದಾರೆ. "ಜ್ವಾಲಾ ಹಾಗೂ ನಾನು ದೀರ್ಘವಾದ IVF ಪ್ರಕ್ರಿಯೆಯ ಮೂಲಕ ಮಗು ಪಡೆಯಲು ಮುಂದಾಗಿದ್ದೆವು. ಕೆಲವು ಪ್ರಯತ್ನಗಳು ವ್ಯರ್ಥವಾಗಿತ್ತು. ನಾವು ಭರವಸೆ ಕಳೆದುಕೊಂಡಿದ್ದೆವು. 2013ರಲ್ಲಿ ಚೆನ್ನೈ ಪ್ರವಾಹದ ಸಮಯದಲ್ಲಿ ಆಮೀರ್ ಖಾನ್ ಅವರನ್ನು ಭೇಟಿ ಆಗುವಂತಾಯಿತು. ಆಗ ಅವರು ಮುಂಬೈಗೆ ಬಂದು ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದರು. ಅದು ನಮಗೆ ನೆರವಾಯಿತು" ಎಂದಿದ್ದಾರೆ.
ಚಿಕಿತ್ಸೆಗಾಗಿ ಜ್ವಾಲಾ 10 ತಿಂಗಳು ಮುಂಬೈನಲ್ಲಿ ಇರಬೇಕಾಯಿತು. ಆಗ ಕೂಡ ಆಮೀರ್ ಖಾನ್ ಸಹಾಯ ಮಾಡಿದ್ದರು. ಅವರ ತಾಯಿ ಹಾಗೂ ಸಹೋದರಿಯರು ಬೆಂಬಲವಾಗಿ ನಿಂತಿದ್ದರು. "ನಮಗೆ ಮಗು ಹುಟ್ಟಿದಾಗ ಕೃತಜ್ಞತೆಯಿಂದ ಆಮೀರ್ ಖಾನ್ ಅವರನ್ನು ಸಂಪರ್ಕಿಸಿದ್ದೆ. ನಾಮಕರಣಕ್ಕೆ ಬಂದು ಮಗಳಿಗೆ ಹೆಸರಿಡಬೇಕು ಎಂದು ಕೇಳಿಕೊಂಡಿದ್ದೆ. ಅವ್ರು ಹೈದರಾಬಾದ್ಗೆ ಬಂದು ಹೆಸರಿಟ್ಟರು. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾವು ಯಾವಾಗಗೂ ಅವರಿಗೆ ಕೃತಜ್ಞರು" ಎಂದು ವಿಷ್ಣು ಹೇಳಿದ್ದಾರೆ.
ಸಾಕಷ್ಟು ತಮಿಳು ಸಿನಿಮಾಗಳಲ್ಲಿ ವಿಷ್ಣು ವಿಶಾಲ್ ಹೀರೊ ಆಗಿ ನಟಿಸಿದ್ದಾರೆ. 2010ರಲ್ಲಿ ರಜಿನಿ ನಟರಾಜ್ ಎಂಬಾಕೆಯನ್ನು ವಿಷ್ಣು ಮದುವೆ ಆಗಿದ್ದರು. 8 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು. ಬ್ಯಾಡ್ಮಿಟನ್ ಆಟಗಾರ ಚೇತನ್ ಆನಂದ್ ಕೈಹಿಡಿದಿದ್ದ ಜ್ವಾಲಾ ಬಳಿಕ ಡಿವೋರ್ಸ್ ಪಡೆದಿದ್ದರು. 2021ರಲ್ಲಿ ವಿಷ್ಣು, ಜ್ವಾಲಾ ಇಬ್ಬರೂ ಎರಡನೇ ಮದುವೆ ಆಗಿದ್ದರು.


Click it and Unblock the Notifications











