ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತಾಡಲು ತಡಬಡಾಯಿಸಿದ್ದ ರಶ್ಮಿಕಾ, ವೃಕ್ಷಮಾತೆಯ ಸಾಧನೆ ಬಿಚ್ಚಿಟ್ಟ ವಿವೇಕ್
ತಮಿಳಿನ ಖ್ಯಾತ ನಟ ವಿವೇಕ್ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ವಿವೇಕ್ ಕೇವಲ ನಟನಾಗಿ ಮಾತ್ರವಲ್ಲ ಸಮಾಜ ಸೇವಕನಾಗಿಯೂ ಗುರುತಿಸಿಕೊಂಡಿದ್ದರು.
ಪರಿಸರವಾದಿಯಾಗಿದ್ದ ನಟ ವಿವೇಕ್ ಲಕ್ಷಾಂತರ ಮರಗಳನ್ನು ನೆಟ್ಟಿದ್ದಾರೆ. ಇತರೆ ಪರಿಸರವಾದಿಗಳೆಂದರೆ ವಿವೇಕ್ಗೆ ಅಪಾರ ಗೌರವವಿತ್ತು. ಅದರಲ್ಲಿಯೂ ಕನ್ನಡತಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಅಪಾರ ಪ್ರೀತಿ ಗೌರವವನ್ನು ವಿವೇಕ್ ಹೊಂದಿದ್ದರು.
ತಮಿಳು ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಾಲು ಮರದ ತಿಮ್ಮಕ್ಕನ ಬಗ್ಗೆ ನಿರರ್ಗಳವಾಗಿ ಮಾತನಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು ವಿವೇಕ್. ವಿಶೇಷವೆಂದರೆ ಅದೇ ವೇದಿಕೆಯಲ್ಲಿದ್ದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಅವರು ಸಾಲು ಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ತಡಬಡಾಯಿಸಿದ್ದರು.

ತಿಮ್ಮಕ್ಕನಿಗೆ ತಮಿಳು ಸಿನಿಮಾರಂಗದಿಂದ ಸನ್ಮಾನ
ಆಗಿದ್ದಿಷ್ಟು, 2019ರ ಜೆಎಫ್ಡಬ್ಲು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಆಗಷ್ಟೆ ಪದ್ಮಶ್ರೀ ಸ್ವೀಕರಿಸಿದ್ದ ಸಾಲುಮರದ ತಿಮ್ಮಕ್ಕನಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿತ್ತು. ತಮಿಳಿನ ಖ್ಯಾತ ನಟ-ನಟಿಯರೆಲ್ಲರೂ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸನ್ಮಾನ ಮಾಡುವ ಜವಾಬ್ದಾರಿಯನ್ನು ಸ್ವತಃ ಪರಿಸರವಾದಿಯಾದ ವಿವೇಕ್ ಅವರಿಗೆ ವಹಿಸಲಾಗಿತ್ತು.

ವೇದಿಕೆ ಮೇಲೆ ತಡಬಡಾಯಿಸಿದ ರಶ್ಮಿಕಾ
ತಿಮ್ಮಕ್ಕನವರು ಕನ್ನಡದಲ್ಲಿ ಮಾತನಾಡಿದ್ದನ್ನು ತರ್ಜುಮೆಗೊಳಿಸಲು ಕನ್ನಡತಿ ರಶ್ಮಿಕಾ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ವೇದಿಕೆ ಬಂದ ರಶ್ಮಿಕಾಗೆ ಸಾಲು ಮರದ ತಿಮ್ಮಕ್ಕನ ಪರಿಚಯ ಮಾಡಿಕೊಡುವಂತೆ ಕೇಳಲಾಯಿತು. ಆದರೆ ತಿಮ್ಮಕ್ಕನ ಸಾಧನೆಯ ಪರಿಚಯ ಇಲ್ಲದಿದ್ದ ರಶ್ಮಿಕಾ ಮಾತನಾಡಲು ತಡಬಡಾಯಿಸಿದರು.

ತಿಮ್ಮಕ್ಕನ ಸಾಧನೆಗಳ ಬಗ್ಗೆ ಹೇಳಿದ್ದ ವಿವೇಕ್
ಆಗ ಅಲ್ಲಿಯೇ ಇದ್ದ ವಿವೇಕ್ ತಿಮ್ಮಕ್ಕನ ಸಾಧನೆಗಳನ್ನು ತಮಿಳಿನಲ್ಲಿ ಒಂದೊಂದಾಗಿ ಹೇಳಲು ಪ್ರಾರಂಭಿಸಿದರು. ಸಾಲು ಮರದ ತಿಮ್ಮಕ್ಕನ ಆರಂಭದ ಜೀವನ, ಮಕ್ಕಳಾಗದ ಕಾರಣ ತಿಮ್ಮಕ್ಕನೂ ಆಕೆಯ ಪತಿಯೂ ಮರಗಳನ್ನು ನೆಟ್ಟಿದ್ದು, ಸೈಕಲ್ನಲ್ಲಿ ಹೋಗಿ ಗಿಡಗಳಿಗೆ ನೀರು ಹಾಕಿದ್ದು ಎಲ್ಲವನ್ನೂ ವರ್ಣಿಸಿದರು ವಿವೇಕ್. ಸಾಲು ಮರದ ತಿಮ್ಮಕ್ಕನ ಮಾತನ್ನು ತರ್ಜುಮೆ ಮಾಡುತ್ತಿರಲಿಲ್ಲ ವಿವೇಕ್. ಬದಲಿಗೆ ಅವರು ತಿಮ್ಮಕ್ಕನ ಸಾಧನೆ ಬಗ್ಗೆ ಮೊದಲೇ ತಿಳಿದುಕೊಂಡಿದ್ದರು.

ತಿಮ್ಮಕ್ಕನ ಪಾದಗಳಿಗೆ ಹಣೆ ಹಚ್ಚಿದ್ದ ವಿವೇಕ್
ಅಷ್ಟೇ ಅಲ್ಲದೆ ಸಾಲು ಮರದ ತಿಮ್ಮಕ್ಕನಿಗೆ ಸಂದಿರುವ ಗೌರವಗಳು. ತಿಮ್ಮಕ್ಕನಿಗೆ ವಿದೇಶದಲ್ಲಿ ಒದಗಿಬಂದ ಗೌರವಗಳು. ಸಾಲು ಮರದ ತಿಮ್ಮಕ್ಕನಂಥವರು ಏಕೆ ದೇಶಕ್ಕೆ ಹೆಚ್ಚು-ಹೆಚ್ಚು ಜನ ಬೇಕೆಂದು ಭಾವುಕರಾಗಿ ಹೇಳಿದ ವಿವೇಕ್, ವೇದಿಕೆ ಮೇಲೆಯೇ ತಿಮ್ಮಕ್ಕನ ಪಾದಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ್ದರು. ಇದನ್ನೆಲ್ಲಾ ಪೆಚ್ಚಾಗಿ ನೋಡಿದ್ದರು ರಶ್ಮಿಕಾ ಮಂದಣ್ಣ.


Click it and Unblock the Notifications











