ತನ್ನನ್ನು ಕೆಣಕಿದವನಿಗೆ 'ಲಾಲಿಹಾಡು' ನಟಿ ಅಭಿರಾಮಿ ಖಡಕ್ ತಿರುಗೇಟು
ನಟಿಯರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ಕೆಲವರು ಮಾತ್ರ ಏನಾದರೂ ಕೊಂಕು ಹುಡುಕಿ ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಾರೆ. ಕೆಲವರು ಇದನ್ನು ನೋಡಿಯೂ ನೋಡದೇ ಇದ್ದು ಬಿಡುತ್ತಾರೆ. ಆದರೆ ಕೆಲ ನಟಿಯರು ಇಂತಹ ಕಾಮೆಂಟ್ಗೆ ಅಲ್ಲೇ ರಿಪ್ಲೇ ಮಾಡಿ ತಿರುಗೇಟು ಕೊಡುತ್ತಾರೆ.
ಮಲಯಾಳಂ ನಟಿ ಅಭಿರಾಮಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ದರ್ಶನ್ ಜೊತೆ 'ಲಾಲಿಹಾಡು' ಚಿತ್ರದಲ್ಲಿ ನಟಿಸಿ ಕನ್ನಡಕ್ಕೆ ಬಂದರು. ಬಳಿಕ 'ರಕ್ತಕಣ್ಣೀರು', 'ಶ್ರೀರಾಮ್', 'ಚೌಕ', 'ದಶರಥ' ಹಾಗೂ 'ಕೋಟಿಗೊಬ್ಬ-3' ಸಿನಿಮಾಗಳಲ್ಲಿ ಅಭಿರಾಮಿ ಮಿಂಚಿದ್ದರು. ತಮ್ಮ ಮುಗ್ಧ ನಟನೆಯಿಂದ ಪ್ರೇಕ್ಷಕರ ಮನಗೆದ್ದರು.

ಇತ್ತೀಚೆಗೆ ನಟಿ ಅಭಿರಾಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವೀಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಮೇಕಪ್ಮ್ಯಾನ್ ಬಗ್ಗೆ ಅದರಲ್ಲಿ ವಿವರಿಸಿದ್ದಾರೆ. ಪ್ರಸಾದ್ ಎನ್ನುವ ಈ ವ್ಯಕ್ತಿ ಕಳೆದ 24 ವರ್ಷಗಳಿಂದ ತಮ್ಮ ಮೇಕಪ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆತನಿಗೆ ತಮಿಳಿನಲ್ಲಿ 'ಳ' ಪದದ ಉಚ್ಚಾರಣೆ ಸರಿಯಾಗಿ ಬರುವುದಿಲ್ಲ. ನಾನು ಸಾಕಷ್ಟು ಬಾರಿ ಹೇಳಿಕೊಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿಲ್ಲ ನೋಡಿ ಎಂದಿದ್ದಾರೆ.
ಮೇಕಪ್ಮ್ಯಾನ್ ಪ್ರಸಾದ್ ಅವರಿಂದ ಆ ಅಕ್ಷರದ ಸರಿಯಾದ ಉಚ್ಚಾರಣೆ ಮಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆತನಿಂದ ಸಾಧ್ಯವಾಗಿಲ್ಲ. ಈ ಬಗ್ಗೆ ವೀಡಿಯೋ ಮಾಡಿ ಅಭಿರಾಮಿ ನಕ್ಕಿದ್ದಾರೆ. ಈ ಬಗ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಆಕೆಯ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ಆತನಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ವೀಡಿಯೋದಲ್ಲಿ ನಟಿ ಅಭಿರಾಮಿ ಲುಕ್ಸ್ ಬಗ್ಗೆ ಕೆಲವರು ವ್ಯಂಗ್ಯವಾಡಿದ್ದಾರೆ. "ಕ್ಯಾಮರಾದಲ್ಲಿ ಮಾತನಾಡುತ್ತಿದ್ದರೆ ಸುಂದರವಾಗಿ ಕಾಣುತ್ತಿಲ್ಲ ಆಂಟಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ರಿಪ್ಲೇ ಮಾಡಿರುವ ಅಭಿರಾಮಿ ಹಾಕಿದ್ದರೆ ನೋಡಬೇಡ ಎಂದಿದ್ದಾರೆ. "ನಟನೆ ಬಿಟ್ಟುಬಿಟ್ರಾ? ಮೇಕಪ್ ಹಾಕಿಕೊಳ್ಳಲು ಗೊತ್ತಿಲ್ಲವೇ?" ಎಂದು ಇನ್ನೊಬ್ಬರು ಬರೆದಿದ್ದಾರೆ. ಅದಕ್ಕೆ "ನಾನು ಯಾಕೆ ಆತನ ಕೆಲಸಕ್ಕೆ ಕಲ್ಲು ಹಾಕಲಿ" ಎಂದಿದ್ದಾರೆ.
ಆಗೊಮ್ಮೆ ಈಗೊಮ್ಮೆ ಕಾಮೆಂಟ್ಗಳಿಗೆ ರಿಪ್ಲೇ ಮಾಡುತ್ತಿರುವುದು ನೋಡಿ, "ಮೇಡಂ ನೀವೇನಾ ಪ್ರತಿಕ್ರಿಯಿಸುತ್ತಿರುವುದು. ಅಥವಾ ಬೇರಿ ಯಾರಾದರೂ ಅಡ್ಮಿನ್ ಇದ್ದಾರಾ?" ಎಂದು ಕೇಳಿದ್ದಾರೆ. "ಸಮಯ ಸಿಕ್ಕಾಗ ನಾನೇ ಉತ್ತರಿಸುತ್ತೇನೆ" ಎಂದು ಅಭಿರಾಮಿ ರಿಪ್ಲೇ ಮಾಡಿದ್ದಾರೆ. ಆಕೆ ಕೊನೆಯದಾಗಿ ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಹಾಗೂ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಗಳಲ್ಲಿ ಅಭಿರಾಮಿ ಬಣ್ಣ ಹಚ್ಚಿದ್ದಾರೆ. ದಸರಾ ಸಂಭ್ರಮದಲ್ಲಿ 'ವೆಟ್ಟೆಯಾನ್' ಸಿನಿಮಾ ತೆರೆಗೆ ಬರಲಿದೆ. ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಅಭಿರಾಮಿ ಕೆಲಸ ಮಾಡಿದ್ದಾರೆ. ಇನ್ನು ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ಆಕೆ ಮಿಂಚಿದ್ದಾರೆ.
ರಾಹುಲ್ ಪವನನ್ ಎಂಬುವವರ ಕೈ ಹಿಡಿದ ಅಭಿರಾಮಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆ ಬಳಿಕ ಕೂಡ ಆಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಮಗುವನ್ನು ದತ್ತು ತೆಗದುಕೊಂಡ ಬಗ್ಗೆ ಆಕೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಮಗಳಿಗೆ ಕಲ್ಕಿ ಎಂದು ನಾಮಕರಣ ಮಾಡಿದ್ದಾರೆ.


Click it and Unblock the Notifications











