ದಯಮಾಡಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡ ; ರವಿಮೋಹನ್ ಕಣ್ಣೀರಿಗೆ ಹಿರಿಯ ನಟಿ ಅಂಬಿಕಾ ಸಾಂತ್ವಾನ
ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನು ಸೆಲೆಬ್ರಿಟಿಗಳ ಪಾಡು ಕೇಳಬೇಕಾ..? ಎಷ್ಟೇ ಪ್ರಯತ್ನ ಮಾಡಿದರು ಕೂಡ ನಾಲ್ಕು ಗೋಡೆಗಳ ನಡುವೆ ಇವರ ಸಮಸ್ಯೆ ಕೆಲ ಒಮ್ಮೆ ಬಗೆ ಹರಿಯುವುದೇ ಇಲ್ಲ.
ಬದಲಿಗೆ ಬೀದಿ ರಂಪವಾಗುತ್ತೆ. ವ್ಯತ್ಯಾಸ ಅಂದರೆ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಾಗ ಅದು ಸುದ್ದಿಯಾಗಲ್ಲ. ಆದರೆ ಅದೇ ದೊಡ್ಡ ದೊಡ್ಡವರ ವಿಷಯ ಬೀದಿಗೆ ಬಂದರೆ ಆಗ ಅದು ಬ್ರೇಕಿಂಗ್ ನ್ಯೂಸ್ ಆಗುತ್ತೆ. ಹಲವರ ಬಾಯಿಗೆ ಆಹಾರವಾಗುತ್ತೆ. ಹೀನಾ ಮಾನವಾಗಿ ಟ್ರೋಲ್ ಮಾಡಲಾಗುತ್ತೆ.

ತಮ್ಮ ವೈಯಕ್ತಿಕ ಬದುಕಿನ ಕುರಿತು ನಡೆಯುತ್ತಿರುವ ಈ ಚರ್ಚೆ, ಆರೋಪ-ಪ್ರತ್ಯಾರೋಪಗಳಿಂದಾಗಿ ಹಲವರು ಖಿನ್ನತೆಗೆ ಒಳಗಾಗಿದ್ದು ಇದೆ. ಬದುಕೇ ಬೇಡ ಎಂದನಿಸಿ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದು ಇದೆ. ಜಯಂ ರವಿ ಅಲಿಯಾಸ್ ರವಿ ಮೋಹನ್ ಅವರ ವಿಚಾರದಲ್ಲಿ ಕೂಡ ಸದ್ಯ ಇಂತಹದ್ದೇ ಒಂದು ಭಯ ಹಿರಿಯ ನಟಿ ಅಂಬಿಕಾಗೆ ಕಾಡುತ್ತಿದೆ.
ಹೌದು, ಒಂದ್ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದವರು ಅಂಬಿಕಾ. ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೇ ಕನ್ನಡದಲ್ಲಿಯೂ ಮಿಂಚಿದ ಅಂಬಿಕಾ ನಾಯಕಿಯಾಗಿ ಆಕ್ಟ್ ಮಾಡಿದ ಚಿತ್ರಗಳ ಪಟ್ಟಿಯೇ 200ಕ್ಕೂ ಮೇಲಿದೆ.
ಕಮಲ್ ಹಾಸನ್.. ರಜನಿಕಾಂತ್.. ವಿಜಯಕಾಂತ್.. ಮಮ್ಮೂಟಿ.. ಮೋಹನ್ಲಾಲ್.. ಎನ್ಟಿ ರಾಮ್ ರಾವ್.. ಕೃಷ್ಣ.. ಕೃಷ್ಣಂ ರಾಜು.. ಚಿರಂಜೀವಿ.. ಹೀಗೆ ಹಲವು ದಿಗ್ಗಜರ ಜೊತೆ ತೆರೆ ಹಂಚಿಕೊಂಡಿರವ ಅಂಬಿಕಾ ಕನ್ನಡದಲ್ಲಿ ಡಾ ರಾಜ್ಕುಮಾರ್ ಅವರ ಆರೇಳು ಸಿನಿಮಾ ಮಾಡಿದ್ದಾರೆ. ಆ ಪೈಕಿ ''ಚಲಿಸುವ ಮೋಡಗಳು''.. ''ಎರಡು ನಕ್ಷತ್ರಗಳು''.. ''ಭಕ್ತ ಪ್ರಹ್ಲಾದ''.. ''ಅಪೂರ್ವ ಸಂಗಮ''.. ಪ್ರಮುಖವಾದವು.
ಇಂಥಾ ಅಂಬಿಕಾ ಸದ್ಯ ಸಂಸಾರದ ಕಲಹದಿಂದ ಹೈರಾಣಾಗಿರುವ ರವಿ ಮೋಹನ್ಗೆ ಧೈರ್ಯ ತುಂಬಿದ್ದಾರೆ. ದಯಮಾಡಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಮನವಿಯನ್ನು ಮಾಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಂಬಿಕಾ, ''ರವಿ, ನೀನು ಮೊದಲು ದುರ್ಬಲ ಎಂದು ಭಾವಿಸಬೇಡ. ಎಲ್ಲವೂ ಸರಿಯಾಗುತ್ತದೆ, ದೇವರು ನಿನ್ನನ್ನು ಪರೀಕ್ಷಿಸಿ, ಸ್ವಲ್ಪ ವಿಳಂಬ ಮಾಡುತ್ತಿದ್ದಾನೆ ಎಂದು ತಿಳಿದುಕೋ. ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡ, ನಿನ್ನನ್ನು ನೀನೇ ನೋಯಿಸಿಕೊಳ್ಳಬೇಡ. ಮಕ್ಕಳ ಮೇಲಿನ ನಿನ್ನ ಪ್ರೀತಿಯೇ, ನಿನ್ನ ಜೀವನದ ಮೇಲಿನ ಒಲವನ್ನು ಮರಳಿ ತರುತ್ತದೆ. ದೇವರಲ್ಲಿ ಪ್ರಾರ್ಥಿಸು, ಚೆನ್ನಾಗಿ ನಿದ್ರಿಸು, ಅಪ್ಪ-ಅಮ್ಮನೊಂದಿಗೆ ಇಲ್ಲವೇ ನಿನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡವರೊಂದಿಗೆ ಇರು'' ಎಂದು ಹೇಳಿದ್ದಾರೆ.
ಸದ್ಯ ಅಂಬಿಕಾ ಅವರ ಈ ಮಾತುಗಳಿಗೆ ಜಯಂ ರವಿ ಅವರ ಅಭಿಮಾನಿಗಳು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದ ಹಿರಿಯ ನಟಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.
ರವಿಮೋಹನ್ ದಾಂಪತ್ಯದ ಬೀದಿ ಕಲಹದ ಸಂಕ್ಷಿಪ್ತ ವಿವರ
ರವಿ ಮೋಹನ್ ಅವರ 15 ವರ್ಷದ ದಾಂಪತ್ಯದಲ್ಲಿ ಬಿರುಕು ಮೂಡಿ ವರ್ಷಗಳಾಗಿವೆ. ಆರತಿ ಅವರಿಂದ ದೂರವಾಗುವ ಪ್ರಯತ್ನವನ್ನು ಜಯಂ ರವಿ ಮಾಡುತ್ತಿದ್ದಾರಾದರೂ ತಮ್ಮ ಈ ಪ್ರಯತ್ನದಲ್ಲಿ ಇವರಿಗೆ ಗೆಲುವು ಸಿಕ್ತಿಲ್ಲ. ಇನ್ನು ಜಯಂ ರವಿ ಮತ್ತು ಆರತಿ ದಾಂಪತ್ಯ ಮುರಿದು ಬೀಳಲು ಗಾಯಕಿ ಕೆನಿಶಾ ಕಾರಣವೆಂದು ಹಲವರು ಆರೋಪ ಮಾಡಿದ್ದಾರೆ. ಆದರೆ ರವಿ ಮೋಹನ್ ಇದಕ್ಕೆಲ್ಲಾ ಖುಷ್ಬೂ ಕಾರಣ ಎಂದು ಪರೋಕ್ಷವಾಗಿ ಗುಡುಗಿದ್ಧಾರೆ.
ವಿಚ್ಛೇದನ ಪ್ರಕರಣ ಇತ್ಯರ್ಥವಾಗುವವರೆಗೂ ತಾನು ಸಿನಿಮಾದಲ್ಲಿ ನಟಿಸುವುದಿಲ್ಲ, ಹಾಗೆಯೇ ತಾನು ನಟಿಸಿರುವ ಯಾವ ಚಿತ್ರವೂ ಬಿಡುಗಡೆಯಾಗುವುದಿಲ್ಲ ಎಂದು ರವಿ ಮೋಹನ್ ತಿಳಿಸಿದ್ದಾರೆ. ಮಕ್ಕಳನ್ನು ನೋಡಲು, ಫೋನ್ನಲ್ಲಿ ಮಾತನಾಡಲೂ ಅವಕಾಶವಿಲ್ಲ ಎಂದು ಕಣ್ಣೀರು ಹಾಕಿದ್ದ ರವಿ ಮೋಹನ್ ಎಲ್ಲರ ವಿರುದ್ಧ ಸೇಡು ತೀರಿಸಕೊಂಡೇ ನಾನು ಹೋಗೋದು ಎಂದು ಹೇಳಿದ್ದಾರೆ.


Click it and Unblock the Notifications