"ನನ್ನ ಪರಿಸ್ಥಿತಿ ಎಲ್ಲರದ್ದು ಆಗಿರಲ್ಲ", ಲೈಂಗಿಕ ಕಿರುಕುಳದ ಬಗ್ಗೆ ಜಾಕಿ ಭಾವನಾ ಮಾತು
ಮಲಯಾಳಂ ನಟಿ ಭಾವನಾ ಮೆನನ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಬೆಂಗಳೂರು ಮೂಲದ ಉದ್ಯಮಿ ನವೀನ್ ಎಂಬುವವರನ್ನು ಮದುವೆಯಾಗಿ ಇಲ್ಲೇ ಸೆಟ್ಲ್ ಆಗಿದ್ದಾರೆ. 8 ವರ್ಷಗಳ ಹಿಂದೆ ಆಕೆಯ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಪರೋಕ್ಷವಾಗಿ ಆಕೆ ಇದೀಗ ಪ್ರತಿಕ್ರಿಯಿಸಿದ್ದಾರೆ.
2017ರ ಫೆಬ್ರವರಿಯಲ್ಲಿ ನಟಿ ಭಾವನಾ ಮೆನನ್ ಚಿತ್ರೀಕರಣ ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ಆಗ ಆಕೆಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲೇ ಎರಡು ಗಂಟೆಗಳ ಕಾಲ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಆ ಬಳಿಕ ಎಲ್ಲವನ್ನು ಮರೆತು ಭಾವನಾ ಸಹಜ ಜೀವನಕ್ಕೆ ಮರಳಿದರು.

ಕನ್ನಡದ 'ರೋಮಿಯೊ' ಚಿತ್ರದಲ್ಲಿ ಭಾವನಾ ನಟಿಸಿದ್ದರು. ಆ ಚಿತ್ರದ ನಿರ್ಮಾಪಕ ನವೀನ್ ಜೊತೆ ಪ್ರೀತಿಲಿ ಬಿದ್ದಿದ್ದರು. ಕಹಿ ಘಟನೆಯ ಬಳಿಕ ಭಾವನಾ ಬೆಂಬಲಕ್ಕೆ ನವೀನ್ ನಿಂತಿದ್ದರು. ಬಳಿಕ ಇಬ್ಬರೂ ಮದುವೆ ಕೂಡ ಆಗಿದ್ದಾರೆ. ಸದ್ಯ ಭಾವನಾ ನಟನೆಯ 'ಡೋರ್' ಎಂಬ ತಮಿಳು ಹಾರರ್ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗಿದೆ. ಚಿತ್ರದ ಪ್ರಚಾರದ ವೇಳೆ ಸಾಕಷ್ಟು ಸಂದರ್ಶನದಲ್ಲಿ ಆಕೆ ಭಾಗಿ ಆಗಿದ್ದಾರೆ.
ಭಾವನಾ ಸಂದರ್ಶನಗಳಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. 'ಗಲಾಟ ತಮಿಳ್' ಯೂಟ್ಯೂಬ್ ಚಾನಲ್ ಸಂದರ್ಶನಲ್ಲಿ ಕೆಲ ಅಭಿಮಾನಿಗಳು ಆಕೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. "ಮೇಡಂ ನೀವು ಬಹಳ ಬೋಲ್ಡ್. ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತೀರಾ. ಈಗಿನ ಹೆಣ್ಣು ಮಕ್ಕಳು ಬಹಳ ಬೋಲ್ಡ್ ಆಗಿ ಇದ್ದಾರೆ. ಆದರೆ ಲೈಂಗಿಕ ಕಿರುಕುಳದಂತಹ ಘಟನೆ ನಡೆದಾಗ ಮಾತನಾಡಲು ಭಯಪಡುತ್ತಾರೆ, ನಾಚಿಕೊಳ್ಳುತ್ತಾರೆ, ಇಂತಹವರಿಗೆ ಏನು ಮೆಸೇಜ್ ಕೊಡ್ತೀರಾ? ಎಂದು ಕೇಳಿದ್ದಾರೆ.
ಮಹಿಳಾ ಅಭಿಮಾನಿಯ ಈ ಪ್ರಶ್ನೆಗೆ ಭಾವನಾ ಉತ್ತರಿಸಿ "ಹೊರಗೆ ಹೇಳಿದರೆ ಪ್ರಾಬ್ಲಂ ಆಗುತ್ತದೆ. ಹೇಳದಿದ್ದರೂ ಪ್ರಾಬ್ಲಂ ಇದೆ. ಎರಡೂ ಕೂಡ ಕಷ್ಟವೇ, ನನ್ನ ಪರಿಸ್ಥಿತಿಯೇ ಎಲ್ಲರದ್ದೂ ಆಗಿರಲ್ಲ. ಹಾಗಾಗಿ ಇದೇ ರೀತಿ ಮಾಡಿ ಎಂದು ನಾನು ಹೇಳುವುದಕ್ಕೆ ಸಾಧ್ಯವಿಲ್ಲ. ನನ್ನ ವೈಯಕ್ತಿಕ ಅನುಭವದಲ್ಲಿ ದೂರು ಕೊಡುವುದು ಸರಿ ಎನಿಸುತ್ತದೆ. ಅದು ನನ್ನ ವೈಯಕ್ತಿಕ ಅನುಭವ, ಆದರೆ ದೂರು ನೀಡಿ ಯಾವುದೇ ಮಹಿಳೆಗೆ ಏನಾದರೂ ಸಮಸ್ಯೆ ಆಗಿದ್ಯಾ ಗೊತ್ತಿಲ್ಲ. ಧೈರ್ಯವಾಗಿರಿ, ಜೀವನದಲ್ಲಿ ನಿಮಗೆ ಸರಿ ಅನ್ನಿಸಿದ್ದು ಮಾಡಿ" ಎಂದು ಸಲಹೆ ನೀಡಿದ್ದಾರೆ.
ತಮಗಾದ ಕಹಿ ಅನುಭವದ ಬಗ್ಗೆ ನಟಿ ಭಾವನಾ ಹೆಚ್ಚು ಮಾತನಾಡಿರಲಿಲ್ಲ. ಘಟನೆ ನಡೆದು 5 ವರ್ಷಗಳ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಯಾರ ಹೆಸರು ತೆಗೆದುಕೊಳ್ಳದೇ, ಯಾರ ಮೇಲೂ ಆರೋಪ ಮಾಡದೇ ತಮ್ಮ ಮನಸ್ಸಿನ ತಳಮಳ ಹೊರಗೆ ಹಾಕಿದ್ದರು. "ಇದು ನಿಜಕ್ಕೂ ಸುಲಭದ ಜರ್ನಿ ಆಗಿರಲಿಲ್ಲ. ಬಲಿಪಶು ಆಗಿ ನಂತರ ಬದುಕುಳಿಯುವವರೆಗಿನ ಜರ್ನಿ ಇದು. ಈ ಐದು ವರ್ಷಗಳಿಂದ, ನನ್ನ ಮೇಲೆ ನಡೆದ ಹಲ್ಲೆಯಿಂದಾಗಿ ದೇಶದಲ್ಲಿ ನನ್ನ ಹೆಸರು ಮತ್ತು ನನ್ನ ಗುರುತನ್ನು ಹತ್ತಿಕ್ಕಲಾಗಿದೆ" ಎಂದು ಭಾವನಾ ಬರೆದುಕೊಂಡಿದ್ದರು.
"ನಾನು ಅಪರಾಧ ಮಾಡಿದವಳಲ್ಲ. ಆದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆಯಿತು. ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆದಾಗ ಸಾಕಷ್ಟು ಜನ ಜೊತೆಗೆ ನಿಂತು. ಇದನ್ನು ನೋಡಿದಾಗ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ಮನವರಿಕೆ ಆಗಿದೆ. ನ್ಯಾಯವು ಗೆಲ್ಲಲು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು, ಬೇರೆ ಯಾರು ಮತ್ತೆ ಇಂತಹ ಸ್ಥಿತಿಗೆ ಒಳಗಾಗದಂತೆ ನೋಡಿಕೊಳ್ಳಲು ನಾನು ನನ್ನ ಹೋರಾಟ ಮುಂದುವರೆಸುತ್ತೇನೆ" ಎಂದು ಭಾವನಾ ಪೋಸ್ಟ್ ಮಾಡಿದ್ದರು.
'ಜಾಕಿ' ಸಿನಿಮಾ ಮೂಲಕ ಭಾವನಾ ಸ್ಯಾಂಡಲ್ವುಡ್ ಪ್ರವೇಶಿಸಿದರು. ಬಳಿಕ 'ರೋಮಿಯೋ', 'ಯಾರೇ ಕೂಗಾಡಲಿ', 'ಟಗರು', 'ಭಜರಂಗಿ-2' ಹೀಗೆ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಮಿಂಚಿದರು. ಸದ್ಯ 'ಪಿಂಕ್ ನೋಟ್' ಹಾಗೂ 'ಉತ್ತರಕಾಂಡ' ಎಂಬ 2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











