ನಟ ವಿಶಾಲ್ ಮೈ ನಡುಗುತ್ತಿದ್ದದ್ದು ಏಕೆ? ಸ್ನೇಹಿತನ ಆರೋಗ್ಯದ ಬಗ್ಗೆ ನಟಿ ಖುಷ್ಬೂ ಮಾತು
ತಮಿಳು ನಟ ವಿಶಾಲ್ ಆರೋಗ್ಯ ಸ್ಥಿತಿಯ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದೀಗ ಈ ಬಗ್ಗೆ ನಟಿ ಖುಷ್ಬೂ ಸುಂದರ್ ಮಾತನಾಡಿದ್ದಾರೆ. ಭಾನುವಾರ ಸಂಜೆ ಚೆನ್ನೈನಲ್ಲಿ ನಡೆದ 'ಮದಗಜರಾಜ' ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ವಿಶಾಲ್ ನಟಿಸಿದ್ದರು. ಜ್ವರದಿಂದ ಬಳಲುತ್ತಿದ್ದ ಅವರು ನಿಲ್ಲಲು, ಮಾತನಾಡಲು ಕಷ್ಟಪಡುತ್ತಿದ್ದರು.
ಆಕ್ಷನ್ ಹೀರೊ ವಿಶಾಲ್ ಅವರನ್ನು ಆ ಸ್ಥಿತಿಯಲ್ಲಿ ನೋಡಿದವರು ಶಾಕ್ ಆಗಿದ್ದರು. ಇದ್ದಕ್ಕಿದಂತೆ ನಟನಿಗೆ ಏನಾಯ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಆರೈಸಿದ್ದರು. ಅದೇ ಕಾರ್ಯಕ್ರಮದಲ್ಲಿ ಹಿರಿಯ ನಟಿ ಖುಷ್ಬೂ ಕೂಡ ಭಾಗಿ ಆಗಿದ್ದರು. ವಿಶಾಲ್ ಅವರನ್ನು ನೋಡಿದ ಕೂಡಲೇ ಅಪ್ಪಿ ಮಾತನಾಡಿಸಿದ್ದರು. ಉಭಯಕುಶಲೋಪರಿ ವಿಚಾರಿಸಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಏನಾಯ್ತು. ವಿಶಾಲ್ ಆರೋಗ್ಯದ ಬಗ್ಗೆ ಖುಷ್ಬು ಮಾಹಿತಿ ನೀಡಿದ್ದಾರೆ. ತೆಲುಗಿನ ಸುಮನ್ ಟಿವಿ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಈ ವೇಳೆ ವಿಶಾಲ್ ಜೊತೆಗಿನ ಒಡನಾಟದ ಬಗ್ಗೆಯೂ ಮಾತನಾಡಿದ್ದಾರೆ. ವಿಶಾಲ್ ಹಾಗೂ ಖುಷ್ಬು ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೂ ಇಬ್ಬರ ನಡುವೆ ಆತ್ಮೀಯ ಬಾಂಧವ್ಯ ಇದೆ. ಆ ಬಗ್ಗೆಯೂ ಖುಷ್ಬು ಪ್ರತಿಕ್ರಿಯಿಸಿದ್ದಾರೆ.
"ವಿಶಾಲ್ ಅವರಿಗೆ ಡೆಂಗ್ಯೂ ಫೀವರ್ ಇತ್ತು. ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅವತ್ತು ಕಾರ್ಯಕ್ರಮದಲ್ಲಿ ನೋಡಿ ಶಾಕ್ ಆಗಿತ್ತು. 12 ವರ್ಷಗಳ ಹಿಂದಿನ 'ಮದಗಜರಾಜ' ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಚಿತ್ರದಲ್ಲಿ ಎಷ್ಟು ಚೆನ್ನಾಗಿ ನಟಿಸಿದ್ದರು. ಎಷ್ಟು ಖಡಕ್ ಆಗಿದ್ದರು. ಆದರೆ ಅವತ್ತು ಜ್ವರದಿಂದ ಬಳಲುತ್ತಿದ್ದರು. ಬಹಳ ಸುಸ್ತಾಗಿದ್ದರು" ಎಂದು ಖುಷ್ಬು ಪ್ರತಿಕ್ರಿಯಿಸಿದ್ದಾರೆ.
"ಅಷ್ಟು ಜ್ವರ ಇದ್ದರೂ ಯಾಕೆ ಬಂದೆ ಎಂದು ಕೇಳಿದೆ. ಇಲ್ಲ, 11 ವರ್ಷಗಳ ಬಳಿಕ ನನ್ನ ಸಿನಿಮಾ ಬರ್ತಿದೆ. ನಾನು ಇಲ್ಲದೇ ಇದ್ದರೆ ಹೇಗೆ ಎಂದು ಬಂದೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಬೇಸರವಾಯಿತು. ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಡ್ರಿಪ್ಸ್ ಹಾಕಿಸಿದ್ದೆವು. ಈಗ ಆರಾಮಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಖುಷ್ಬು ತಿಳಿಸಿದ್ದಾರೆ.
ಡೆಂಗ್ಯೂ ಜ್ವರ ಆಗಿದ್ದರಿಂದ ನಡುಗುತ್ತಿದ್ದರು. 103% ಜ್ವರ ಇತ್ತು. ಅಷ್ಟು ಜ್ವರ ಇದ್ದರೆ ಖಂಡಿತ ಮೈ ನಡುಗುತ್ತದೆ ಎಂದು ಖುಷ್ಬು ಹೇಳಿದ್ದಾರೆ. ಇನ್ನು ವಿಶಾಲ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿ "ಅದೇನೋ ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಉತ್ತಮ ಒಟನಾಟ ಇದೆ. ನಾವಿಬ್ಬರು ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಒಂದು ಪಾರ್ಟಿಯಲ್ಲಿ ಭೇಟಿ ಆಗಿದ್ದೆವು. ಬಳಿಕ ಸ್ನೇಹ ಮುಂದುವರೆಯಿತು. ಆತನ ನಟನೆ, ಸಿನಿಮಾಗಳು ಅಂದ್ರೆ ಇಷ್ಟ" ಎಂದು ಖುಷ್ಬೂ ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಾರೆಯರ ಬಗ್ಗೆ ಈಗ ಏನೇನೋ ಸುದ್ದಿ ಹರಡುತ್ತಾರೆ. ಅದು ಟ್ರೆಂಡ್ ಆಗಿಬಿಟ್ಟಿದೆ, ಅದೇ ರೀತಿ ವಿಶಾಲ್ ಆರೋಗ್ಯ ಸಮಸ್ಯೆ ಬಗ್ಗೆಯೂ ಸುದ್ದಿ ತೇಲಿಬಿಡುತ್ತಿದ್ದಾರೆ. ಅದೆಲ್ಲಾ ನಿಜ ಅಲ್ಲ ಎಂದು ಖುಷ್ಬು ಸ್ಪಷ್ಟನೆ ನೀಡಿದ್ದಾರೆ. 'ಮದಗಜ ರಾಜ' ಚಿತ್ರಕ್ಕೆ ಖುಷ್ಬು ಅವರ ಪತಿ ಸುಂದರ್ ಸಿ. ಆಕ್ಷನ್ ಕಟ್ ಹೇಳಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಅಂಜಲಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಕಾರಣಾಂತರಗಳಿಂದ 'ಮದಗಜ ರಾಜ' ಸಿನಿಮಾ ಬಿಡುಗಡೆ 10 ವರ್ಷಗಳ ಕಾಲ ತಡವಾಗಿತ್ತು. ಇದೀಗ ಸ್ವತಃ ವಿಶಾಲ್ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದ್ದಾರೆ. ಇನ್ನು ರಿಯಲ್ ಸ್ಟಂಟ್ ಮಾಡುವುದರಲ್ಲಿ ವಿಶಾಲ್ ನಿಸ್ಸೀಮರು. ಹಾಗಾಗಿ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿ ಗಾಯಗೊಂಡಿರುವುದು ಇದೆ. 'ತುಪ್ಪಾರಿವಾಲನ್- 2' ಎಂಬ ಚಿತ್ರವನ್ನು ಸದ್ಯ ವಿಶಾಲ್ ನಿರ್ದೇಶಿಸಿ ನಟಿಸುತ್ತಿದ್ದಾರೆ.


Click it and Unblock the Notifications











