8ನೇ ತರಗತಿಗೆ ಶಾಲೆ ಬಿಟ್ಟ ನಟಿ ಮೀನಾ ಮುಂದೆ ಎಂಎ ಪದವಿ ಪಡೆದಿದ್ದು ಹೇಗೆ?
ಬಹುಭಾಷಾ ನಟಿ ಮೀನಾ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಕನ್ನಡದ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ವಿಷ್ಣುವರ್ಧನ್, ರವಿಚಂದ್ರನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ ಮುಂದೆ ನಾಯಕಿಯಾಗಿ ಮಿಂಚಿದ್ದರು.
ದಕ್ಷಿಣಭಾರತದ ಖ್ಯಾತ ನಟರೊಟ್ಟಿಗೆ ಮೀನಾ ನಟಿಸಿ ಗೆದ್ದರು. ಚಿರಂಜೀವಿ, ವಿಷ್ಣುವರ್ಧನ್, ರಜನಿಕಾಂತ್, ವಿಜಯ್ ಕಾಂತ್, ವಿಜಯ್, ಅಜಿತ್, ಮೋಹನ್ ಲಾಲ್ ಜೊತೆಗೆ ನಟಿಸಿ ಮೋಡಿ ಮಾಡಿದರು. ಚಿಕ್ಕಂದಿನಲ್ಲಿ ಬುದ್ಧಿ ಬರುವುದಕ್ಕೆ ಮುನ್ನವೇ ಸಿನಿಮಾಗಳಲ್ಲಿ ಮೀನಾ ನಟಿಸಲು ಆರಂಭಿಸಿದರು.

ರಜನಿಕಾಂತ್ ಜೊತೆ ಬಾಲನಟಿಯಾಗಿ ನಟಿಸಿದ್ದ ಮೀನಾ ಮುಂದೊಂದು ದಿನ ನಾಯಕಿಯಾಗಿ ನಟಿಸಿದ್ದು ವಿಪರ್ಯಾಸ. 'ಮುತ್ತು', 'ಅಣ್ಣಾತ್ತೆ' ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಸಂದರ್ಶನವೊಂದರಲ್ಲಿ ಮಾತನಾಡಿರುವ ಮೀನಾ ತಮ್ಮ ಸಿನಿಕಿರಿಯರ್, ವೈಯಕ್ತಿಕ ಜೀವನ ಎಲ್ಲದರ ಬಗ್ಗೆಯೂ ವಿವರಿಸಿದ್ದಾರೆ. ಅದರಲ್ಲಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದ್ದಾರೆ.
ಸಾಕಷ್ಟು ಜನ ಬಾಲಕಲಾವಿದರು ಮುಂದೆ ನಾಯಕ, ನಾಯಕಿಯರಾಗಿ ನಟಿಸಿರುವ ಉದಾಹರಣೆಯಿದೆ. ಸಿನಿಮಾಗಳ ಕಾರಣಕ್ಕೆ ಸರಿಯಾಗಿ ಓದಲು ಸಾಧ್ಯವಾಗದೇ ಅರ್ಧಕ್ಕೆ ಶಾಲೆ ಬಿಟ್ಟವರು ಇದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಮೀನಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿಬಿಟ್ಟಿದ್ದರು. ಹಾಗಾಗಿ 8ನೇ ತರಗತಿ ಬಳಿಕ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ.
ತಮ್ಮ ವಿದ್ಯಾಭ್ಯಾಸದ ಬಗ್ಗೆ ಮೀನಾ ಮಾತನಾಡುತ್ತಾ "8ನೇ ತರಗತಿ ಬಳಿ ಶಾಲೆಗೆ ಹೋಗಲಿಲ್ಲ. ಆ ಬಳಿಕ ಬಹಳ ದಿನಗಳ ನಂತರ ಬಿಎ ಡಿಗ್ರಿ ಪಡೆದೆ. ಶಾಲಾ, ಕಾಲೇಜಿಗೆ ಹೋಗದೇ ಕೂಡ ಕರಸ್ಪಾಂಡೆನ್ಷ್ನಲ್ಲಿ ಓದಬಹುದು ಎನ್ನುವುದು ಗೊತ್ತಾಗಿ ಸಿನಿಮಾಗಳಲ್ಲಿ ನಟಿಸುವುದು ಜೊತೆ ಜೊತೆಗೆ ಬಿಎ ಪದವಿ ಪಡೆದೆ. ಬಳಿಕ ಎಂಎ ಹಿಸ್ಟರಿ ಓದಿದೆ. ಶೂಟಿಂಗ್ ನಡು ನಡುವೆ ಓದುವುದು ಕಷ್ಟವಾಗಿತ್ತು" ಎಂದಿದ್ದಾರೆ.

ಬಾಲನಟಿಯಾಗಿ ಮೀನಾ ಅವರನ್ನು ಖ್ಯಾತ ನಟ ಶಿವಾಜಿ ಗಣೇಶನ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈ ಬಗ್ಗೆ ಮೀನಾ ಮಾತನಾಡುತ್ತಾ "ನನಗಾಗ ಮೂರುವರೆ ವರ್ಷ ವಯಸ್ಸು. ಅವರ ಬರ್ತ್ಡೇ ಫಂಕ್ಷನ್ಗೆ ಅಮ್ಮ ಕರೆದುಕೊಂಡು ಹೋಗಿದ್ದರು. ಆಗ ನೋಡಿದ್ದರು. ಅದೇ ಸಮಯದಲ್ಲಿ ಅವರ 'ನೆಂಜಂಗಳ್' ಎನ್ನುವ ಚಿತ್ರಕ್ಕೆ ಬಾಲನಟಿ ಹುಡುಕಾಟದಲ್ಲಿದ್ದರು. ನನ್ನ ಶಾಲೆಯಿಂದ ನೇರವಾಗಿ ಚಿತ್ರತಂಡದವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಸಲಿಗೆ ಅದು ಹುಡುಗನ ಪಾತ್ರ ಆಗಿತ್ತು. ಶಿವಾಜಿ ಸರ್ ಹೇಳಿ ಅದನ್ನು ಹುಡುಗಿ ಪಾತ್ರವಾಗಿ ಬದಲಿಸಿದರು. ಹಾಗೆ ನಾನು ಚಿತ್ರರಂಗಕ್ಕೆ ಬಂದೆ" ಎಂದು ನೆನಪಿಸಿಕೊಂಡಿದ್ದಾರೆ.
ಮೀನಾ ಪುತ್ರಿ ನೈನಿಕಾ ಕೂಡ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ದಳಪತಿ ವಿಜಯ್ ನಟನೆಯ 'ತೇರಿ' ಚಿತ್ರದಲ್ಲಿ ನಟಿಸಿದ್ದರು. ಆ ಕಾಂಬಿನೇಷನ್ ಕ್ಲಿಕ್ ಆಗಿತ್ತು. ಬಳಿಕ ಓದಿನ ಕತೆ ಹೆಚ್ಚಿನ ಗಮನ ಹರಿಸಿದ್ದಾರೆ. ಸದ್ಯ 8ನೇ ತರಗತಿ ಪಾಸ್ ಆಗಿ 9ನೇ ತರಗತಿಗೆ ಮಗಳು ಹೋಗಿದ್ದಾಳೆ ಎಂದು ಮೀನಾ ಹೇಳಿದ್ದಾರೆ.
ನೈನಿಕಾಗೆ ಸದ್ಯ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಮ್ಯೂಸಿಕ್ ಬಗ್ಗೆ ಆಸಕ್ತಿಯಿದೆ. ಮುಂದೊಂದು ದಿನ ತಾನು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದರೆ ಯಾವುದೇ ಅಭ್ಯಂತರವಿಲ್ಲ. ನಾನಂತೂ ಆಕೆಯ ಮೇಲೆ ಯಾವುದೇ ಒತ್ತಡ ಹೇರಲ್ಲ. ಇನ್ನು ನನ್ನ ಸಿನಿಕರಿಯರ್ ಸಕ್ಸಸ್ಗೆ ನಮ್ಮ ತಾಯಿ ಮುಖ್ಯ ಕಾರಣ. ಪ್ರತಿಕ್ಷಣ ಅವ್ರು ನನ್ನೊಟ್ಟಿಗೆ ನಿಲ್ಲುತ್ತಿದ್ದರು. 'ಪಡೆಯಪ್ಪ' ಚಿತ್ರದಲ್ಲಿ ರಮ್ಯಾಕೃಷ್ಣ ಮಾಡಿರುವ ನೀಲಾಂಬರಿ ಪಾತ್ರ ನಾನು ಮಾಡಬೇಕಿತ್ತು. ಆದರೆ ನೆಗೆಟಿವ್ ರೋಲ್ ಬೇಡ ಎಂದು ಅಮ್ಮ ಹೇಳಿದ್ದರು. ಹಾಗಾಗಿ ನಟಿಸಲಿಲ್ಲ ಎಂದು ಮೀನಾ ವಿವರಿಸಿದ್ದಾರೆ.


Click it and Unblock the Notifications











