ಸಿಎಸ್ಕೆ ಸೋತಿದ್ದಕ್ಕೆ ಕಣ್ಣಲ್ಲಿ ನೀರು ತುಂಬಿಕೊಂಡ ಈ ಹುಡುಗಿ ಫೇಮಸ್ ನಟಿ ಗೊತ್ತಾ?!
ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಜರುಗುತ್ತಿದ್ದು, ದಿನದಿಂದ ದಿನಕ್ಕೆ ಪಂದ್ಯಗಳು ಹೆಚ್ಚು ರೋಚಕತೆಯನ್ನು ಹುಟ್ಟುಹಾಕುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಪಂದ್ಯಗಳು ಕೊನೆಯ ಎಸೆತದವರೆಗೂ ಬರುತ್ತಿದ್ದು, ಉಗುರು ಕಚ್ಚಿ ನೋಡುವಷ್ಟು ಕುತೂಹಲ ಕೆರಳಿಸುತ್ತಿವೆ.
ಇನ್ನು ನಿನ್ನೆ ( ಏಪ್ರಿಲ್ 12 ) ಚೆನ್ನೈನ ಎಂ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಲೀಗ್ ಹಂತದ ಹದಿನೇಳನೇ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 176 ರನ್ಗಳ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹೋಮ್ ಗ್ರೌಂಡ್ನಲ್ಲಿಯೇ 3 ರನ್ಗಳ ಸೋಲನ್ನು ಅನುಭವಿಸಿತು. ಕೊನೆಯ ಎಸೆತದವರೆಗೂ ಗೆಲ್ಲುವ ನಿರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಹುಟ್ಟುಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದಲ್ಲಿ ನಿರಾಸೆ ಮೂಡಿಸಿತು.
ಕೊನೆಯ 6 ಎಸೆತಗಳಲ್ಲಿ ಗೆಲ್ಲಲು 20 ರನ್ಗಳ ಅಗತ್ಯವಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಎರಡನೇ ಹಾಗೂ ಮೂರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಗೆಲ್ಲುವ ಅವಕಾಶವನ್ನು ಹೆಚ್ಚು ಮಾಡಿದ್ದರು. ಫಿನಿಷರ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂ ಎಸ್ ಧೋನಿ ಪಂದ್ಯ ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಹೆಚ್ಚಿತ್ತು. ಆದರೆ ಕೊನೆಯ 3 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಆಗಿದ್ದೇ ಬೇರೆ. ಬೌಲರ್ ಸಂದೀಪ್ ಶರ್ಮಾ ಹಾಕಿದ ಯಾರ್ಕರ್ ಎಸೆತಗಳಿಗೆ ಧೋನಿ ಹಾಗೂ ಜಡೇಜಾ ಇಬ್ಬರೂ ಸಹ ಬೌಂಡರಿ ಬಾರಿಸಲಾಗಲಿಲ್ಲ.
ಕೊನೆಯ ಮೂರೂ ಎಸೆತಗಳಲ್ಲಿಯೂ ಸಹ ಒಂದೊಂದು ರನ್ ಮಾತ್ರ ಹರಿದುಬಂದಿತ್ತು. ಹೀಗೆ ಗೆಲ್ಲುವ ನಿರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಹುಟ್ಟಿಸಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಂಡು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕಣ್ಣೀರು ಹಾಕಿದರು. ಇನ್ನು ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಾಗ ಹುಡುಗಿಯೊಬ್ಬಳು ಕಣ್ಣೀರು ಹಾಕಿದ್ದು ವೈರಲ್ ಆಗಿತ್ತು ಹಾಗೂ ಇದನ್ನು ಆರ್ಸಿಬಿ ತಂಡದ ಬದ್ಧ ವೈರಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಟ್ರೋಲ್ ಮಾಡಿದ್ದರು.

ಇದೀಗ ಇದಕ್ಕೆ ತಕ್ಕ ಉತ್ತರವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ನೀಡಿದ್ದಾರೆ. ಚೆನ್ನೈ ಕೊನೆ ಹಂತದಲ್ಲಿ ಸೋತದ್ದಕ್ಕೆ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ ಚೆನ್ನೈ ಸೂಪರ್ ಕಿಂಗ್ಸ್ ಮಹಿಳಾ ಅಭಿಮಾನಿಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೊಗಳ ಪೈಕಿ ತಮಿಳಿನ ಫೇಮಸ್ ನಟಿ ಸಹ ಸೇರಿಕೊಂಡಿದ್ದಾರೆ.
ಹೌದು, ಮುದ್ದಾದ ಹುಡುಗಿಯೊಬ್ಬಳು ಚೆನ್ನೈ ಸೂಪರ್ ಕಿಂಗ್ಸ್ ಸೋತಾಗ ತಲೆ ಮೇಲೆ ಕೈಹೊತ್ತು ಕಣ್ಣಲ್ಲಿ ನೀರು ತುಂಬಿಕೊಂಡ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಈಕೆ ಯಾರು ಎಂಬ ಹುಡುಕಾಟ ನಡೆಸಿದ್ದಾರೆ. ಅಸಲಿಗೆ ಈಕೆಯ ಹೆಸರು ಮೇಘಾ ಆಕಾಶ್. ಈಕೆ ಮೂಲತಃ ಚೆನ್ನೈನವಳಾಗಿದ್ದು, ತೆಲುಗು ಹಾಗೂ ತಮಿಳಿನ ಹದಿನೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ರಜನಿಕಾಂತ್ ನಟನೆಯ ಪೆಟ್ಟಾ ಚಿತ್ರದಲ್ಲಿಯೂ ಸಹ ನಟಿಸಿದ್ದಾಳೆ.


Click it and Unblock the Notifications











