"ನನ್ನ ಹಸಿಬಿಸಿ ಫೋಟೊ, ವಿಡಿಯೊಗಳನ್ನೆಲ್ಲಾ ಸುಟ್ಟು ಹಾಕಬೇಕು": 'ಕಂಠಿ' ಸಿನಿಮಾ ನಟಿ ಆವೇದನೆ
ತಮಿಳು ನಟಿ ಮುಮ್ತಾಜ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮುಂಬೈ ಮೂಲದ ಬೆಡಗಿ ತಮ್ಮ ಮೈಮಾಟ ಪ್ರದರ್ಶನದಿಂದಲೇ ಹೆಚ್ಚು ಕ್ರೇಜ್ ಸಂಪಾದಿಸಿದ್ದರು. ಬೋಲ್ಡ್ ಪಾತ್ರಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಚೆಲುವೆ ಈಗ ಸೈಲೆಂಟ್ ಆಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಚಿತ್ರದಲ್ಲಿ ನಟಿಸಿಲ್ಲ.
ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಮುಮ್ತಾಜ್ ಯಾಕಾದರೂ ಆ ರೀತಿ ಬೋಲ್ಡ್ ಆಗಿ ನಟಿಸಿದೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇವತ್ತಿಗೂ ನಾನು ಹಾಟ್ ಆಗಿ ಕಾಣಿಸಿಕೊಂಡ ಫೋಟೊ, ವಿಡಿಯೋಗಳು ವೈರಲ್ ಆಗುತ್ತಿವೆ. ನನ್ನ ಬಳಿ ಜಾಸ್ತಿ ಹಣ ಇದ್ದರೆ ಗೂಗಲ್ನಲ್ಲಿ ಇರುವ ಎಲ್ಲಾ ಫೋಟೊ, ವಿಡಿಯೋ ತೆಗೆದುಬಿಡುತ್ತೀನಿ ಎಂದಿದ್ದಾರೆ. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿರುವ ನಟಿ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

ತಳುಕು ಬಳುಕಿನ ಸಿನಿಮಾ ಪ್ರಪಂಚದಲ್ಲಿ ಎಲ್ಲವೂ ಕಲರ್ಫುಲ್ ಆಗಿ ಕಾಣುತ್ತಿದೆ. ಸಿನಿಮಾ ತಾರೆಯರ ಲೈಫ್ ಸಿಕ್ಕಾಪಟ್ಟೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. ಆದರೆ ಎಷ್ಟೇ ಆದರೂ ಅವರು ಮನುಷ್ಯರು. ಅವರಿಗೂ ಕಾಯಿಲೆ ಕಸಾಲೆ ಬರುತ್ತದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ನಟ, ನಟಿಯರು ತಂತ್ರಜ್ಞರು ಬಳಲುವ ಸುದ್ದಿ ಕೇಳುತ್ತಿರುತ್ತೇವೆ. ನಟಿ ಮುಮ್ತಾಜ್ ಕೂಡ ಆಟೊ ಇಮ್ಯೂನ್ ಡಿಸಾಡರ್ ಎನ್ನುವ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಸಾಕಷ್ಟು ನೋವು ಅನುಭವಿಸಿದ್ದಾಗಿ ಹೇಳಿದ್ದಾರೆ.
ತಮಿಳಿನ 'ರಾಜಾಧಿ ರಾಜ' ಚಿತ್ರದಲ್ಲಿ ರಾಘವ ಲಾರೆನ್ಸ್ ಜೊತೆ ಕೊನೆಯದಾಗಿ ಮುಮ್ತಾಜ್ ನಟಿಸಿದ್ದರು. ಆ ಬಳಿಕ ಆಟೊ ಇಮ್ಯೂನ್ ಸಮಸ್ಯೆ ಶುರುವಾಯಿತು. ನಿಲ್ಲಲು ಆಗದೇ, ಕೂರಲೂ ಸಾಧ್ಯವಾಗದೇ, ಶರೀರವನ್ನು ಕದಲಿಸಲು ಸಾಧ್ಯವಾಗದೇ ನರತಯಾತನೆ ಅನುಭವಿಸಿದೆ. ಮಾನಸಿಕವಾಗಿಯೂ ಕುಗ್ಗಿದ್ದೆ. ಯಾಕೆ ಅಳುತ್ತಿದ್ದೆ ಎನ್ನುವುದು ನನಗೆ ಗೊತ್ತಾಗುತ್ತಿರಲಿಲ್ಲ. ಮಾನಸಿಕ ಕಾಯಿಲೆ ಎಂದರು. ಒಮ್ಮೆ ಎರಡೂವರೆ ಗಂಟೆ ಅಳುತ್ತಲೇ ಇದ್ದೆ. ನನ್ನ ಸಹೋದರ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಮುಮ್ತಾಜ್ ಭಾವುಕರಾಗಿದ್ದಾರೆ.
"ನಾನು ಗ್ಲಾಮರಸ್ ಆಗಿ ನಟಿಸಿದ್ದಕ್ಕೆ ಈಗ ಬೇಸರವಾಗುತ್ತಿದೆ. ನಾನು ಅಲ್ಲಾ ಬಳಿ ಸಾಕಷ್ಟು ಬಾರಿ ಕೇಳಿದ್ದೇನೆ, ಅಲ್ಲಾ ಯಾಕೆ ನನಗೆ ಈ ಬಗ್ಗೆ ಸರಿಯಾಗಿ ನೀವು ಗೈಡ್ ಮಾಡಲಿಲ್ಲ. ಗೂಗಲ್ನಲ್ಲಿ ಯಾರು ನನ್ನ ಹಾಟ್ ಫೋಟೊಗಳನ್ನು ನೋಡಬಾರದು. ನನ್ನ ಬಳಿ ಹೆಚ್ಚು ಹಣ ಇದ್ದರೆ ನಾನು ನನ್ನ ಎಲ್ಲಾ ಸಿನಿಮಾ ರೈಟ್ಸ್ ಖರೀದಿಸಿ, ಫೋಟೊ, ವಿಡಿಯೋ ಎಲ್ಲಾ ತಂದು ಸುಟ್ಟುಹಾಕಿಬಿಡುತ್ತೀನಿ. ಅದು ಯಾರಿಗೂ ಸಿಗಬಾರದು ಎಂದು ನನಗೆ ಅನಿಸುತ್ತದೆ. ಆದರೆ ನಾನು ಏನು ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.

ನಾನು ಹಣಕ್ಕಾಗಿ ಚಿತ್ರರಂಗಕ್ಕೆ ಬರಲಿಲ್ಲ. ಒಮ್ಮೆ ಬಂದ ಬಳಿಕ ನಾನು ಇಂಡಿಪೆಂಡೆಂಟ್ ಆಗಬೇಕು. ಮನೆಯಲ್ಲಿ ಹಣ ಕೇಳಬಾರದು ಎಂದುಕೊಂಡೆ. ಬಳಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡೆ. ಬಳಿಕ ಒಬ್ಬರ ಮಾರ್ಗದರ್ಶನದಂತೆ ನಾನು ಆಧ್ಯಾತ್ಮದತ್ತ ಹೆಚ್ಚು ವಾಲಿದೆ. ಕೆಲವರು ಇನ್ಸ್ಟಾಗ್ರಾಮ್ನಲ್ಲಿ ಏನೇನೋ ಕಾಮೆಂಟ್ ಮಾಡುತ್ತಾರೆ. ಮಾರ್ಕೆಟ್ ಹೋಯ್ತು, ಅದಕ್ಕೆ ನಾನು ಹೀಗೆ ಮಾಡ್ತಿದ್ದೀನಿ ಎನ್ನುತ್ತಾರೆ"
"ನನ್ನ ವಯಸ್ಸಿನ ಸಾಕಷ್ಟು ನಟಿಯರು ಇವತ್ತಿಗೂ ಗ್ಲಾಮರಸ್ ಆಗಿ ಇದ್ದಾರೆ. ಇನ್ನು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಅಲ್ಲಾ ಗೈಡ್ ಮಾಡದೇ ಇದ್ದಿದ್ದರೆ ನಾನು ಇವತ್ತಿಗೂ ಅದನ್ನೇ ಮಾಡುತ್ತಾ ಇರುತ್ತಿದ್ದೆ. ಅಲ್ಲಾ ಎಲ್ಲಾ ಗೊತ್ತು. ಯಾರಿಗೆ ಏನು ಮಾಡಬೇಕು ಎಂದು. ಅವರು ಮಾರ್ಗದರ್ಶನ ನೀಡುತ್ತಾರೆ" ಎಂದಿದ್ದಾರೆ. ಮದುವೆ ಆಗುವ ಆಲೋಚನೆ ಇಲ್ಲ. ಅಣ್ಣನ ಕುಟುಂಬವೇ ನನಗೆ ಎಲ್ಲಾ" ಎಂದು ಮುಮ್ತಾಜ್ ಹೇಳಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಮುಮ್ತಾಜ್ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದರು. ತೆಲುಗು ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. ನಟಿಸಿದ್ದಕ್ಕಿಂತ ಸ್ಪೆಷಲ್ ಸಾಂಗ್ಗಳಲ್ಲಿ ಕುಣಿದಿದ್ದೇ ಹೆಚ್ಚು. ಕನ್ನಡದಲ್ಲಿ ಶ್ರೀಮುರಳಿ ನಟನೆಯ 'ಕಂಠಿ' ಚಿತ್ರದ 'ಹುಷಾರು ಹುಷಾರು' ಹಾಡಿಗೆ ಹೆಜ್ಜೆ ಹಾಕಿದ್ದರು.


Click it and Unblock the Notifications











