ಬೆಂಗಳೂರು: ಸೆಟ್ನಲ್ಲಿ ನಿರ್ದೇಶಕ, ನಟ ಎಸಗಿದ ದೌರ್ಜನ್ಯ ಬಿಚ್ಚಿಟ್ಟ ನಟಿ
ಕನ್ನಡ ಸೇರಿದಂತೆ ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ನಟಿಯೊಬ್ಬರ ವಿರುದ್ಧ ಮಲಯಾಳಂ ಸಿನಿಮಾ ನಿರ್ದೇಶಕನೊಬ್ಬ ಚಿತ್ರೀಕರಣ ಸೆಟ್ನಲ್ಲಿ ಕೆಟ್ಟದಾಗಿ ವರ್ತಿಸಿದ್ದಲ್ಲದೆ, ನಟಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ನಟಿಯು ಬೆಂಗಳೂರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ಕನ್ನಡದ 'ಗೇಮ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನೇಹಾ ಸಕ್ಸೇನಾ ತಮಗಾದ ಕೆಟ್ಟ ಅನುಭವವನ್ನು, ಚಿತ್ರೀಕರಣ ಸೆಟ್ನಿಂದ ತಾವು ಪರಾರಿ ಆಗಿ ಬೆಂಗಳೂರಿಗೆ ಬಂದಿದ್ದನ್ನು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.
ನೇಹಾ ಸಕ್ಸೇನಾ ಅನ್ನು ಮಲಯಾಳಂ ಮೂಲದ ನಿರ್ದೇಶಕನೊಬ್ಬ ತಮಿಳು ಸಿನಿಮಾದಲ್ಲಿ ನಟಸುವಂತೆ ಕೇಳಿದ್ದಾನೆ. ನಿರ್ದೇಶಕನ ಮಗನೇ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು, ಆ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾನೆ. ಪ್ರಕಾಶ್ ರೈ ಅಥವಾ ನಾಸೀರ್ ಅವರೆದುರು ನೀವು ನಟಿಸಬೇಕಾಗಿರುತ್ತದೆ ಎಂದು ಸಹ ಆ ನಿರ್ದೇಶಕ ಹೇಳಿದ್ದಾನೆ. ಲಾಕ್ಡೌನ್ ಸಮಯದಲ್ಲಿ ಹೆಚ್ಚು ಕೆಲಸವಿಲ್ಲದ ಕಾರಣ ನಟಿ ನೇಹಾ 50,000 ಅಡ್ವಾನ್ಸ್ ಪಡೆದು ಒಪ್ಪಿಗೆ ಸೂಚಿಸಿದ್ದಾರೆ. ಹೊಸ ಹೀರೋ ಜೊತೆಗೆ ನಟಿಸಲು ಯಾವ ದೊಡ್ಡ ನಟಿಯರೂ ಒಪ್ಪದ ಕಾರಣ ನೀವು ನಟಿಸಿ ಸಹಾಯ ಮಾಡಬೇಕು ಎಂದು ಆ ನಿರ್ದೇಶಕ ಕೇಳಿಕೊಂಡ ಎಂದು ನಟಿ ನೇಹಾ ಸಕ್ಸೇನಾ ಹೇಳಿದ್ದಾರೆ.
''ನಾನು ಸಿನಿಮಾ ಸೆಟ್ಗೆ ಹೋದಾಗಲೇ ಅನುಮಾನ ಬಂದಿತ್ತು. ಆ ಸೆಟ್ನಲ್ಲಿ ಚಿತ್ರೀಕರಣದಲ್ಲಿ ಇಲ್ಲದವರು ಹಲವಾರು ಮಂದಿ ಇದ್ದರು. ಎರಡು ದಿನಗಳ ಚಿತ್ರೀಕರಣದ ಬಳಿಕ ನಾನು ನಿರ್ದೇಶಕರ ಬಳಿ ಹೋಗಿ, ನನಗೆ ಇಂಥಹಾ ವಾತಾರಣದಲ್ಲಿ ನಟಿಸಲು ಕಷ್ಟವಾಗುತ್ತಿದೆ ಎಂದೆ. ಅಷ್ಟೇ ಅಲ್ಲದೆ ಕೆಲವು ಅನವಶ್ಯಕ ಗ್ಲಾಮರಸ್ ದೃಶ್ಯಗಳನ್ನು, ಶೃಂಗಾರಮಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಇದು ಸರಿಯಲ್ಲ, ನನ್ನ ಪಾತ್ರ ಪೋಷಣೆ ಕೆಟ್ಟದಾಗಿದೆ ಎಂದು ಸಹ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ, ನಿರ್ಮಾಪಕರಿಗೆ ಮಾಫಿಯಾ ಡಾನ್ಗಳ ಪರಿಚಯ ಇದೆ, ನೀನು ನಟಿಸದೇ ಇದ್ದರೆ ಅವರು ನಿನ್ನನ್ನು ಹೊತ್ತೊಯ್ದು ಅವರ ಕ್ಯಾಸಿನೊ ಒಳಗೆ ಕೂಡಿಹಾಕಿಕೊಂಡು ರೇಪ್ ಮಾಡಿಬಿಡುವ ಸಾಧ್ಯತೆಯೂ ಇದೆ ಎಂದು ಹೆದರಿಸಿದ'' ಎಂದಿದ್ದಾರೆ ನಟಿ ನೇಹಾ.

ಸುಳ್ಳು ಹೇಳಿದ ನಿರ್ದೇಶಕ: ನೇಹಾ
''ನಿರ್ದೇಶಕ ಹೇಳಿದಂತೆ ಆ ಸಿನಿಮಾದಲ್ಲಿ ಪ್ರಕಾಶ್ ರೈ ಆಗಲಿ ಅಥವಾ ನಾಸರ್ ಆಗಲಿ ನಟಿಸುತ್ತಿರಲಿಲ್ಲ ಅವರು ನನಗೆ ಸುಳ್ಳು ಹೇಳಿದ್ದರು. ಅವರು ಚಿತ್ರೀಕರಣ ಮಾಡುತ್ತಿದ್ದ ಸ್ಥಳ ಬಹಳ ಅಸುರಕ್ಷಿತವಾಗಿತ್ತು. ನಾನು ಹೊರಟು ಹೋಗುತ್ತೇನೆ ಎಂದಾಗ, ನಿರ್ದೇಶಕ, ''ಹಾಗೆ ಮಾಡಬೇಡಿ, ನೀವು ಹೊರಟು ಹೋದರೆ ಚಿತ್ರೀಕರಣ ನಿಂತು ಹೋಗುತ್ತದೆ. ಚಿತ್ರೀಕರಣ ನಂಬಿಕೊಂಡಿರುವ ಇತರರಿಗೂ ಸಮಸ್ಯೆ ಆಗುತ್ತದೆ ಎಂದ ಹಾಗಾಗಿ ನಾನು ಅಲ್ಲಿಯೇ ಉಳಿದೆ'' ಎಂದು ನಡೆದ ಘಟನೆ ವಿವರಿಸಿದ್ದಾರೆ ನಟಿ ನೇಹಾ.

ಜೊತೆ ಮಲಗುವಂತೆ ಕೇಳಿದ ಹೋಟೆಲ್ ಮಾಲೀಕ!
ಒಮ್ಮೆಯಂತೂ ನೇಹಾರ ಸಹ ನಟಿಯ ಪತಿ ನೇಹಾ ಜೊತೆಗೆ ಜಗಳವನ್ನೇ ಮಾಡಿದನಂತೆ. ನಿರ್ದೇಶಕರ ಮಗ (ಸಿನಿಮಾದ ಹೀರೋ) ಹಾಗೂ ಸಹ ನಟಿಯ ಪತಿ ಒಟ್ಟಿಗೆ ಮಾಡುತ್ತಿದ್ದ ಕುಕೃತ್ಯದ ಬಗ್ಗೆ ನೇಹಾ ನಿರ್ದೇಶಕರಿಗೆ ಹೇಳಿದ್ದಕ್ಕೆ ಆತ ತಮ್ಮ ಜೊತೆ ಜೋರಾಗಿ ಜಗಳ ಆಡಿದ್ದಾಗಿ ನೇಹಾ ಹೇಳಿದ್ದಾರೆ. ''ಚಿತ್ರೀಕರಣ ಮುಗಿಯುವವರೆಗೆ ಸುಮ್ಮನಿರುವಂತೆ ನಿರ್ದೇಶಕ ಮನವಿ ಮಾಡಿದ್ದಕ್ಕೆ ನಾನು ಸುಮ್ಮನಿದ್ದೆ. ಆದರೆ ಸೆಪ್ಟೆಂಬರ್ 19 ರಂದು ನಾನು ಹಾಗೂ ನನ್ನ ಸಹಾಯಕಿ ಹೋಟೆಲ್ಗೆ ತಿಂಡಿ ತಿನ್ನಲು ಹೋದೆವು. ಅದೇ ಹೋಟೆಲ್ನಲ್ಲಿ ಚಿತ್ರೀಕರಣದವರೆಲ್ಲ ತಂಗಿದ್ದರು. ಆ ಹೋಟೆಲ್ನ ಮಾಲೀಕ ನನ್ನನ್ನು ಆತನೊಟ್ಟಿಗೆ ಹಾಗೂ ಕೆಲವು ಪ್ರಮುಖ ವ್ಯಕ್ತಿಗಳೊಟ್ಟಿಗೆ ಮಲಗುವಂತೆ ಕೇಳಿಬಿಟ್ಟ. ಅದು ನನಗೆ ಬಹಳ ಕೋಪ ತರಿಸಿತು'' ಎಂದು ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ ನಟಿ.

ಹೋಟೆಲ್ ಮಾಲೀಕನನ್ನು ಪ್ರಶ್ನೆ ಮಾಡಲಿಲ್ಲ ನಿರ್ದೇಶಕ
''ಹೋಟೆಲ್ ಮಾಲೀಕನ ವರ್ತನೆ ಬಗ್ಗೆ ನಾನು ನಿರ್ದೇಶಕರಿಗೆ ಹೇಳಿದೆ. ಆದರೆ ಆತ ಈ ಬಗ್ಗೆ ಹೋಟೆಲ್ ಮಾಲೀಕನನ್ನು ಪ್ರಶ್ನೆಯೇ ಮಾಡಲಿಲ್ಲ. ಆ ಹೋಟೆಲ್ ಇನ್ನೂ ಹತ್ತು ದಿನಗಳಿಗಾಗಿ ಅವರಿಗೆ ಬೇಕಿತ್ತು ಹಾಗಾಗಿ ನಿರ್ದೇಶಕ ಹೋಟೆಲ್ ಮಾಲೀಕನನ್ನು ಪ್ರಶ್ನೆ ಮಾಡಲಿಲ್ಲ. ನನಗೆ ಮಧ್ಯರಾತ್ರಿ ಬ್ಲಾಂಕ್ ಕಾಲ್ಗಳು ಬರುತ್ತಿದ್ದವು, ನನ್ನ ರೂಮ್ನ ಬಾಗಿಲನ್ನು ತಟ್ಟಿ ಓಡಿಹೋಗುವ ಘಟನೆಗಳು ನಡೆದವು. ನಿರ್ದೇಶಕ, ನಿರ್ಮಾಪಕರ ಕಸಿನೋ ಬಗ್ಗೆ ಹೇಳಿದ್ದ ಮಾತುಗಳಿಂದ ನಾನು ಭಯ ಪಟ್ಟಿದ್ದೆ. ನಿರ್ಮಾಪಕರ, ಹೋಟೆಲ್ ಮಾಲೀಕರ ಕಾರು ಹೋಗುವವರೆಗೆ ನನ್ನ ಅಸಿಸ್ಟೆಂಟ್ಗಳನ್ನು ರೂಂನಲ್ಲಿಯೇ ಇರುವಂತೆ ಕೇಳಿಕೊಂಡು ಇರಿಸಿಕೊಳ್ಳುತ್ತಿದ್ದೆ. ನಾನು ಬಹಳ ಭಯಪಟ್ಟಿದ್ದೆ'' ಎಂದಿದ್ದಾರೆ ನಟಿ ನೇಹಾ.

ಮೆಟ್ಟಿಲ ಮೇಲಿಂದ ತಳ್ಳಿದ ನಿರ್ದೇಶಕನ ಮಗ
''ಚಿತ್ರೀಕರಣ ಮುಗಿಯಲು ಎರಡು ದಿನ ಇರುವಾಗ ಸೀನ್ ಒಂದರ ಚಿತ್ರೀಕರಣ ನಡೆಯುತ್ತಿತ್ತು. ನಿರ್ದೇಶಕನ ಮಗ (ಹೀರೊ) ನನ್ನ ಕತ್ತು ಹಿಡಿದು ಕೊಳ್ಳಬೇಕು ಆ ವೇಳೆಗೆ ಮತ್ತೊಬ್ಬ ನಟ ಬಂದು ಶೂಟ್ ಮಾಡಿ ನನ್ನನ್ನು ರಕ್ಷಿಸಬೇಕು. ಆದರೆ ನಿರ್ದೇಶಕನ ಮಗ ನನ್ನ ಕತ್ತು ಹಿಡಿದು ಮೆಟ್ಟಿಲಿನಿಂದ ಕೆಳಗೆ ದೂಡಿ ಬಿಟ್ಟ ಇದರಿಂದ ನನಗೆ ಬಹಳ ಪೆಟ್ಟಾಯಿತು. ಆದರೆ ನಿರ್ದೇಶಕ ಮತ್ತೆ ನನ್ನ ಬಳಿ ಮನವಿ ಮಾಡಿ ಇನ್ನೆರಡು ದಿನದಲ್ಲಿ ನಿಮ್ಮ ಭಾಗ ಮುಗಿಯುತ್ತದೆ ನೀವು ಹೊರಟು ಹೋಗಬಹುದು ಅಲ್ಲಿಯವರೆಗೆ ಸುಮ್ಮನಿರಿ ಎಂದ. ಅಲ್ಲದೆ ಅದೇ ವೇಳೆಗೆ ಸೆಟ್ಗೆ ಬಾಲಿವುಡ್ ನಟರೊಬ್ಬರು ಬಂದಿದ್ದರು ಅವರೆದುರು ವೃತ್ತಿಪರತೆ ಮೆರೆಯುವ ಕಾರಣದಿಂದ ನಾನೂ ಸುಮ್ಮನಿದ್ದೆ. ಆದರೆ ನಾನು ನನ್ನ ಬಾಕಿ ಸಂಭಾವನೆ ಕೇಳಿದಾಗ ನಿರ್ದೇಶಕನ ನಿಜ ಬಣ್ಣ ಬಯಲಾಯ್ತು'' ಎಂದು ಘಟನೆ ವಿವರಿಸಿದ್ದಾರೆ ನಟಿ.

ಕೈ ಹಿಡಿದು ಎಳೆದಾಡಿದ ನಿರ್ದೇಶಕ: ನೇಹಾ
''ಸಂಭಾವನೆ ಕೇಳಿದಾಗ ಇನ್ನು ಸ್ವಲ್ಪ ದಿನ ಕಾಯುವಂತೆ ಹೇಳಿದ ನಿರ್ದೇಶಕ, ಅಲ್ಲದೆ ನನಗೆ ಮಾಡಿದ್ದ ಆಫರ್ನ 20% ಅಷ್ಟು ಮಾತ್ರವನ್ನೇ ನೀಡುವುದಾಗಿ ಹೇಳಿದ. ಅದೇ ಸಮಯಕ್ಕೆ ಸಿನಿಮಾದ ನಿರ್ಮಾಪಕರು ಸೆಟ್ಗೆ ಬಂದು ನನ್ನನ್ನು ಮಾತನಾಡಿಸಿದರು. ನಾನು ಅವರ ಬಳಿ ಸಂಭಾವನೆ ಬಗ್ಗೆ ಕೇಳಿದೆ. ಆದರೆ ನಿರ್ದೇಶಕ ನನಗೆ ಹೇಳಿದಂತೆ ಅವರು ಮಾಫಿಯಾ ಆಗಲಿ, ರೌಡಿ ವರ್ತನೆಯಾಗಲಿ ತೋರಲಿಲ್ಲ. ಬದಲಿಗೆ ಸಂಭಾವನೆ ಏಕೆ ಕೊಟ್ಟಿಲ್ಲವೆಂದು ನಿರ್ದೇಶಕರನ್ನು ಕೇಳಿದರು. ಕೂಡಲೇ ರೊಚ್ಚಿಗೆದ್ದ ನಿರ್ದೇಶಕ ನನ್ನ ವಿರುದ್ಧ ಏನೇನೋ ಸುಳ್ಳುಗಳನ್ನು ಹೇಳಿ, ಸಂಭಾವನೆ ಈಗಾಗಲೇ ಕೊಟ್ಟಿರುವುದಾಗಿ ಹೇಳಿದ. ಆದರೆ ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಕೊನೆಗೆ ನನಗೆ ಹಣ ಬೇಡ ನೀನೆ ಇಟ್ಟುಕೊ ಎಂದು ಹೇಳಿ ಹೋಟೆಲ್ನ ಲಾಬಿಯಿಂದ ಲಿಫ್ಟ್ ಕಡೆ ಹೊರಟೆ. ಆಗ ನನ್ನ ಕೈಹಿಡಿದು ಎಳೆದಾಡಿದ ಆ ನಿರ್ದೇಶಕ' ಎಂದು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ ನಟಿ ನೇಹಾ.

ಕೊಲ್ಲುತ್ತೇನೆಂದು ಬೆದರಿಕೆ
''ನಾನು ಅಲ್ಲಿಂದ ರೂಂಗೆ ತೆರಳಿದೆ ಆಗ ಆ ನಿರ್ದೇಶಕ ಹಾಗೂ ಅಲ್ಲಿದ್ದ ಕೆಲವರು ನನ್ನ ಮೇಕಪ್ ಸಹಾಯಕನ ಮೇಲೆ ಹಲ್ಲೆ ಮಾಡಿದರು. ಆತ ಓಡೋಡಿ ಬಂದು ನಡೆದ ಘಟನೆ ಬಗ್ಗೆ ಹೇಳಿದ. ನನ್ನನ್ನು ಬರುವಂತೆ ಹೇಳುತ್ತಿದ್ದಾರೆ ಎಂದು ಹೇಳಿದ. ನಾನು ಹೋಟೆಲ್ ಲಾಬಿಗೆ ಹೋದೆ. ಆಗ ನಿರ್ದೇಶಕ ನನ್ನನ್ನು ಕೆಟ್ಟದಾಗಿ ಬೈದ ನನ್ನ ಬಳಿ ಪರವಾನಗಿ ಇರುವ ಬಂದೂಕಿದ್ದು ಗುಂಡು ಹಾರಿಸಿ ಕೊಲ್ಲುತ್ತೇನೆಂದು ಹೇಳಿದ. ನನ್ನ ಮೊಬೈಲ್ ಕಸಿದುಕೊಂಡು ದೌರ್ಜನ್ಯ ಮಾಡಿದ. ನನ್ನನ್ನು ವೇಶ್ಯೆ ಎಂದು ಕರೆದ. ಕೊನೆಗೆ ನಾನು ಹಾಗೂ ನನ್ನ ಸಹಾಯಕ ನನ್ನ ಗೆಳೆಯನ ಸಹಾಯದೊಂದಿಗೆ ಆ ಸ್ಥಳ ಬಿಟ್ಟು ಬೆಂಗಳೂರಿಗೆ ಮರಳಿದೆವು'' ಎಂದಿದ್ದಾರೆ ನಟಿ.

ವೇಶ್ಯೆ ಪಾತ್ರ ಮಾಡಿದ್ದಾಳೆಂದ ನಿರ್ದೇಶಕ
ಬೆಂಗಳೂರು ಪೊಲೀಸರ ಬಳಿ ದೂರು ನೀಡಿದ ಬಳಿಕ ಪೊಲೀಸರು ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಮನ್ಸ್ ನೀಡಿ ಕರೆಸಿ ಬೈದು ಬುದ್ಧಿ ಹೇಳಿದರು. ಪೊಲೀಸರ ಮುಂದೆಯೂ ಸುಳ್ಳು ಆರೋಪಗಳನ್ನು ಮಾಡಿದ ನಿರ್ದೇಶಕ, ''ಆಕೆ 'ಕಸಾಬಾ' ಸಿನಿಮಾದಲ್ಲಿ ವೇಶ್ಯೆ ಪಾತ್ರ ಮಾಡಿದ್ದಾಳೆ' ಎಂದ. ಅದಕ್ಕೆ ಪೊಲೀಸರು ಆ ನಿರ್ದೇಶಕನಿಗೆ ಬೈದು ಬುದ್ಧಿ ಹೇಳಿದರು. ಅಲ್ಲದೆ ನನ್ನ ಬಾಕಿ ಹಣವನ್ನೂ ಕೊಡಿಸಿದರು. ಅದಾದ ಮೇಲೂ ಆ ನಿರ್ದೇಶಕ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ. 2017ರಲ್ಲಿ ಮಲಯಾಳಂ ನಟಿಯೊಬ್ಬಳನ್ನು ಅಪಹರಣ ಮಾಡಿ ಕಾರಿನಲ್ಲಿ ಅತ್ಯಾಚಾರ ಮಾಡಿದ ಘಟನೆ ನೆನಪಿಸಿ ಅದೇ ಮಾದರಿಯಲ್ಲಿ ನಿನಗೂ ಮಾಡುತ್ತೇನೆ ಎಂದು ಹೇಳಿದ'' ಎಂದು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ ನಟಿ.


Click it and Unblock the Notifications











