ಅತ್ಯಾಚಾರ ಆರೋಪಿ ಸಿನಿ ಸಾಹಿತಿಗೆ ಪ್ರಶಸ್ತಿ: ನಟಿಯರ ತೀವ್ರ ಆಕ್ರೋಶ
ಚಿತ್ರರಂಗಕ್ಕೆ ಮೀಟೂ ಅಭಿಯಾನ ಕಾಲಿಟ್ಟಾಗ ದೊಡ್ಡ ಸಂಚಲನ ಸೃಷ್ಟಿಸಿತ್ತು. ಹಲವಾರು ಖ್ಯಾತನಾಮರು ಈ ಮೀಟೂ ಅಭಿಯಾನದಡಿ ಆರೋಪಿಗಳಾದರು. ಅದರಲ್ಲಿ ತಮಿಳಿನ ಚಿತ್ರ ಸಾಹಿತಿ ವೈರಮುತ್ತು ಸಹ ಒಬ್ಬರು.
ಆದರೆ ಇತ್ತೀಚೆಗೆ ಚಿತ್ರಸಾಹಿತಿ ವೈರಮುತ್ತು ಅನ್ನು ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅತ್ಯಾಚಾರ ಆರೋಪ ಹೊತ್ತ ವೈರಮುತ್ತುಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ವೈರಮುತ್ತು ಅನ್ನು ಒಎನ್ವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ ಈ ಆಯ್ಕೆಯನ್ನು ಮಲಯಾಳಂ ನಟಿ ಪಾರ್ವತಿ ಮೆನನ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.

'ಒಎನ್ವಿ ಕುರುಪ್ ನಮ್ಮ ಹೆಮ್ಮೆಯ ಸಾಹಿತಿ. ಲೇಖಕರಾಗಿ, ಗೀತರಚನೆಕಾರರಾಗಿ ಅವರು ನೀಡಿದ ಕೊಡುಗೆ ದೊಡ್ಡದು. ಬರವಣಿಗೆ ಮೂಲಕ ನಮ್ಮ ಮನಸ್ಸುಗಳನ್ನು ಅರಳಿಸುವ ಜೊತೆಗೆ ನಮ್ಮ ಬುದ್ಧಿಯನ್ನು ಜಾಗೃತಿಗೊಳಿಸಿದ್ದಾರೆ. ಆದರೆ ಅಂಥಹಾ ಮಹನೀಯರ ಹೆಸರಿನ ಪ್ರಶಸ್ತಿಯನ್ನು ಅತ್ಯಾಚಾರ ಆರೋಪಿಗೆ ನೀಡುವುದು ಒಎನ್ವಿಗೆ ಮಾಡುವ ದೊಡ್ಡ ಅವಮಾನ ಎಂದಿದ್ದಾರೆ' ಪಾರ್ವತಿ ಮೆನನ್.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ಪಾರ್ವತಿ, 'ಗಾಯಕಿ ಚಿನ್ಮಯಿ ಸೇರಿದಂತೆ 17 ಮಹಿಳೆಯರು ವೈರಮುತ್ತು ವಿರುದ್ಧ ಆರೋಪ ಮಾಡಿದ್ದಾರೆ. ಹದಿನೇಳು ಮಹಿಳೆಯರು ಬಿಟ್ಟು ಇನ್ನು ಎಷ್ಟು ಮಂದಿ ವೈರಮುತ್ತುವಿನಿಂದ ಅನುಭವಿಸಿದ ನೋವನ್ನು ತಮ್ಮಲ್ಲಿಯೇ ಹುದುಗಿಸಿಟ್ಟುಕೊಂಡಿದ್ದಾರೆಯೋ' ಎಂದಿದ್ದಾರೆ ಪಾರ್ವತಿ.
ಮುಂದುವರೆದು, 'ವೈರಮುತ್ತುವಿನ ಕಲೆಗೆ ಗೌರವ ನೀಡುತ್ತಿದ್ದೇವೆ ಎಂಬ ವಾದವನ್ನು ಮುಂದೆ ತರಬೇಡಿ. ಕಲೆ ಮತ್ತು ಕಲೆಗಾರ ಎರಡೂ ಸಹ ಮುಖ್ಯವೇ. ನನ್ನ ಅಭಿಪ್ರಾಯವೆಂದರೆ ಕಲೆ, ಕಲೆಗಾರನಿಗಿಂತಲೂ ಮಾನವೀಯತೆ ದೊಡ್ಡದು. ಮಾನವೀಯತೆ ದೃಷ್ಟಿಯಿಂದ ನೋಡಿದರೆ ವೈರಮುತ್ತು ಕೃತ್ಯ ಅಮಾನವೀಯ' ಎಂದಿದ್ದಾರೆ.
ಪಾರ್ವತಿ ಮೆನನ್ ಮಾತ್ರವೇ ಅಲ್ಲದೆ ಗಾಯಕಿ ಚಿನ್ಮಯಿ, ನಟಿ ಗೀತು ಮೋಹನ್ದಾಸ್, ರೀಮಾ ಕಲ್ಲಿಂಗಲ್, ಅಂಜಲಿ ಮೆನನ್ ಅವರುಗಳು ಸಹ ವೈರಮುತ್ತು ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವದನ್ನು ವಿರೋಧಿಸಿದ್ದಾರೆ.
Recommended Video
ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲಿ ಒಎನ್ವಿ ಸಾಂಸ್ಕೃತಿಕ ಅಕಾಡೆಮಿಯು ಹೊಸ ಆದೇಶ ಹೊರಡಿಸಿದ್ದು, ಪ್ರಶಸ್ತಿಗೆ ವೈರಮುತ್ತು ಅನ್ನು ಆಯ್ಕೆ ಮಾಡಿರುವ ಪ್ರಕ್ರಿಯೆಯನ್ನು ಪುನಃ ಪರಿಶೀಲಿಸುತ್ತೇವೆ ಎಂದಿದ್ದಾರೆ.


Click it and Unblock the Notifications











