ನಟಿ, ರಾಜಕಾರಣಿ ಖುಷ್ಬುವನ್ನು ವಶಕ್ಕೆ ಪಡೆದ ಪೊಲೀಸರು
ನಟಿ, ಬಿಜೆಪಿ ಸದಸ್ಯೆ ಖುಷ್ಬುವನ್ನು ಇಂದು (ಅಕ್ಟೋಬರ್ 27) ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖುಷ್ಬು ಪ್ರತಿಭಟನೆಯಲ್ಲಿ ಭಾಗವಹಿಸಲೆಂದು ತೆರಳುತ್ತಿದ್ದ ಸಂದರ್ಭ ಖುಷ್ಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಿಗ್ಗೆ ಚೆನ್ನೈನ ಮುತ್ತುಕಾಡು ಬಳಿ ಅವರ ಖುಷ್ಬು ಅವರನ್ನು ಹಾಗೂ ಇತರ ಬಿಜೆಪಿ ಬೆಂಬಲಿಗರ ಜೊತೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟಿ ಖುಷ್ಬು ಇತ್ತೀಚಿಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ನಟಿ ಖುಷ್ಬು, ವಿದುತ್ತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕರಾಗಿರುವ ಸಂಸದ ತೋಲ್ ತಿರುಮಾವಲ್ವನ್ ವಿರುದ್ಧ ಪ್ರತಿಭಟನೆ ಮಾಡಲು ಚೆನ್ನೈನಿಂದ ಚಿದಂಬರಂ ಗೆ ತೆರಳುವ ಸಂದರ್ಭ, ಪೊಲೀಸರು ಖುಷ್ಬು ಹಾಗೂ ಬೆಂಬಲಿಗರನ್ನು ತಡೆದು ವಶಕ್ಕೆ ಪಡೆದರು.

ಸಂಸದ ತೋಲ್ ತಿರುಮಾಲವನ್ ವಿರುದ್ಧ ಪ್ರತಿಭಟನೆ
ಸಂಸದ ತೋಲ್ ತಿರುಮಾವಲ್ವನ್ ಅವರು ಮಹಿಳೆಯರ ವಿರುದ್ಧ ಆಕ್ಷೇಪಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ನಟಿ ಖುಷ್ಬು ಹಾಗೂ ಇತರರು ಪ್ರತಿಭಟನೆ ನಡೆಸಲೆಂದು ತೆರಳುತ್ತಿದ್ದರು. ಆಗ ಪೊಲೀಸರು ಖುಷ್ಬು ಅವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ: ಖುಷ್ಬು
ಈ ಬಗ್ಗೆ ಟ್ವಿಟ್ಟರ್ ಪೋಸ್ಟ್ ಹಾಕಿರುವ ನಟಿ ಖುಷ್ಬು, 'ಬಂಧಿಸಲಾಗಿದೆ, ನಮ್ಮನ್ನು ಪೊಲೀಸ್ ವ್ಯಾನ್ನಲ್ಲಿ ಬಂಧಿಯಾಗಿರಿಸಲಾಗಿದೆ. ಆದರೆ ಜೀವದ ಕೊನೆಯ ಉಸಿರು ಇರುವವರೆಗೆ ಮಹಿಳೆಯರ ಗೌರವಕ್ಕಾಗಿ ನಾನು ಹೋರಾಡುತ್ತೇನೆ' ಎಂದಿದ್ದಾರೆ.

ತಮಿಳುನಾಡು ಸಿಎಂ ಗೆ ಖುಷ್ಬು ಪ್ರಶ್ನೆ
ಮತ್ತೊಂದು ಟ್ವೀಟ್ನಲ್ಲಿ, 'ನಮ್ಮ ಪ್ರಯಾಣವನ್ನು ಏಕೆ ಅರ್ಧಕ್ಕೆ ತುಂಡರಿಸಲಾಗಿದೆ. ನಾನು ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಯನ್ನು ಪ್ರಶ್ನಿಸುತ್ತೇನೆ. ಪ್ರತಿಭಟಿಸುವ ನಮ್ಮ ಸಾಂವಿಧಾನಿಕ ಹಕ್ಕನ್ನು ಏಕೆ ಕಿತ್ತುಕೊಳ್ಳಲಾಗುತ್ತಿದೆ' ಎಂದು ಪ್ರಶ್ನೆ ಮಾಡಿದ್ದಾರೆ ಖುಷ್ಬು.

ತೋಲ್ ತಿರುಮಾವಲ್ವನ್ ಹೇಳಿದ್ದು ಏನು?
ದಲಿತ ನಾಯಕರಾಗಿರುವ ಸಂಸದ ತೋಲ್ ತಿರುಮಾವಲ್ವನ್ ಕೆಲವು ದಿನಗಳ ಹಿಂದೆ ಸೆಮಿನಾರ್ ಒಂದರಲ್ಲಿ ಮನುಸ್ಮೃತಿಯನ್ನು ವಿರೋಧಿಸಿ ಮಾತನಾಡುತ್ತಾ, 'ಸನಾತನ ಧರ್ಮದಲ್ಲಿ ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ತಲ-ತಲಾಂತರಗಳಿಂದ ಅವರ ಮೇಲೆ ದಬ್ಬಾಳಿಕೆಗಳಾಗಿವೆ. ಸನಾತನ ಧರ್ಮ ಮಹಿಳೆಯರ ಬಗ್ಗೆ ಏನು ಹೇಳುತ್ತದೆ? ಮಹಿಳೆಯರನ್ನು ವೇಶ್ಯೆಯರನ್ನಾಗಿ ಸೃಷ್ಟಿಸಲಾಗಿದೆ, ಹಿಂದು ಧರ್ಮ, ಮನು ಧರ್ಮದ ಪ್ರಕಾರ ಎಲ್ಲಾ ಹೆಂಗಸರೂ ವೇಶ್ಯೆಯರು, ಸನಾತನ ಧರ್ಮ ಮಹಿಳೆಯರ ಬಗ್ಗೆ ಹೀಗೆ ಹೇಳುತ್ತದೆ' ಎಂದಿದ್ದರು ತೋಲ್ ತಿರುಮಾಲವನ್.


Click it and Unblock the Notifications











