ಡೀಪ್ನೆಕ್ ಬ್ಲೌಸ್ ಹಾಕಲ್ಲ ಎಂದೆ.. ನಿರ್ದೇಶಕರು 'ಅನ್ನಿಯನ್' ಶೂಟಿಂಗ್ ನಿಲ್ಲಿಸಿದ್ರು.. ಬಳಿಕ..
ಮುಂಬೈ ಬೆಡಗಿ ಸದಾ ಸೌತ್ ಸಿನಿಮಾಗಳಲ್ಲೇ ಹೆಚ್ಚು ಗುರ್ತಿಸಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ಆಕೆ ಮಿಂಚುತ್ತಿದ್ದಾರೆ. ದಶಕದ ಹಿಂದೆ ಬಹುಬೇಡಿಕೆಯ ನಟಿಯಾಗಿಸ ಸದಾ ಮೆರೆದಿದ್ದರು. ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಸದ್ಯ ಸ್ಮಾಲ್ ಸ್ಕ್ರೀನ್ನಲ್ಲಿ ಕೂಡ ಸದಾ ಕಮಾಲ್ ಮಾಡುತ್ತಿದ್ದಾರೆ. ಒಳ್ಳೆ ಡ್ಯಾನ್ಸರ್ ಆಗಿರುವ ಆಕೆ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ. ತೆಲುಗಿನ 'ಜಯಂ' ಸಿನಿಮಾ ಮೂಲಕ ಸದಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಸದಾ ಸಖತ್ ಆಕ್ಟೀವ್ ಆಗಿದ್ದಾರೆ.

ಯೂಟ್ಯೂಬ್ ಚಾನಲ್ನಲ್ಲಿ ತಮ್ಮ ಸಿನಿಕರಿಯರ್ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಸದಾ ನಟಿಸಿದ ಸಿನಿಮಾಗಳಲ್ಲಿ 'ಅನ್ನಿಯನ್' ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಶಂಕರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವಿಕ್ರಂ ಜೋಡಿಯಾಗಿ ಆಕೆ ಮಿಂಚಿದ್ದರು. ನಂದಿನಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು.
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ 'ಅನ್ನಿಯನ್' ಸಿನಿಮಾ ಮೇಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಚಿತ್ರದ ಹಾಡುಗಳು ಶೂಟಿಂಗ್ ಹೇಗಿರುತ್ತಿತ್ತು? ಡ್ಯಾನ್ಸ್, ಕಾಸ್ಟ್ಯೂಮ್ ಹೀಗೆ ಸಾಕಷ್ಟು ವಿಚಾರಗಳನ್ನು ವಿವರಿಸಿದ್ದಾರೆ. ಬ್ಲೌಸ್ ಕಾರಣಕ್ಕೆ ನಿರ್ದೇಶಕ ಶಂಕರ್ ಚಿತ್ರೀಕರಣ ತಡ ಮಾಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ರಾತ್ರೋ ರಾತ್ರಿ ಸಮಸ್ಯೆ ಬಗೆಹರಿದಿದ್ದನ್ನು ಆಕೆ ಹೇಳಿಕೊಂಡಿದ್ದಾರೆ.

"ಸರ್ ನಾನು ತುಂಬಾ ಶಾರ್ಟ್ ಡ್ರೆಸ್ ಧರಿಸುವುದಿಲ್ಲ, ಅದು ನನಗೆ ಕಂಫರ್ಟ್ ಅಲ್ಲ ಎಂದು ಹೇಳಿಯೇ 'ಅನ್ನಿಯನ್' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೆ. ಶಂಕರ್ ಸರ್ ಕೂಡ ಖಂಡಿತ. ಈ ಚಿತ್ರದಲ್ಲಿ ಶಾರ್ಟ್ ಡ್ರೆಸ್ ಧರಿಸುವ ಅವಶ್ಯಕತೆ ಕೂಡ ಇಲ್ಲ ಬಿಡು ಎಂದು ಹೇಳಿ ಒಪ್ಪಿಸಿದ್ದರಂತೆ.
"ಆ ಚಿತ್ರಕ್ಕೆ ನನ್ ಕಾಸ್ಟ್ಯೂಮ್ ಮುಂಬೈನಲ್ಲಿ ಡಿಸೈನ್ ಆಗುತ್ತಿತ್ತು. 'ಅಯ್ಯಂಗಾರಿ' ಹಾಡಿನ ಚಿತ್ರೀಕರಣದಲ್ಲಿ ಸಣ್ಣ ಸಮಸ್ಯೆ ಉಂಟಾಗಿದೆ. ಮುಂಬೈನಿಂದ ತರಿಸಿದ್ದ ಬ್ಲೌಸ್ ನನಗೆ ಸರಿ ಎನ್ನಿಸಲಿಲ್ಲ. ಬಹಳ ಡೀಪ್ ನೆಕ್ ಇತ್ತು. ಬಹುಶಃ ಅವರು ಸರಿಯಾಗಿ ಅಳತೆ ತೆಗೆದುಕೊಂಡು ಸ್ಟಿಚ್ ಮಾಡಿರಲಿಲ್ಲ ಎನಿಸುತ್ತದೆ. ನಾನು ಮೊದ್ಲೆ ಹೇಳಿದ್ದೆ. ಆದರೂ ಈ ರೀತಿ ಡ್ರೆಸ್ ಇದೆಯಲ್ಲ, ಎಂದು ಬೇಸರವಾಯಿತು. ಬಳಿಕ ಧೈರ್ಯ ಮಾಡಿ ಶಂಕರ್ ಸರ್ ಬಳಿ ಹೇಳಿದೆ"
"ಶಂಕರ್ ಚಿತ್ರೀಕರಣ ನಿಲ್ಲಿಸಿ ಚೆನ್ನೈಯಿಂದ ಆ ಬ್ಲೌಸ್ ಅನ್ನು ಫ್ಲೈಟ್ನಲ್ಲಿ ಮುಂಬೈಗೆ ಕಳುಹಿಸಿ, ಹೊಸ ಡಿಸೈನ್ನಲ್ಲಿ ಬ್ಲೌಸ್ ಸಿದ್ಧಪಡಿಸಿ ವಾಪಸ್ ತರಿಸಿದರು. ಬಳಿಕ ಅದನ್ನು ತೊಟ್ಟು ಆ ಹಾಡನ್ನು ಚಿತ್ರೀಕರಿಸಿದೆ. ಶಂಕರ್ ಅವರ ಬಳಿ ಯಾವ ವಿಚಾರ ಕಲಿತೆ ಎಂದರೆ ಇದೇ ವಿಚಾರ ಹೇಳುತ್ತೇನೆ. ಅವರು ಅಂದು ಆ ಬ್ಲೌಸ್ ಹಾಕಿಕೊಳ್ಳಲೇಬೇಕು ಎಂದಿದ್ದರೆ ನಾನು ಹಾಕಿಕೊಳ್ಳಬೇಕಿತ್ತು ಎನಿಸುತ್ತದೆ. ಆದರೆ ಅವ್ರು ಆ ರೀತಿ ಮಾಡಲಿಲ್ಲ. ಅದು ಅವರ ಒಳ್ಳೆ ಗುಣ" ಎಂದು ಸದಾ ಹೇಳಿದ್ದಾರೆ.
'ಅನ್ನಿಯನ್' ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಾನು ವಿಕ್ರಂ ಸರ್ನ ಅಣ್ಣ ಎಂದು ಕರೆಯುತ್ತಿದ್ದೆ. ಅವ್ರು ನನ್ನನ್ನು ತಂಗಿ ಎಂದೇ ಸಂಬೋಧಿಸುತ್ತಿದ್ದರು. ಒಂದು ದಿನ ಈ ವಿಚಾರ ಶಂಕರ್ ಸರ್ಗೆ ಗಮನಕ್ಕೆ ಬಂತು. ಕೂಡಲೇ ಕರೆದು ಬೈದರು. ಅಲ್ಲ ನೀವಿಬ್ಬರು ಚಿತ್ರದಲ್ಲಿ ನಾಯಕ-ನಾಯಕಿ. ನೀವು ಅಣ್ಣ-ತಂಗಿ ಎಂದುಕೊಂಡಿದ್ದರೆ ಕೆಮೆಸ್ಟ್ರಿ ಹೇಗೆ ವರ್ಕ್ ಆಗುತ್ತದೆ.ಈ ವಿಚಾರ ಮಾಧ್ಯಮಗಳಲ್ಲಿ ಬಂದರೆ ಏನು ಗತಿ ಎಂದರು. ಬಳಿಕ ನಾವಿಬ್ಬರು ಹೆಸರಿಡಿದು ಕರೆಯಲು ಆರಂಭಿಸಿದೆವು ಎಂದಿದ್ದಾರೆ.


Click it and Unblock the Notifications











