ಭಾರತೀಯ ಸೇನೆ ಬಗ್ಗೆ ನಟಿ ಸಾಯಿ ಪಲ್ಲವಿ ಹೇಳಿಕೆ; ಮತ್ತೆ ಶುರುವಾಯಿತು ಸಂಕಷ್ಟ
ಗೊತ್ತಿದ್ದೂ ಗೊತ್ತಿಲ್ಲದೇ ನಟಿ ಸಾಯಿ ಪಲ್ಲವಿ ವಿವಾದದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಏನೋ ಹೇಳಲು ಹೋಗಿ ಅದು ಬೇರೆ ಅರ್ಥ ಪಡೆದುಕೊಂಡು ವಿವಾದ ಸೃಷ್ಟಿಯಾಗುತ್ತಿದೆ. ಇದೀಗ ಆಕೆ ಭಾರತೀಯ ಸೇನೆ ಬಗ್ಗೆ ನೀಡಿದ ಹೇಳಿದ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಎರಡು ವರ್ಷದ ಹಿಂದೆ ಕಾಶ್ಮೀರ್ ಪಂಡಿತರ ನರಮೇಧದ ಕುರಿತು ಮಾತನಾಡುತ್ತಾ ನಟಿ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಆಕೆ ಅದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದರು. ಆ ಬಳಿಕ ಆಕೆಯ ವಿರುದ್ಧ ಕೆಲವರು ಪದೇ ಪದೆ ನೆಗೆಟಿವ್ ಕಾಮೆಂಟ್ ಮಾಡಲು ಮುಂದಾದರು. ಸಖತ್ ಟ್ರೋಲ್ ಮಾಡಿದರು. ಆಕೆಯ ಸಿನಿಮಾಗಳಿಗೂ ಇದರಿಂದ ಹಿನ್ನೆಡೆಯಾಗಿದ್ದು ಸುಳ್ಳಲ್ಲ.

ಸದ್ಯ ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ನಟನೆಯ ತಮಿಳಿನ 'ಅಮರನ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ 31ಕ್ಕೆ ಚಿತ್ರ ತೆರೆಗೆ ಬರಲಿದೆ. ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ರಾಜ್ಕುಮಾರ್ ಪೆರಿಯಸ್ವಾಮಿ ಎಂಬುವವರು 'ಅಮರನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದರೆ ಪತ್ನಿ ಇಂಧು ರೆಬೆಕಾ ವರ್ಗೀಸ್ ಆಗಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಆದರೆ ಬಹಳ ಹಿಂದೆ ಭಾರತೀಯ ಸೇನೆ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದ ಹೇಳಿಕೆ ವೀಡಿಯೋ ವೈರಲ್ ಮಾಡಿ ಈಗ ಟ್ರೋಲ್ ಮಾಡಲಾಗುತ್ತಿದೆ.
ಬಹಳ ಹಿಂದೆ 'ವಿರಾಟ ಪರ್ವಂ' ಸಿನಿಮಾ ಪ್ರಚಾರದ ವೇಳೆ ಸಾಯಿ ಪಲ್ಲವಿ ಸಂದರ್ಶನದಲ್ಲಿ ಮಾತನಾಡಿದ್ದರು. ಈ ವೇಳೆ ಭಯೋತ್ಪಾದನೆ ಬಗ್ಗೆ ವಿವಾದಾತ್ಮಕವಾದ ಹೇಳಿಕೆ ನೀಡಿದ್ದರು. ಯಾವುದೇ ಕಾನೂನು ಇಲ್ಲದ ಕಾಲದಲ್ಲಿ ಹಿಂಸಾಚಾರ ನಡೆಯುತ್ತಿದೆ ಅಂದರೆ ಏನೋ ಅಂದುಕೊಳ್ಳಬಹುದಿತ್ತು. ಆದರೆ ಈಗ ಪ್ರಪಂಚ ಇಷ್ಟು ಅಭಿವೃದ್ದಿಯಾಗಿದೆ. ಆದರೂ ಹಿಂಸಾಚಾರ ಸರಿಯಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದರು.
ಮಾತು ಮುಂದುವರೆಸಿದ್ದ ಮಲಯಾಳಂ ನಟಿ "ಪಾಕಿಸ್ತಾನದವರು ಭಾರತೀಯ ಸೇನೆಯನ್ನು ಅದೇ ರೀತಿ ಭಾರತೀಯರು ಪಾಕಿಸ್ತಾನಿ ಸೇನೆಯನ್ನು ಭಯೋತ್ಪಾದಕರ ರೀತಿ ಭಾವಿಸುತ್ತಾರೆ. ಜನರ ಆಲೋಚನೆಯಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದ್ದರು. ಸದ್ಯ ಭಾರತದ ವೀರಯೋಧನ ಪತ್ನಿಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಈ ರೀತಿ ಹೇಳಿದ್ದು ಸರೀನಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಭಾರತದ ಸೇನೆ, ಪಾಕಿಸ್ತಾನದ ಸೇನೆ ಒಂದೇನಾ? ಎಂದು ಕೆಂಡ ಕಾರುತ್ತಿದ್ದಾರೆ.
ಇನ್ನು ಸಾಯಿ ಪಲ್ಲವಿ ಬುರ್ಖಾ ಧರಿಸಿರುವ ಫೋಟೊವೊಂದನ್ನು ಶೇರ್ ಮಾಡಿ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಆಕೆ ಎಲ್ಲರ ಮುಂದೆ ಕಾಣಿಸಿಕೊಳ್ಳುವುದು ಬೇರೆ, ಆಕೆ ನಿಜವಾಗಿ ಇರುವುದು ಹೀಗೆ ಎಂದು ಕಾಮೆಂಟ್ ಮಾಡಲಾಗುತ್ತಿದೆ. 'ಅಮರನ್' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಬೇಕಂತಲೇ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಆ ಬುರ್ಖಾ ಫೋಟೊ ಅಸಲಿ ಕಥೆ ರಿವೀಲ್ ಮಾಡಿ ತಿರುಗೇಟು ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟ, ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಜನ ಮುತ್ತಿಕೊಳ್ಳುತ್ತಾರೆ. ಫೋಟೊ, ಆಟೋಗ್ರಾಫ್ ಎಂದು ದುಂಬಾಲು ಬೀಳುತ್ತಾರೆ. ಇನ್ನು ನಟ-ನಟಿಯರು ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸುವುದು ತಮಾಷೆ ಮಾತಲ್ಲ. ಭಾರೀ ನೂಕಾಟ ನಡೆಯುತ್ತದೆ. ಇದೇ ಕಾರಣಕ್ಕೆ ರಜನಿಕಾಂತ್ ಸೇರಿದಂತೆ ಕೆಲವರು ಮಾರುವೇಷದಲ್ಲಿ ಸಾರ್ವಜನಿಕವಾಗಿ ಸುತ್ತಾಡುತ್ತಾರೆ.
ನಟಿಯರು ಕೆಲವೊಮ್ಮೆ ಬುರ್ಖಾ ಧರಿಸಿ ಯಾರಿಗೂ ಕಾಣದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಾರೆ. ಹಿಂದೆ ಸಾಯಿ ಪಲ್ಲವಿ ನಟಿಸಿದ 'ಶ್ಯಾಮ್ ಸಿಂಗ್ ರಾಯ್' ತೆಲುಗು ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಲು, ರೆಸ್ಪಾನ್ಸ್ ತಿಳಿದುಕೊಳ್ಳಲು ಸಾಯಿ ಪಲ್ಲವಿ ಬಯಸಿದ್ದರು. ಅದಕ್ಕಾಗಿ ಬುರ್ಖಾ ಧರಿಸಿ ಚಿತ್ರಮಂದಿರಕ್ಕೆ ಪ್ರೇಕ್ಷಕರ ಜೊತೆ ಎಂಟ್ರಿ ಕೊಟ್ಟಿದ್ದಾರೆ.
ಸಿನಿಮಾ ನೋಡಿ ಹೊರಗೆ ಬಂದಾಗ ಕಾರ್ ಏರುವ ಮುನ್ನ ಧರಿಸಿದ ಬುರ್ಖಾ ತೆಗೆದು ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದರು. ಇದೇ ವೀಡಿಯೋ ಸ್ಕ್ರೀನ್ ಶಾಟ್ ತೆಗೆದು ಕೆಲವರು ಸಾಯಿ ಪಲ್ಲವಿ ಬುರ್ಖಾ ಧರಿಸುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











