ಗಂಭೀರ ಕಾಯಿಲೆಗೆ ತುತ್ತಾಗಿದ್ದ ನಟಿ ಸುಹಾಸಿನಿ; ಮುಜುಗರವಾಗುತ್ತದೆ ಎಂದು ಹೇಳಲಿಲ್ಲವಂತೆ!
ಸಿನಿಮಾ ತಾರೆಯರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಇದ್ದಾರೆ. ಇನ್ನು ಕೋಟಿ ಕೋಟಿ ಸಂಭಾವನೆ ಪಡೆಯುವ ನಟ-ನಟಿಯರು ತೆರೆಮೇಲೆ ತೆರೆಯ ಆಚೆಗೂ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕಾಗಿ ಅವರು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಬೇಕಾದ್ದನ್ನು ತಿನ್ನುತ್ತಾರೆ, ಅವರ ಲೈಫ್ ಸ್ಟೈಲೇ ಬೇರೆ. ಅವರು ನಮ್ಮಂತಲ್ಲ ಎಂದೇ ಕೆಲವರು ಭಾವಿಸುತ್ತಾರೆ.
ತಾರೆಯರು ಕೂಡ ಮನುಷ್ಯರೇ ಅಲ್ಲವೇ. ನಮ್ಮ ದೇಹಕ್ಕೆ ನೋವಾದಂತೆ ಅವರಿಗೂ ಆಗುತ್ತದೆ. ಕಾಯಿಲೆಗಳು ಬರೋದು ಕೂಡ ಸರ್ವೇ ಸಾಧಾರಣ. ಕೆಲವೊಮ್ಮೆ ಖ್ಯಾತ ನಟ-ನಟಿಯರಿಗೆ ಏನಾದರೂ ಆರೋಗ್ಯ ಸಮಸ್ಯೆ ಎಂದಾಗ ಬಹಳ ಸುದ್ದಿ ಆಗಿಬಿಡುತ್ತದೆ. ಕ್ಯಾನ್ಸರ್ ರೀತಿಯ ಮಾರಕ ಕಾಯಿಲೆಯಿಂದ ಬಳಲಿದ ತಾರೆಯರು ಕೂಡ ಇದ್ದಾರೆ. ಅದರ ವಿರುದ್ಧ ಕೆಲವರು ಹೋರಾಡಿ ಗೆದ್ದಿದ್ದಾರೆ.

ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಕೂಡ ತಾವು ಗಂಭೀರ ಕಾಯಿಲೆಯಿಂದ ಬಳಲಿದ ವಿಚಾರವನ್ನು ಇದೀಗ ಬಹಿರಂಗ ಪಡಿಸಿದ್ದಾರೆ. ಮುಜುಗರವಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ 'ದಿ ಬೆಟರ್ ಇಂಡಿಯಾ' ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಮಿಳು ನಟಿ ಸುಹಾಸಿನಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಚೆನ್ನಾಗಿ ಕನ್ನಡ ಕೂಡ ಮಾತನಾಡುತ್ತಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಆಕೆ ನಟಿಸಿ ಗೆದ್ದಿದ್ದಾರೆ. 'ಬಂಧನ', 'ಸುಪ್ರಭಾತ', 'ಮುತ್ತಿನಹಾರ' ರೀತಿಯ ಕನ್ನಡ ಹಿಟ್ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸುಹಾನಿಸಿ ಜೋಡಿ ಮೋಡಿಯನ್ನು ಕನ್ನಡ ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ.
ಒಂದ್ಕಾಲದಲ್ಲಿ ನಾಯಕಿಯಾಗಿ ಮೆರೆದ ಸುಹಾಸಿನಿ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. 'ಮಾಸ್ತಿಗುಡಿ', 'ಆಯುಷ್ಮಾನ್ಭವ', 'ಅಂಬಿ ನಿಂಗ್ ವಯಸ್ಸಾಯ್ತೋ' ರೀತಿಯ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಗಮನ ಸೆಳೆದರು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ, ನಿರ್ದೇಶಕಿ ಆಗಿಯೂ ಸುಹಾನಿಸಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 1988ರಲ್ಲಿ ತಮಿಳು ನಿರ್ದೇಶಕ ಮಣಿರತ್ನಂ ಅವರನ್ನು ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.
ಇದ್ದಕ್ಕಿದಂತೆ ನಟಿ ಸುಹಾಸಿನಿ ಟಿಬಿ(ಕ್ಷಯ) ಕಾಯಿಲೆಯಿಂದ ಬಳಲಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಖ್ಯಾತ ತಾರೆಯರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿ ಅದರ ವಿರುದ್ಧ ಹೋರಾಡುವ ವಿಚಾರದಲ್ಲಿ ಪ್ರೇರಣೆ ಆಗುತ್ತಿದ್ದಾರೆ. ಸಂಜಯ್ ದತ್, ಸೋನಾಲಿ ಬೇಂದ್ರೆ ಸೇರಿದಂತೆ ಕೆಲವರು ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು. ಇತ್ತೀಚಿಗೆ ನಟ ಶಿವರಾಜ್ಕುಮಾರ್ ಕೂಡ ಕ್ಯಾನ್ಸರ್ ಎದುರು ಹೋರಾಡಿ ಗೆದ್ದಿದ್ದಾರೆ. ಇದೇ ರೀತಿ ಸುಹಾನಿಸಿ ಟಿಬಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಟಿಬಿ ಕಾಯಿಲೆ ಬಗ್ಗೆ ಮಾತ್ರವಲ್ಲ ಅದರ ಸುತ್ತಾ ಇರುವ ಕೆಟ್ಟ ಭಾವನೆ ಬಗ್ಗೆಯೂ ಆಕೆ ಪ್ರತಿಕ್ರಿಯಿಸಿದ್ದಾರೆ. "ಮೊದಲು ತಮ್ಮ ಆರನೇ ವಯಸ್ಸಿನಲ್ಲಿ ಟಿಬಿ ಕಾಯಿಲೆ ಇರುವುದು ಗೊತ್ತಾಗಿತ್ತು. ಬಳಿಕ ಮತ್ತೆ ತಮ್ಮ 36 ನೇ ವಯಸ್ಸಿನಲ್ಲಿ ಆ ಸಮಸ್ಯೆ ಇರುವುದು ದೃಢಪಟ್ಟಿತ್ತು. ಮಲ್ಟಿ ಡ್ರಗ್ ರೆಸಿಸ್ಟಂಟ್ ಟಿಬಿ (MDR-TB) ಇರುವುದು ಪತ್ತೆಯಾಯಿತು. ಇದರಿಂದ ತೀವ್ರ ತೂಕ (75 ಕೆಜಿಯಿಂದ 35 ಕೆಜಿಗೆ) ಇಳಿಕೆಯಾಗಿತ್ತು. ಅಷ್ಟೇ ಅಲ್ಲ ಕಿವಿ ಕೇಳಿಸುವುದು ಕಮ್ಮಿ ಆಗಿತ್ತು" ಎಂದು ಸುಹಾಸಿನಿ ನೆನಪಿಸಿಕೊಂಡಿದ್ದಾರೆ.
ಗಂಭೀರ ಕಾಯಿಲೆ ವಿರುದ್ಧ ಹೋರಾಡಿ ಗೆದ್ದ ಸುಹಾಸಿನಿ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದರು. 2020 ರಲ್ಲಿ ಆಕೆ ಕ್ಷಯರೋಗದಿಂದ ಬಳಲುತ್ತಿರುವವರನ್ನು ಬೆಂಬಲಿಸಲು ದೃಢನಿಶ್ಚಯದಿಂದ REACH ಇಂಡಿಯಾವನ್ನು ಸೇರಿದರು. ತಮಿಳುನಾಡಿನ ಏಳು ಜಿಲ್ಲೆಗಳನ್ನು ಸಂಪರ್ಕಿಸುವ ಒಂದು ನೆಟ್ವರ್ಕ್ ನಿರ್ಮಿಸಿದರು, ಸದ್ಯ 2,800 ಸದಸ್ಯರು ಸಮಸ್ಯೆ ಬಗೆಹರಿಸಲು ಹಾಗೂ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದಾರೆ.
ಇದೀಗ 600ಕ್ಕೂ ಹೆಚ್ಚು ಕ್ಷಯರೋಗ ಚಾಂಪಿಯನ್ಗಳಿಗೆ ತರಬೇತಿ ನೀಡಲು ಸುಹಾಸಿನಿ ಸಹಾಯ ಮಾಡಿದ್ದಾರೆ, ಬದುಕುಳಿದವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಕ್ಷಯ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆ ಮೀರಿ ಅದರಿಂದ ಹೊರ ಬರುವುದು ಹೇಗೆ ಎಂದು ಧೈರ್ಯ ತುಂಬುವ ಕೆಲವರನ್ನು ಇವರು ಮಾಡುತ್ತಿದ್ದಾರೆ.


Click it and Unblock the Notifications











