Vijayalakshmi: "ಸೀಮಾನ್ ನನ್ನನ್ನು ಮದ್ವೆಯಾಗಿ ಮೋಸ ಮಾಡಿದ್ದಾನೆ": ದೂರು ದಾಖಲಿಸಿ ನಟಿ ವಿಜಯಲಕ್ಷ್ಮೀ ಕಣ್ಣೀರು
ಬೆಂಗಳೂರಿನಲ್ಲಿ ಓದಿ ಬೆಳೆದ ಬಹುಭಾಷಾ ನಟಿ ವಿಜಯಲಕ್ಷ್ಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾನ್ ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೂಡಲೇ ಆತನನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುತ್ತಾ ಕಣ್ಣೀರಾಗಿದ್ದಾರೆ.
ಕೆಲ ವರ್ಷಗಳಿಂದ 'ನಾಮ್ ತಮಿಳ್ ಕಚ್ಚಿ' ಪಕ್ಷದ ಅಧ್ಯಕ್ಷ ಸೀಮಾನ್ ಹಾಗೂ ನಟಿ ವಿಜಯಲಕ್ಷ್ಮಿ ನಡುವಿನ ವಿವಾದ ಭಾರೀ ಸುದ್ದಿ ಆಗುತ್ತಿದೆ. ಸದ್ಯ ಆಕೆ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸಿಮಾನ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸ್ ಆಯುಕ್ತ ಸಂದೀಪ್ ರಾಯ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಸೀಮಾನ್ ವಿರುದ್ಧ ಲಿಖಿತ ದೂರು ನೀಡಿದ್ದು ಆತನನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ವಿಜಯಲಕ್ಮಿಗೆ ಬೆಂಬಲವಾಗಿ ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ ಸಹ ಆಯುಕ್ತ ಕಚೇರಿಗೆ ತೆರಳಿದರು.

2008ರಲ್ಲಿ ಸೀಮಾನ್ ಜೊತೆ ತಮಗೆ ಮದುವೆ ಆಗಿದೆ ಎಂದು ನಟಿ ವಿಜಯಲಕ್ಷ್ಮಿ ಹೇಳುತ್ತಿದ್ದಾರೆ. ಆದರೆ ಆತ ನನಗೆ ಮೋಸ ಮಾಡಿದ್ದು ಮಾತ್ರವಲ್ಲದೇ ಆತನ ಕಡೆಯವರಿಂದ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ನಾನು ಕೆಲ ವರ್ಷಗಳಿಂದ ಸೀಮಾನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಆದರೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ" ಎಂದಿದ್ದಾರೆ.
"ಈಗ ನಾನು ತಮಿಳು ನಾಡು ಸರ್ಕಾರದ ಮೇಲೆ, ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿದ್ದೇನೆ. ಆತನನ್ನು ಬಂಧಿಸಿ ನನಗೆ ನ್ಯಾಯ ಕೊಡಿಸಿ. ಇನ್ನು ಸೀಮಾನ್ ಹಾಗೂ ನಟಿ ವಿಜಯಲಕ್ಷ್ಮಿಗೆ ಮದುವೆ ನಡೆದಿದ್ದು ಈ ಬಗ್ಗೆ ತನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಆಕೆಗೆ ಬೆಂಬಲವಾಗಿ ಹೋಗಿರುವ ವೀರಲಕ್ಷ್ಮಿ ಹೇಳಿದ್ದಾರೆ.
"ನಾನು ಆತನ ವಿಷಯಗಳನ್ನು ಹೊರಗೆ ಹಾಕುತ್ತಿದ್ದೇನೆ ಎಂದು ಸೀಮಾನ್ ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಾನೆ. ನಾನು ಪಬ್ಲಿಸಿಟಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂದು ಬಿಂಬಿಸಿದ್ದಾನೆ. ಮಾತನಾಡಿಕೊಂಡು ಸೆಟ್ಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುದಿಲ್ಲ ಎಂದು ವಿಜಯಲಕ್ಷ್ಮಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
ಕೆಲ ದಿನಗಳಿಂದ ನಟಿ ವಿಜಯಲಕ್ಷ್ಮಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಆಕೆ ಮಾನಸಿಕ ಬಹಳ ನೊಂದು ಹೋಗಿದ್ದಾರೆ ಎಂದರೆ ತಪ್ಪಾಗಲ್ಲ. ಇನ್ನು ಫೇಸ್ಬುಕ್ ಲೈವ್ ಬಂದು ಸಾಕಷ್ಟು ಬಾರಿ ವಿಜಯಲಕ್ಷ್ಮಿ, ಸೀಮಾನ್ ವಿರುದ್ಧ ಆರೋಪ ಮಾಡಿದ್ದರು. 'ಸ್ವಸ್ತಿಕ್', 'ಕನಕಾಂಬರಿ', 'ಸೂರ್ಯವಂಶ' ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ವಿಜಯಲಕ್ಷ್ಮಿ ನಟಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೇ ವಿಜಯಲಕ್ಷ್ಮಿ ಕಿರುತೆರೆ ಕಾರ್ಯಕ್ರಮಗಳಲ್ಲೂ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಕನ್ನಡ ಸಿನಿಮಾ ತಾರೆಯರ ಬಳಿ ಸಹಾಯ ಕೇಳಿದ್ದರು. ತಮ್ಮ ಸಹೋದರಿ ಉಷಾ ಆರೋಗ್ಯ ಸ್ಥಿತಿ ಗಂಭೀರವಾಗಿ ಸಹಾಯ ಮಾಡಿ ಶಿವಣ್ಣ ಎಂದು ವಿಜಯಲಕ್ಷ್ಮಿ ಕೇಳಿಕೊಂಡಿದ್ದಾರೆ. ಇನ್ನು ಸಾಕಷ್ಟು ಜನ ಅಭಿಮಾನಿಗಳು ನಟಿಯ ಸಹಾಯಕ್ಕೆ ನಿಂತಿದ್ದರು. ಹಣದ ಸಹಾಯವನ್ನು ಕೂಡ ಮಾಡಿದ್ದರು.


Click it and Unblock the Notifications











