'ಅಣ್ಣಾತೆ' ಬಳಿಕ 'ಪೆಟ್ಟಾ' ನಿರ್ದೇಶಕರ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡಕ್ಕೆ ಕೊರೊನಾ ಅಡ್ಡಿ ಪಡಿಸಿದ ಹಿನ್ನಲೆ ಮತ್ತೆ ಚಿತ್ರೀಕರಣ ಸ್ಥಗಿತಗೊಳಿಸಲಾಯಿತು. ಅಷ್ಟರಲ್ಲೇ ತಲೈವಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.
ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ರಜನಿಕಾಂತ್ ಗೆ ಕೆಲವು ದಿನಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದರು. ಹಾಗಾಗಿ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮತ್ತೆ ಮುಂದಕ್ಕೆ ಹಾಕಬೇಕಾಯಿತು. ಸದ್ಯ ಚಿತ್ರತಂಡ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ತಯಾರಿಯಲ್ಲಿದೆ. ಈ ನಡುವೆ ರಜನಿಕಾಂತ್ ಮುಂದಿನ ಸಿನಿಮಾ ಸದ್ದು ಮಾಡುತ್ತಿದೆ.
ಸೂಪರ್ ಸ್ಟಾರ್ ಮುಂದಿನ ಸಿನಿಮಾಗೆ ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಸಹಜವಾಗಿ ಮನೆಮಾಡಿರುತ್ತೆ. ಸದ್ಯಕೇಳಿರುತ್ತಿರುವ ಮಾಹಿತಿ ಪ್ರಕಾರ ರಜನಿಕಾಂತ್ ಮತ್ತೆ ಪೆಟ್ಟಾ ನಿರ್ದೇಶಕರ ಜೊತೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

ಪೆಟ್ಟಾ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮತ್ತೆ ರಜನಿಕಾಂತ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸೂಪರ್ ಸ್ಟಾರ್ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಕಾರ್ತಿಕ್ ನಿರ್ದೇಶನದ ಜಗಮೆ ತಂಧಿರಾಮ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಇದಲ್ಲದೆ ಕಾರ್ತಿಕ್ ಸದ್ಯ ಚಿಯಾನ್ ವಿಕ್ರಮ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸಿನಿಮಾ ಬಳಿಕ ಮತ್ತೆ ರಜನಿಕಾಂತ್ ಗೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
ಅಂದಹಾಗೆ ಬಹುನಿರೀಕ್ಷೆ ಮೂಡಿಸಿರುವ ಅಣ್ಣಾತೆ ಸಿನಿಮಾದ ರಿಲೀಸ್ ಡೇಟ್ ಇತ್ತೀಚಿಗಷ್ಟೆ ಅನೌನ್ಸ್ ಮಾಡಿದೆ ಸಿನಿಮಾತಂಡ. ಸೂಪರ್ ಸ್ಟಾರ್ ಅಣ್ಣಾತೆ ಸಿನಿಮಾ ದೀಪಾವಳಿಗೆ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಾಲ್ಕು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ನಯನತಾರಾ, ಖುಷ್ಬೂ, ಮೀನಾ ಮತ್ತು ಕೀರ್ತಿ ಸುರೇಶ್ 4 ನಟಿಯರು ಸೂಪರ್ ಸ್ಟಾರ್ ಜೊತೆ ಮಿಂಚುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.


Click it and Unblock the Notifications











