ಎಂಜಿಆರ್, ಜಯಲಲಿತಾ ಬಗ್ಗೆ ತಪ್ಪು ಮಾಹಿತಿ: 'ತಲೈವಿ' ಸಿನಿಮಾ ಬಗ್ಗೆ ಆಕ್ಷೇಪ
ಜಯಲಲಿತಾ ಜೀವನದ ಆಧರಿಸಿದ 'ತಲೈವಿ' ಸಿನಿಮಾವು ಇಂದು ಬಿಡಗುಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರನೌತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಅರವಿಂದ ಸ್ವಾಮಿ ನಟಿಸಿದ್ದಾರೆ.
'ತಲೈವಿ' ಸಿನಿಮಾವು ತಮಿಳುನಾಡು ಮಾಜಿ ಸಿಎಂಗಳಾದ ಎಂಜಿಆರ್, ಜಯಲಲಿತಾ ಕುರಿತು ತಪ್ಪು ಮಾಹಿತಿ ಒಳಗೊಂಡಿದೆ ಎಂದು ಎಐಎಡಿಎಂಕೆ ಪಕ್ಷದ ಮುಖಂಡರು ಆಕ್ಷೇಪಿಸಿದ್ದು, ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆಯಬೇಕೆಂದು ಒತ್ತಾಯಿಸಿದೆ.
'ತಲೈವಿ' ಸಿನಿಮಾ ವೀಕ್ಷಿಸಿದ ಎಐಎಡಿಎಂಕೆ ಪಕ್ಷದ ಮುಖಂಡ, ಮಾಜಿ ಸಚಿವ ಡಿ ಜಯಕುಮಾರ್, ''ಸಿನಿಮಾದಲ್ಲಿ ಎಂಜಿಆರ್ ಹಾಗೂ ಜಯಲಲಿತಾ ಕುರಿತ ಕೆಲವು ಸನ್ನಿವೇಶಗಳು ನಿಜಕ್ಕೆ ಹತ್ತಿರವಾಗಿಲ್ಲ ಅವುಗಳನ್ನು ತೆಗೆದರೆ ಸಿನಿಮಾವನ್ನು ಎಐಎಡಿಎಂಕೆ ಕಾರ್ಯಕರ್ತರು, ಮುಖಂಡರು ಮೆಚ್ಚಿಕೊಳ್ಳುತ್ತಾರೆ. ಸಿನಿಮಾವನ್ನು ಬಹಳ ಶ್ರಮವಹಿಸಿ, ಚೆನ್ನಾಗಿ ನಿರ್ಮಾಣ ಮಾಡಿದ್ದಾರೆ'' ಎಂದಿದ್ದಾರೆ.
''ಸಿನಿಮಾದ ಒಂದು ದೃಶ್ಯದಲ್ಲಿ ಎಂಜಿಆರ್ ಸಚಿವ ಸ್ಥಾನಕ್ಕೆ ಆಸೆಪಟ್ಟು ಕೇಳುತ್ತಾರೆ ಆದರೆ ಕರುಣಾನಿಧಿ ಅದಕ್ಕೆ ಒಪ್ಪುವುದಿಲ್ಲ ಆಗ ಎಂಜಿಆರ್ ಬೇಸರಪಟ್ಟುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಕರುಣಾನಿಧಿಯನ್ನು ಸಿಎಂ ಮಾಡಿದ್ದೆ ಎಂಜಿಆರ್. ಅವರೆಂದೂ ಸಚಿವ ಸ್ಥಾನಕ್ಕಾಗಲಿ, ಇನ್ನಾವುದೇ ಅಧಿಕಾರಕ್ಕಾಗಲಿ ಆಸೆ ಪಟ್ಟವರಲ್ಲ. ಕೆಲವು ದೃಶ್ಯಗಳಲ್ಲಿ ಎಂಜಿಆರ್ ವ್ಯಕ್ತಿತ್ವವನ್ನು ತಪ್ಪಾಗಿ ಬಿಂಬಿಸಲಾಗಿದೆ'' ಎಂದಿದ್ದಾರೆ ಜಯಕುಮಾರ್.

ಕರುಣಾನಿಧಿಯನ್ನು ಸಿಎಂ ಸ್ಥಾನಕ್ಕೆ ಸೂಚಿಸಿದ್ದೆ ಎಂಜಿಆರ್
ಎಂಜಿಆರ್ಗೆ ಗುಂಡೇಟು ಬಿದ್ದು ಗಾಯಗೊಂಡಾಗ ಆ ಚಿತ್ರಗಳನ್ನು ಬಳಸಿ ಡಿಎಂಕೆ ಪಕ್ಷ ಆಗ ಗೆಲುವು ಸಾಧಿಸಿತ್ತು. ಸಿಎಂ ಆಗಿದ್ದ ಅಣ್ಣಾದೊರೈ ಎಂಜಿಆರ್ ಅವರನ್ನು ಮಂತ್ರಿ ಮಾಡಲು ಬಯಸಿದ್ದರು. ಆದರೆ ಎಂಜಿಆರ್ ಅದನ್ನು ನಿರಾಕರಿಸಿದರು. ಕೊನೆಗೆ ಹೊಸದಾಗಿ ಸೃಷ್ಟಿಸಲಾಗಿದ್ದ ಸಣ್ಣ ಹುದ್ದೆಯೊಂದನ್ನು ಎಂಜಿಆರ್ಗೆ ನೀಡಲಾಯಿತು. ಅಣ್ಣಾದೊರೈ ನಿಧನದ ಬಳಿಕ ಎಂಜಿಆರ್ ಮಂತ್ರಿ ಪದವಿಗೆ ಆಸೆಪಟ್ಟಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ ಆದರೆ ಅದು ಸುಳ್ಳು, ಕರುಣಾನಿಧಿಯನ್ನು ಸಿಎಂ ಸ್ಥಾನಕ್ಕೆ ಸೂಚಿಸಿದ್ದೆ ಎಂಜಿಆರ್ ಎಂದಿದ್ದಾರೆ ಜಯಕುಮಾರ್.

ಎಂಜಿಆರ್ಗೆ ಗೊತ್ತಿಲ್ಲದೆ ಇಂದಿರಾ ಗಾಂಧಿ ಸಂಪರ್ಕ ಸುಳ್ಳು
''ಮತ್ತೊಂದು ದೃಶ್ಯದಲ್ಲಿ, ಜಯಲಲಿತಾ, ಎಂಜಿಆರ್ಗೆ ಗೊತ್ತಿಲ್ಲದೆ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಜೊತೆ ಸಂಪರ್ಕದಲ್ಲಿದ್ದರು ಎಂದು ತೋರಿಸಲಾಗಿದೆ ಅದೂ ಸಹ ಸುಳ್ಳು. ಅವರೆಂದು ಹಾಗೆ ಗೊತ್ತಿಲ್ಲದೆ ಪಕ್ಷದ ನಿರ್ಣಯ ತೆಗೆದುಕೊಂಡವರಲ್ಲ. ಅಲ್ಲದೆ ಎಂಜಿಆರ್ ಕೆಲವು ಸಂದರ್ಭಗಳಲ್ಲಿ ಜಯಲಲಿತಾ ಅನ್ನು ಕ್ಷುಲ್ಲಕವಾಗಿ ಕಂಡರು ಎಂದು ಸಹ ತೋರಿಸಲಾಗಿದೆ ಅದೂ ಸಹ ಸುಳ್ಳು. ಈ ದೃಶ್ಯಗಳನ್ನು ತೆಗೆದು ಹಾಕಿದರೆ ಇದೊಂದು ಬಹಳ ಒಳ್ಳೆಯ ಸಿನಿಮಾ. ಬಹಳ ದೊಡ್ಡ ಹಿಟ್ ಆಗುತ್ತದೆ'' ಎಂದಿದ್ದಾರೆ ಜಯಕುಮಾರ್.

''1982ರಿಂದ ಜಯಲಲಿತಾ ಜೊತೆಗೆ ಪ್ರವಾಸ ಮಾಡಿದ್ದೀನಿ''
''ನಾನು 1982ರಿಂದಲೂ ಜಯಲಲಿತಾ ಜೊತೆಗೆ ರಾಜ್ಯ, ರಾಷ್ಟ್ರದಲ್ಲಿ ಓಡಾಡಿದ್ದೇನೆ. ಸಿನಿಮಾ ನೋಡಬೇಕಾದರೆ ಹಳೆಯ ಘಟನೆಗಳೆಲ್ಲವೂ ನೆನಪಿಗೆ ಬಂದವು. ಇದೊಂದು ಬಹಳ ಒಳ್ಳೆಯ ಸಿನಿಮಾ, ಬಹಳ ಕಷ್ಟಪಟ್ಟು, ಶ್ರಮವಹಿಸಿ ಸಿನಿಮಾ ಮಾಡಲಾಗಿದೆ. ಕೆಲವು ದೃಶ್ಯಗಳನ್ನು ತೆಗೆದು ಹಾಕಿದರೆ ಇದು ಬಹಳ ದೊಡ್ಡ ಹಿಟ್ ಸಿನಿಮಾ ಆಗಲಿದೆ. ಎಐಎಡಿಎಂಕೆ ಕಾರ್ಯಕರ್ತರು ಈ ಸಿನಿಮಾವನ್ನು ಮೆಚ್ಚಿಕೊಳ್ಳಲಿದ್ದಾರೆ'' ಎಂದಿದ್ದಾರೆ ಜಯಕುಮಾರ್.

ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ
'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ ಸ್ವಾಮಿ, ಕರುಣಾನಿಧಿ ಪಾತ್ರದಲ್ಲಿ ನಾಸರ್ ನಟಿಸಿದ್ದಾರೆ. ಸಿನಿಮಾವನ್ನು ಎಎಲ್ ವಿಜಯ್, ಆರ್.ಎಂ.ವೀರಪ್ಪನ್ ಪಾತ್ರದಲ್ಲಿ ಸಮುದ್ರಕಿಣಿ, ಶಶಿಕಲಾ ಪಾತ್ರದಲ್ಲಿ ಪೂರ್ಣಾ ನಟಿಸಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ವಿಜಯೇಂದ್ರ ಪ್ರಸಾದ್, ಮಧು ಕರ್ಕಿ, ರಜತ್ ಅರೋರ ಬರೆದಿದ್ದಾರೆ. 'ತಲೈವಿ' ಸಿನಿಮಾ ಇಂದು ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.


Click it and Unblock the Notifications











