ರಜನೀಕಾಂತ್ ಮನೆಗೆ ಭೇಟಿಕೊಟ್ಟ 'ಚಿನ್ನಮ್ಮ': ಗರಿಗೆದರಿದ ರಾಜಕೀಯ ಕುತೂಹಲ
ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರಕ್ಕೇರುವ ಆಸೆ ಹೊಂದಿದ್ದ ನಟ ರಜನೀಕಾಂತ್ ಆರೋಗ್ಯ ಸಮಸ್ಯೆ ಕಾರಣದಿಂದ ನಿರ್ಧಾರದಿಂದ ಹಿಂದೆ ಸರಿದರು. ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಘೋಷಿಸಿದರು.
ಸಕ್ರಿಯ ರಾಜಕೀಯದಿಂದ ಹಿಂದೆ ಸರಿದರೂ ಸಹ ತಮಿಳುನಾಡು ರಾಜಕೀಯದ ಮೇಲೆ ಪ್ರಭಾವ ಬೀರಲು ರಜನೀಕಾಂತ್ ಶಕ್ತರು ಎಂಬುದನ್ನು ಅಲ್ಲಿನ ಪ್ರಾದೇಶಿಕ ಪಕ್ಷಗಳು, ರಾಷ್ಟ್ರೀಯ ಪಕ್ಷಗಳು ಚೆನ್ನಾಗಿಯೇ ಅರಿತುಕೊಂಡಿವೆ.
ಇದೀಗ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಲು ಯತ್ನಿಸುತ್ತಿರುವ ಶಶಿಕಲಾ ಹಠಾತ್ತನೆ ರಜನೀಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಇದು ತಮಿಳುನಾಡು ರಾಜಕೀಯದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಶಶಿಕಲಾ ಅನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ ಶಶಿಕಲಾ ಪಕ್ಷದ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಮಂಗಳವಾರದಂದು ಶಶಿಕಲಾ, ರಜನೀಕಾಂತ್ ಅವರ ಪೋಯಸ್ ಗಾರ್ಡನ್ನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ರಜನೀಕಾಂತ್ ಜೊತೆಗೆ ಪತ್ನಿ ಲತಾ ಸಹ ಇದ್ದರು. ಇದೊಂದು ಔಪಚಾರಿಕ ಭೇಟಿಯಷ್ಟೆ ಆಗಿದೆ ಎಂದು ಶಶಿಕಲಾ ಕಚೇರಿ ಹೇಳಿಕೆ ಹೊರಡಿಸಿದೆ. ''ಶಶಿಕಲಾ ಅವರು, ದಾದಾ ಸಾಹೇಬ್ ಪ್ರಶಸ್ತಿ ಪಡೆದ ರಜನೀಕಾಂತ್ ಅವರನ್ನು ಅಭಿನಂದಿಸಿ, ಅವರ ಆರೋಗ್ಯ ವಿಚಾರಣೆ ಮಾಡಿದ್ದಾರೆ'' ಎಂದು ಶಶಿಕಲಾ ಕಚೇರಿ ಹೇಳಿದೆ.
ಶಶಿಕಲಾ, ರಜನೀಕಾಂತ್ ಅನ್ನು ಭೇಟಿ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅಸಲಿಗೆ ರಜನೀಕಾಂತ್ ಹಾಗೂ ಶಶಿಕಲಾ ಸುಮಾರು ಮೂರು ದಶಕಗಳಿಂದಲೂ ನೆರೆಹೊರೆಯವರೇ. ಜಯಲಲಿತಾ ಹಾಗೂ ಶಶಿಕಲಾ, ರಜನೀಕಾಂತ್ ಇರುವ ಪೋಯಸ್ ಗಾರ್ಡನ್ನಲ್ಲಿಯೇ ವಾಸವಿದ್ದರು. ಆದರೆ ಶಶಿಕಲಾ ರಜನೀಕಾಂತ್ ಅವರನ್ನು ಭೇಟಿಯಾಗಿರಲಿಲ್ಲ. ಆಗ ಜಯಲಲಿತಾ ಹಾಗೂ ರಜಕೀಕಾಂತ್ ನಡುವೆ ರಾಜಕೀಯ ಸಂಬಂಧ ಉತ್ತಮವಾಗಿರಲಿಲ್ಲ. ಆದರೆ ಈಗ ಶಶಿಕಲಾಗೆ ರಾಜಕೀಯ ಕ್ಷೇತ್ರದಲ್ಲಿ ಮರಳಿ ಪ್ರಾಬಲ್ಯ ಹೊಂದಲು ದೊಡ್ಡ ಮಟ್ಟದ ಜನಶಕ್ತಿಯ ಅವಶ್ಯಕತೆ ಇದ್ದು, ಇದೇ ಕಾರಣದಿಂದ ರಜನೀಕಾಂತ್ ಅವರನ್ನು ಭೇಟಿ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
1996 ರ ಚುನಾವಣೆ ಸಂದರ್ಭದಲ್ಲಿ ಜಯಲಲಿತಾರ ಎಐಎಡಿಎಂಕೆ ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದರು ರಜನೀಕಾಂತ್. ''ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ದೇವರು ಸಹ ತಮಿಳುನಾಡನ್ನು ಕಾಪಾಡಲಾರ'' ಎಂದಿದ್ದರು. ರಜನೀಕಾಂತ್ರ ಪ್ರಚಾರದಿಂದಾಗಿ ಎಐಎಡಿಎಂಕೆ ದೊಡ್ಡ ಮಟ್ಟದ ಸೋಲು ಅನುಭವಿಸಿತು. ಆಗಿನಿಂದಲೂ ರಜನೀಕಾಂತ್ ಹಾಗೂ ಜಯಲಲಿತಾ ಹಾಗೂ ಅವರ ಆಪ್ತೆ ಶಶಿಕಲಾ ನಡುವೆ ವೈಷಮ್ಯ ಇತ್ತು. ಆದರೆ ಈಗ ಶಶಿಕಲಾ ಹಳೆಯ ದ್ವೇಷ ಬಿಟ್ಟು ರಾಜಕೀಯ ರಂಗದಲ್ಲಿ ಭವಿಷ್ಯಕ್ಕಾಗಿ ರಜನೀಕಾಂತ್ ಅವರನ್ನು ಭೇಟಿಯಾಗಿದ್ದಾರೆ.


Click it and Unblock the Notifications











