"ವಯಸ್ಸಾಗಿದ್ರು ಸಖತ್ತಾಗಿದ್ದೀಯಾ? ಅಡ್ರೆಸ್ ಕೊಟ್ರೆ ಮನೆಗೆ ಬರ್ತೀನಿ": ಮೆಸೇಜ್ ಮಾಡಿ ಜ್ಯೂಲಿ ಲಕ್ಷ್ಮಿ ಮಗಳಿಗೆ ಕಿರುಕುಳ
ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ ಮಗಳು ಐಶ್ವರ್ಯ ಭಾಸ್ಕರನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಆದರೆ ಈಗ ಸಿನಿಮಾ ಅವಕಾಶಗಳು ಇಲ್ಲದೇ ಮನೆಯಲ್ಲಿದ್ದಾರೆ. ಜೀವನೋಪಾಯಕ್ಕಾಗಿ ಬೀದಿ ಬೀದಿ ಸುತ್ತಿ ಸಾಬೂನು ಮಾರಾಟ ಮಾಡುತ್ತಿದ್ಧಾರೆ. ಈ ವಿಚಾರವನ್ನು ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಆಕೆಯೇ ಹೇಳಿಕೊಂಡಿದ್ದರು.
ಇತ್ತೀಚೆಗೆ ಐಶ್ವರ್ಯ ಭಾಸ್ಕರನ್ ಆನ್ಲೈನ್ನಲ್ಲಿ ಸಾಬೂನು ಮಾರಾಟಕ್ಕೆ ಮುಂದಾಗಿದ್ಧಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡಿದ್ದರು. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಫೋನ್, ಮೆಸೇಜ್ ಮಾಡಿ ಆರ್ಡರ್ ಮಾಡಿದರೆ ಸಾಬೂನು ತಲುಪಿಸುವುದಾಗಿ ಹೇಳಿದ್ದರು. ತಮ್ಮ ಮೊಬೈಲ್ ನಂಬರ್ ಅನ್ನು ಶೇರ್ ಮಾಡಿದ್ದರು. ಇದಕ್ಕೆ ಒಳ್ಳೆ ಪ್ರತಿಕ್ರಿಯೆ ಕೂಡ ಸಿಗುತ್ತಿತ್ತು. ಆದರೆ ಕೆಲ ಕಾಮುಕರು ಮಧ್ಯರಾತ್ರಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾರೆ ಎಂದು ಐಶ್ವರ್ಯ ಅಲವತ್ತುಕೊಂಡಿದ್ಧಾರೆ. ಈ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿದ್ದಾರೆ.

ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡುತ್ತಿರುವವರ ಮೆಸೇಜ್ಗಳನ್ನು ಓದಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಸರಿನ ಸಮೇತ ಹೇಳಿ ಒಬ್ಬೊಬ್ಬರ ಚಳಿ ಬಿಡಿಸಿದ್ದಾರೆ. ಒಬ್ಬ ಮೆಸೇಜ್ ಮಾಡಿ "ನಾನು ಸಾಬೂನಲ್ಲ, ನಿನ್ನನ್ನು ಕೊಂಡುಕೊಳ್ಳೋಣ ಎಂದುಕೊಂಡಿದ್ದೇನೆ. ವಯಸ್ಸಾಗಿದ್ದರೂ ಸಖತ್ತಾಗಿದ್ದೀಯಾ" ಎಂದಿದ್ದಾನೆ. ಮತ್ತೊಬ್ಬ ವಯಸ್ಸಾದ ವ್ಯಕ್ತಿ ಮಧ್ಯರಾತ್ರಿ 11.30ಕ್ಕೆ ಮೆಸೇಜ್ ಮಾಡಿ "ಮೇಡಂ ನಿಮ್ಮ ಪ್ರಾಡೆಕ್ಟ್ಸ್ ಪರ್ಸನಲ್ ಆಗಿ ನೋಡಬೇಕು. ಸಾಧ್ಯ ಆದ್ರೆ ಅಡ್ರೆಸ್ ಶೇರ್ ಮಾಡಿ ಎಂದಿದ್ದಾನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಮತ್ತೊಬ್ಬರು ಖಾಸಗಿ ಅಂಗಗಳ ಫೋಟೊ ಕ್ಲಿಕ್ಕಿಸಿ ಕಳುಹಿಸಿದ್ದಾರೆ. ಕೆಲವನ್ನು ನೋಡಲು ಸಾಧ್ಯವಾಗದೇ ಡಿಲೀಟ್ ಮಾಡಿದ್ಧೇನೆ. ಇವರ ಮೆಸೇಜ್, ಕಾಮೆಂಟ್ ಎಲ್ಲಾ ನೋಡುತ್ತಿದ್ದರೆ ವಾಕರಿಕೆ ಬರುತ್ತಿದೆ. ನಾನು ವೀವ್ಸ್ಗಾಗಿ ಈ ವಿಡಿಯೋ ಮಾಡುತ್ತಿಲ್ಲ. ಇಂತಹ ಕಾಮುಕರಿಗೆ ಎಚ್ಚರಿಕೆ ನೀಡಲು ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಈ ರೀತಿ ಮೆಸೇಜ್ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡಿತ್ತೀನಿ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲಾ ತಾಯಿ ಹೊಟ್ಟೆಯಲ್ಲಿ ಹುಟ್ಟಲಿಲ್ಲವಾ? ಅಕ್ಕ, ತಂಗಿ ಯಾರು ಇಲ್ವಾ? ಎಂದು ಗರಂ ಆಗಿದ್ದಾರೆ. ಇದಕ್ಕೆಲ್ಲಾ ನಾನು ಪೊಲೀಸ್ ಕಂಪ್ಲೇಟ್ ಕೊಡಲ್ಲ. ಬದಲಿದೆ ನಿಮ್ಮ ಮನೆಗೆ ಬಂದು ನಿಮ್ಮ ಹೆಂಡತಿ, ತಾಯಿ ಮುಂದೆ ಪೊರಕೆಯಲ್ಲಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಬ್ಬ ಮಹಿಳೆಗೆ ಗಂಡ ಇಲ್ಲ, ಒಬ್ಬೊಂಟಿಯಾಗಿ ಬದುಕುತ್ತಿದ್ದಾಳೆ ಅಂದ್ರೆ ನೀವು ಏನು ಅಂದುಕೊಂಡಿದ್ದೀರಾ? ನಾನು ಅಂತಹ ಮಹಿಳೆ ಅಲ್ಲ, ಕಷ್ಟಬಿದ್ದು ಕೆಲಸ ಮಾಡಿ ಬದುಕುತ್ತಿದ್ದೇನೆ ಎಂದಿದ್ದಾರೆ.

"ಇನ್ನು ಮುಂದೆ ಬೆಳಗ್ಗೆ 9 ಗಂಟೆಗೆ ಮುಂಚೆ ರಾತ್ರಿ 9 ಗಂಟೆ ನಂತರ ಯಾರಾದರೂ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಎಂದು ಐಶ್ವರ್ಯ ಎಚ್ಚರಿಕೆ ನೀಡಿದ್ಧಾರೆ. ಅದೇ ರೀತಿ ಈ ರೀತಿ ಯಾರದರೂ ಆನ್ಲೈನ್ನಲ್ಲಿ ಕಿರುಕುಳ ಕೊಟ್ಟರೆ ಆ ಸ್ಕ್ರೀನ್ಶಾಟ್, ನಂಬರ್ ತೆಗೆದು ಸೈಬರ್ ಕ್ರೈಮ್ಗೆ ಕೊಡಿ" ಎಂದು ಸಲಹೆ ನೀಡಿದ್ದಾರೆ.
1989ರಲ್ಲಿ 'ಅಡವಿಲೋ ಅಭಿಮನ್ಯುಡು' ಚಿತ್ರದ ಮೂಲಕ ಐಶ್ವರ್ಯ ಭಾಸ್ಕರನ್ ಚಿತ್ರರಂಗಕ್ಕೆ ಬಂದರು. ಮರುವರ್ಷವೇ 'ಹೊಸ ಕಾವ್ಯ' ಚಿತ್ರದಲ್ಲಿ ನಟಿಸಿ ಸ್ಯಾಂಡಲ್ವುಡ್ಗೆ ಪರಿಚಿತರಾದರು. ಮುಂದೆ 'ಪಾಂಡವರು', 'ಒಗ್ಗರಣೆ' ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಇನ್ನುಳಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೇ ಪೋಷಕ ನಟಿಯಾಗಿಯೂ ಗುರ್ತಿಸಿಕೊಂಡಿದ್ದಾರೆ.


Click it and Unblock the Notifications











