ಕಾರ್ ರೇಸಿಂಗ್ ಬೇಕಾ? ಸಿನಿಮಾ ಬೇಕಾ? ಅಜಿತ್ ದಿಟ್ಟ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ
ತಮಿಳು ನಟ ಅಜಿತ್ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ ಕಾರ್ ರೇಸಿಂಗ್ ಹಾಗೂ ಬೈಕ್ ರೈಡಿಂಗ್ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಬೈಕ್ ಏರಿ ಇತ್ತೀಚೆಗೆ ಪ್ರಪಂಚ ಪರ್ಯಟನೆ ಮಾಡಿದ್ದರು. ಮತ್ತೊಂದು ಬೈಕ್ ರೈಡ್ ಹೋಗಲು ನಿರ್ಧರಿಸಿದ್ದಾರೆ.
ಕಾರ್ ರೇಸಿಂಗ್ ಬಗ್ಗೆಯೂ ಬಹಳ ವರ್ಷಗಳಿಂದ ಆಸಕ್ತಿ ಬೆಳೆಸಿಕೊಂಡಿದ್ದಾರೆ. ರೇಸಿಂಗ್ ಟ್ರ್ಯಾಕ್ಗಳಲ್ಲಿ ಕಾರ್ ಚಲಾಯಿಸುತ್ತಾರೆ. ತಮ್ಮದೇ ಒಂದು ಕಾರ್ ರೇಸಿಂಗ್ ತಂಡ ಕಟ್ಟಿದ್ದಾರೆ. ಇತ್ತೀಚೆಗೆ ದುಬೈ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಅವರ ತಂಡ 3ನೇ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿತ್ತು.

ಸಿನಿಮಾಗಳ ನಡು ನಡುವೆ ಕಾರ್ ರೇಸಿಂಗ್ ಕಷ್ಟವಾಗುತ್ತಿದೆ ಎಂದು ಇತ್ತೀಚೆಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನವೊಂದರಲ್ಲಿ ಅಜಿತ್ ಹೇಳಿದ್ದಾರೆ. ಅದೇ ಕಾರಣಕ್ಕೆ ಒಂದು ದಿಟ್ಟ ನಿರ್ಧಾರಕ್ಕೆ ಮುಂದಾಗಿದ್ದಾರೆ. " ಸಿನಿಮಾ ಹಾಗೂ ರೇಸಿಂಗ್ ಎರಡೂ ನನಗೆ ಮುಖ್ಯ. ನಾನು ಈಗ ರೇಸಿಂಗ್ ಟೀಂ ಮಾಲೀಕನಾಗಿದ್ದೀನಿ. ಇದೇ ಕಾರಣಕ್ಕೆ ಇನ್ನು ಮುಂದೆ ರೇಸಿಂಗ್ ಸೀಸನ್ ಇರುವಾಗ ಸಿನಿಮಾಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದುಕೊಂಡಿದ್ದೇನೆ" ಎಂದು ಅಜಿತ್ ಹೇಳಿದ್ದಾರೆ.
"ಕಾರುಗಳನ್ನು ಚಲಾಯಿಸುವಾಗ ಅಪಘಾತಗಳು ಸಂಭವಿಸಿವೆ. ನಿಜ ಹೇಳಬೇಕೆಂದರೆ ನನ್ನ ಸಿನಿಮಾಗಳಲ್ಲಿನ ಸ್ಟಂಟ್ಸ್ ನಾನೇ ಮಾಡುತ್ತೇನೆ. ಇದರಿಂದಾಗಿ ನನಗೆ ಹಲವು ಶಸ್ತ್ರಚಿಕಿತ್ಸೆಗಳು ಆಗಿದೆ. ಹಾಗಂತ ನಾನು ಆಕ್ಷನ್ ಸಿನಿಮಾಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಅದೇ ರೀತಿ, ಅಪಘಾತಗಳು ಸಂಭವಿಸಿವೆ ಎನ್ನುವ ಕಾರಣಕ್ಕಾಗಿ ನಾನು ಕಾರು ರೇಸಿಂಗ್ನಿಂದ ದೂರವಿರಲು ಸಾಧ್ಯವಿಲ್ಲ. ನನ್ನ ಅಭಿಪ್ರಾಯದಲ್ಲಿ, ಇವು ಎರಡೂ ಒಂದೇ" ಎಂದು ಅಜಿತ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಅಜಿತ್ ಸಿನಿಮಾಗಳು ಸೋತಾಗ ಕರಿಯರ್ ಮುಗಿಯಿತು ಎನ್ನುವ ಅರ್ಥದಲ್ಲಿ ಕೆಲಸವರು ಮಾತನಾಡಿದ್ದರು. ಈ ಬಗ್ಗೆ ಮಾತನಾಡಿರುವ ಅಜಿತ್ "ನನ್ನ ಕರಿಯರ್ ಮುಗೀತು ಅಂತ ಕೆಲವರು ಅಂದುಕೊಂಡಿದ್ದರು. ಅಚ್ಚರಿ ಎನ್ನುವಂತೆ ನನ್ನನ್ನು ಹುಡುಕಿ ನಿರ್ಮಾಪಕರು ಇನ್ನು ಬರ್ತಿದ್ದಾರೆ" ಎಂದು ಅಜಿತ್ ಹೇಳಿದ್ದಾರೆ. ಇದೆಲ್ಲದರ ನಡುವೆ ಅಜಿತ್ ನಿರ್ಧಾರ ನಿರ್ಮಾಪಕರು, ಹಾಗೂ ಕೆಲ ಅಭಿಮಾನಿಗಳಿಗೆ ಬೇಸರ ತಂದಿದೆ.
ಸದ್ಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಆದರೆ ಇದೇ ಕಾರಣಕ್ಕೆ ಸಿನಿಮಾಗಳ ನಿರ್ಮಾಣ, ಬಿಡುಗಡೆ ತಡವಾಗುತ್ತಿದೆ. ಅಜಿತ್ ಸಿನಿಮಾ ಮಾಡುವ ಸ್ಪೀಡ್ ಕೂಡ ನಿಧಾನ. ಈ ವರ್ಷ ಎರಡು ತಿಂಗಳ ಅಂತರದಲ್ಲಿ 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳು ಬಂದಿತ್ತು. ಆದರೆ ಕಳೆದ ವರ್ಷ ಯಾವುದೇ ಸಿನಿಮಾ ಬಂದಿರಲ್ಲ.
ವರ್ಷಕ್ಕೆ ಒಂದೇ ಸಿನಿಮಾ ಎನ್ನುವಂತೆ ಇತ್ತೀಚೆಗೆ ಅಜಿತ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಯಾವುದೇ ಸಿನಿಮಾ ಬರದ ಕಾರಣ ಈ ವರ್ಷ 2 ಸಿನಿಮಾಗಳು ಬಂದಿದೆ. ಸದ್ಯ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮುಂದೆ ಯಾವ ಸಿನಿಮಾ? ಯಾವಾಗ ರಿಲೀಸ್? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೆಲ್ಲದರ ನಡುವೆ ಅಜಿತ್ ಕಾರ್ ರೇಸಿಂಗ್ ಅನ್ನು ಗಂಭೀರವಾಗಿ ತೆಗೆದುಕೊಂಡರೆ ಸಿನಿಮಾ ಚಿತ್ರೀಕರಣ ತಡವಾಗುತ್ತದೆ ಎನ್ನುವುದು ಕೆಲವರ ಆತಂಕಕ್ಕೆ ಕಾರಣವಾಗಿದೆ.
ಅಜಿತ್ ಸಿನಿಮಾಗಳು ನೂರಾರು ಕೋಟಿ ವ್ಯವಹಾರ ನಡೆಸುತ್ತವೆ. ಹಾಗಾಗಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ನಿರ್ಮಾಪಕರು ಬಯಸುತ್ತಾರೆ. ಸದ್ಯ ದಳಪತಿ ವಿಜಯ್ ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ. ಅವರು ಮುಂದೆ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇಂತಹ ಸಮಯದಲ್ಲಿ ಅಜಿತ್ ಕೂಡ ರೇಸಿಂಗ್ ಕಾರಣಕ್ಕೆ ಸಿನಿಮಾ ಮಾಡುವುದು ಕಮ್ಮಿ ಮಾಡಿದರೆ ಹೇಗೆ? ಎಂದು ಕೇಳುತ್ತಿದ್ದಾರೆ.


Click it and Unblock the Notifications










