ಒಂದೇ ಕಾರ್ಯಕ್ರಮಕ್ಕೆ ಧನುಷ್, ನಯನ್ ಹಾಜರ್; ಮುಖ ತಿರುವಿದ ಲೇಡಿ ಸೂಪರ್ ಸ್ಟಾರ್
ಕಾಪಿ ರೈಟ್ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಟ ಧನುಷ್ ಹಾಗೂ ನಟಿ ನಯನತಾರ ನಡುವೆ ಭಾರೀ ವಿವಾದ ಸೃಷ್ಟಿಯಾಗಿದ್ದು ಗೊತ್ತೇಯಿದೆ. ಬಹಿರಂಗ ಪತ್ರ ಬರೆದು ಧನುಷ್ ವಿರುದ್ಧ ನಯನ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಇಬ್ಬರ ನಡುವೆ ಶೀತರ ಸಮರಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
ತಮಿಳು ಸಿನಿಮಾ ನಿರ್ಮಾಪಕ ಆಕಾಶ್ ಭಾಸ್ಕರನ್ ಮದುವೆ ಸಮಾರಂಭದಲ್ಲಿ ನಿನ್ನೆ(ನವೆಂಬರ್ 21) ರಾತ್ರಿ ಧನುಷ್-ನಯನ್ ಭಾಗಿ ಆಗಿದ್ದರು. ಇಬ್ಬರೂ ಒಂದೇ ಸಮಯಕ್ಕೆ ಬಂದಿದ್ದರು. ಕೆಲವೊತ್ತು ವೇದಿಕೆ ಮುಂಭಾಗದ ಸೋಫಾಗಳಲ್ಲಿ ಇಬ್ಬರೂ ಕೂರುವಂತಾಯಿತು. ಸ್ವಲ್ಪ ದೂರ ದೂರ ಹಾಕಿದ್ದ ಸೋಫಾಗಳಲ್ಲಿ ಇಬ್ಬರೂ ಕೂತಿದ್ದರು. ಆದರೆ ಒಬ್ಬರ ಮುಖ ಮತ್ತೊಬ್ಬರು ನೋಡದೇ ಮುಖ ತಿರುಗಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಒಂದೇ ಚಿತ್ರರಂಗದ ತಾರೆಯರು ಅಂದಮೇಲೆ ಭೇಟಿ ಆದಾಗ ಪರಸ್ಪರ ಉಭಯಕುಶಲೋಪರಿ ವಿಚಾರಿಸುತ್ತಾರೆ. ಆದರೆ ಈಗ ಧನುಷ್ ಹಾಗೂ ನಯನತಾರ ನಡುವೆ ಎಲ್ಲವೂ ಸರಿಯಿಲ್ಲ. ಹಾಗಾಗಿ ಒಬ್ಬರನ್ನು ಒಬ್ಬರು ಮಾತನಾಡಿಸಲಿಲ್ಲ. ಇನ್ನು ನಯನತಾರ ಸಾಧ್ಯವಾದಷ್ಟು ಧನುಷ್ ಕಡೆ ಕಣ್ಣೆತ್ತಿ ನೋಡದೇ ಇರಲು ಯತ್ನಿಸಿರುವುದು ವೀಡಿಯೋದಲ್ಲಿ ಗೊತ್ತಾಗುತ್ತಿದೆ.
ಧನುಷ್ ಅಂತೂ ಕ್ಯಾರೆ ಎನ್ನದೇ ಕೂತಿರುವುದನ್ನು ಫೋಟೊದಲ್ಲಿ ನೋಡಬಹುದು. ಇನ್ನು ಈ ಫೋಟೊ ವೈರಲ್ ಆಗಿ ಸಾಕಷ್ಟು ಮೀಮ್ಸ್, ಟ್ರೋಲ್ಗಳಿಗೆ ಆಹಾರವಾಗಿದೆ. ಕೆಲವರು 'ಪಡೆಯಪ್ಪ'-2 ಸಿನಿಮಾ ಸೀನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಜನಿಕಾಂತ್ ಹಾಗೂ ರಮ್ಯಾಕೃಷ್ಣ ಒಬ್ಬರಿಗೊಬ್ಬರು ಪೈಪೋಟಿಯಾಗಿ ನಟಿಸಿದ್ದರು.
ಪತಿ ವಿಘ್ನೇಶ್ ಶಿವನ್ ಜೊತೆ ನಯನತಾರ ಮದುವೆ ಸಮಾರಂಭಕ್ಕೆ ಹಾಜರ್ ಆಗಿದ್ದಾರೆ. ಕಾರ್ಯಕ್ರಮಕ್ಕೆ ಆಕೆ ತಾಳಿ ಧರಿಸದೇ ಬಂದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಟ ಧನುಷ್ 'ಇಡ್ಲಿ ಕಡೈ' ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಆಕಾಶ್ ಭಾಸ್ಕರನ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.
ಇನ್ನು ಈ ಅದ್ಧೂರಿ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಟ ಶಿವಕಾರ್ತಿಕೇಯನ್ ಸೇರಿದಂತೆ ಹಲವರು ಆಗಮಿಸಿ ನವ ವಧು-ವರರಿಗೆ ಶುಭ ಹಾರೈಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿರುವ Nayanthara: Beyond the Fairy Tale ಡಾಕ್ಯುಮೆಂಟರಿ ವಿಚಾರಕ್ಕೆ ಧನುಷ್ ಹಾಗೂ ನಯನ್ ನಡುವೆ ತಿಕ್ಕಾಟ ಶುರುವಾಗಿದೆ.

ಎರಡು ವರ್ಷಗಳ ಹಿಂದೆ ನಯನತಾರ- ವಿಘ್ನೇಶ್ ಶಿವನ್ ಮದುವೆ ನಡೆದಿತ್ತು. ತಮ್ಮ ಮದುವೆ ಸಮಾರಂಭವನ್ನು ಸೆರೆಹಿಡಿದು ಪ್ರಸಾರ ಮಾಡುವ ರೈಟ್ಸ್ ಅನ್ನು ನೆಟ್ಫ್ಲಿಕ್ಸ್ಗೆ ಮಾರಾಟ ಮಾಡಿದ್ದರು. ಅಮದಾಜು 25 ಕೋಟಿಗೆ ಈ ಡೀಲ್ ಕುದುರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಆ ಮದುವೆ ವೀಡಿಯೋಗೆ ಡಾಕ್ಯುಮೆಂಟರಿ ರೂಪ ನೀಡಲಾಗಿದೆ.
ನಯನತಾರ ತಮ್ಮ ಜೀವನದ ಸಾಕಷ್ಟು ಸಂಗತಿಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಹಂಚಿಕೊಂಡಿದ್ದಾರೆ. ಆಕೆಗೆ ಆಪ್ತರಾಗಿರುವ ಹಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಡಾಕ್ಯುಮೆಂಟರಿಯಲ್ಲಿ 'ನಾನುಂ ರೌಡಿತಾನ್' ಚಿತ್ರದ ಕೆಲ ಮೇಕಿಂಗ್ ಸನ್ನಿವೇಶಗಳನ್ನು ಬಳಸಿಕೊಳ್ಳಲಾಗಿದೆ. ಆ ಚಿತ್ರವನ್ನು ಧನುಷ್ ನಿರ್ಮಾಣ ಮಾಡಿದ್ದರು. ತಮ್ಮ ಅನುಮತಿ ಇಲ್ಲದೇ ದೃಶ್ಯಗಳನ್ನು ಬಳಸಿದ್ದಕ್ಕೆ ಧನುಷ್ ಚಕಾರ ಎತ್ತಿದ್ದರು.
'ನಾನುಂ ರೌಡಿತಾನ್' ಸಿನಿಮಾ ಚಿತ್ರೀಕರಣದ ವೇಳೆ ವಿಘ್ನೇಶ್- ನಯನ್ ನಡುವೆ ಲವ್ವಾಗಿತ್ತು. ಇದೇ ವಿಚಾರವನ್ನು ಡಾಕ್ಯುಮೆಂಟರಿಯಲ್ಲಿ ಹೇಳುವಾಗ ಮೇಕಿಂಗ್ ದೃಶ್ಯ ಬಳಸಲಾಗಿದೆ. ಇದಕ್ಕೆ ಅನುಮತಿ ಕೇಳಿದಾಗ ಧನುಷ್ ನಿರಾಕರಿಸಿದ್ದರಂತೆ. ಆದರೂ ಡಾಕ್ಯುಮೆಂಟರಿ ಟ್ರೈಲರ್ನಲ್ಲಿ ಅದನ್ನು ಬಳಸಲಾಗಿತ್ತು. ಕೂಡಲೇ ಧನುಷ್ 10 ಕೋಟಿ ರೂ. ಡಿಮ್ಯಾಂಡ್ ಮಾಡಿ ನೋಟಿಸ್ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಯನತಾರ ಬಹಿರಂಗ ಪತ್ರ ಬರೆದಿದ್ದರು


Click it and Unblock the Notifications











