ಸಿನಿಮಾ ನಿರ್ದೇಶಕನಾಗಲು ಅಪಹರಣದ ನಾಟಕವಾಡಿದ ಯುವಕ!
ಸಿನಿಮಾ ನಿರ್ದೇಶಕರಾಗಲು ಏನೇನೋ ಶ್ರಮ ಪಟ್ಟ ಹಲವರು ನಮ್ಮ ನಡುವೆ ಇದ್ದಾರೆ. ಕೊರಿಯರ್ ಬಾಯ್ ಆಗಿದ್ದವರು, ಕೂಲಿ ಕೆಲಸ ಮಾಡುತ್ತಿದ್ದವರೆಲ್ಲ ಹಲವು ರೀತಿ ಶ್ರಮ ಪಟ್ಟು ಸಿನಿಮಾ ಕನಸು ನನಸು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಸಿನಿಮಾ ನಿರ್ದೇಶಕನಾಗಲು ಅಪಹರಣದ ನಾಟಕವಾಡಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
24 ವರ್ಷದ ತಮಿಳುನಾಡಿನ ಯುವಕನೊಬ್ಬ ಕಿರು ಚಿತ್ರ ನಿರ್ದೇಶಿಸಿ, ನಿರ್ಮಿಸುವ ಹುಚ್ಚಿಗೆ ಬಿದ್ದಿದ್ದ. ಪೋಷಕರ ಬಳಿ ಸಿನಿಮಾ ನಿರ್ಮಾಣಕ್ಕಾಗಿ ಹಣ ಕೇಳಿದ್ದಾನೆ. ಆದರೆ ಪೋಷಕರು ಹಣ ನೀಡಲು ನಿರಾಕರಿಸಿದಾಗ ಆತ ತನ್ನದೇ ಅಪಹರಣದ ನಾಟಕವಾಡಿದ್ದಾನೆ.
ವಡಪಲನಿಯ ಮಾಲ್ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಯುವಕ ಆ ದಿನವೆಲ್ಲ ಮನೆಗೆ ಬಂದಿಲ್ಲ. ಮಗ ಮನೆಗೆ ಮರಳದೇ ಇರುವುದು ಕಂಡು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಾರನೇಯ ದಿನ ಯುವಕನ ಪೋಷಕರಿಗೆ ಕರೆಯೊಂದು ಬಂದಿದ್ದು ಮಗನನ್ನು ಸುರಕ್ಷಿತವಾಗಿ ಕಾಣಬೇಕೆಂದರೆ 30 ಲಕ್ಷ ರುಪಾಯಿ ಹಣವನ್ನು ತೆಲಂಗಾಣದ ನಿರ್ದಿಷ್ಟ ಊರೊಂದಕ್ಕೆ ತೆಗೆದುಕೊಂಡು ಬರುವಂತೆ ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಅಲ್ಲದೆ, ಪೊಲೀಸರಿಗೆ ವಿಷಯ ಮುಟ್ಟಿಸಿದರೆ ಮಗನನ್ನು ಕೊಂದು ಬಿಡುವುದಾಗಿ ಸಿನಿಮಾ ಶೈಲಿಯಲ್ಲಿ ಬೆದರಿಕೆ ಹಾಕಿದ್ದಾನೆ.

24 ವರ್ಷದ ಯುವಕ ತನ್ನ ಇಬ್ಬರು ಸ್ನೇಹಿತರೊಟ್ಟಿಗೆ ಸೇರಿಕೊಂಡು ಈ ಅಪಹರಣ ನಾಟಕವಾಡಿದ್ದಾನೆ. ತಾನು ಕಿರು ಸಿನಿಮಾ ನಿರ್ಮಾಣ ಮಾಡಲು ಪೋಷಕರು ಹಣ ನೀಡದೇ ಇದ್ದ ಕಾರಣದಿಂದ ತಾನು ಹೀಗೆ ಮಾಡಿದ್ದಾಗಿ ಯುವಕ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಕೊನೆಗೆ ಯುವಕನಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಆತನನ್ನು ಪೋಷಕರೊಟ್ಟಿಗೆ ಮನೆಗೆ ಕಳಿಸಿದ್ದಾರೆ ಪೊಲೀಸರು.


Click it and Unblock the Notifications











