ಬೆಳಗ್ಗೆ ಆ ಮೇಕೆ ಜೊತೆ ಆಟ ಆಡಿದ್ದೆ.. ಮಧ್ಯಾಹ್ನ ಕತ್ತರಿಸಿ ಬಿರಿಯಾನಿ ಮಾಡಿದ್ರು, ತಿಂದು ವಾಂತಿ ಮಾಡ್ದೆ
ಜನ ಮಾಂಸಹಾರ ಸೇವಿಸುವುದು ಅವರಿಗೆ ಬಿಟ್ಟ ವಿಷಯ, ಅವರವರ ಆಹಾರ ಅವರ ಇಷ್ಟ. ಮಾಂಸಾಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಹಿಂಸೆ ಎನ್ನುವುದು ನೈತಿಕ ಹಾಗೂ ವೈಯಕ್ತಿಕ ನಂಬಿಕೆಯ ವಿಷಯ. ಇದು ಪ್ರಾಣಿ-ಪಕ್ಷಿ ಹತ್ಯೆ, ಹಿಂಸೆ ಎಂದು ಕೆಲವರು ಪರಿಗಣಿಸುತ್ತಾರೆ. ಸಾವಿರಾರು ವರ್ಷಗಳಿಂದ ಮನುಷ್ಯ ಮಾಂಸಾಹಾರ ಸೇವಿಸುತ್ತಾ ಬರ್ತಿದ್ದಾನೆ. ಇದು ಆಹಾರ ಸರಪಳಿಯ ಭಾಗ, ಅನಿವಾರ್ಯ ಎನ್ನುವವರು ಇದ್ದಾರೆ.
ಮಾಂಸಾಹಾರ ಸೇವಿಸುವ ವಿಚಾರಕ್ಕೆ ಕೆಲವರು ಜಾತಿ ಪ್ರಶ್ನೆ ಎತ್ತುವುದು ಇದೆ. ಈ ಸಮುದಾಯದವರು ಮಾಂಸಾಹಾರ ತಿನ್ನಬಹುದಾ? ಎಂದು ಪ್ರಶ್ನೆ ಮಾಡುವವರು ಇದ್ದಾರೆ. ಆಹಾರಕ್ಕೂ ಸಮುದಾಯಕ್ಕೂ ಸಂಬಂಧವಿಲ್ಲ. ಅವರವರ ರುಚಿ, ಆಹಾರ ಅವರಿಗೆ ಬಿಟ್ಟ ವಿಚಾರ. ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅದೊಂದು ಘಟನೆಯಿಂದ ಮಾಂಸಾಹಾರ ಸೇವಿಸುವುದನ್ನು ಬಿಟ್ಟಿದ್ದಾಗಿ ಹೇಳಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.

ತಮಿಳಿನ 'ಬೈಸಿನ್' ಎಂಬ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ವಿಕ್ರಂ ಪುತ್ರ ಧ್ರುವ್ ಹೀರೊ ಆಗಿ ನಟಿಸಿದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಸಂದರ್ಶನದ ವೇಳೆ ನಟಿ ಅನುಪಮಾ ಪರಮೇಶ್ವರ್ ಆ ಘಟನೆಯನ್ನು ನೆನಪಿಸಿಕೊಂಡಿದ್ದರು. 4 ವರ್ಷಗಳ ಹಿಂದೆ 'ಕಾರ್ತಿಕೇಯ- 2' ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದರು. ಆ ಸಿನಿಮಾ ಸೆಟ್ನಲ್ಲಿ ನಡೆದ ಸಂಗತಿಯನ್ನು ನೆನಪು ಮಾಡಿಕೊಂಡಿದ್ದರು. ಆ ಘಟನೆ ಬಳಿಕ ಮಾಂಸಾಹಾರ ತಿನ್ನುವುದು ಸಂಪೂರ್ಣವಾಗಿ ಬಿಟ್ಟಿದ್ದಾಗಿ ತಿಳಿಸಿದ್ದಾರೆ.
ತೆಲುಗು ನಿರೂಪಕಿ ಸುಮಾ ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ಧ್ರುವ್, ಅನುಪಮಾ ಸಂದರ್ಶನ ನಡೆಸಿದ್ದರು. ಈ ವೇಳೆ 'ಬೈಸಿನ್' ಸಿನಿಮಾ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಇಬ್ಬರ ಡಯೆಟ್, ಸಿನಿಮಾ, ವೈಯಕ್ತಿಕ ಜೀವನ ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. 'ಬೈಸಿನ್' ಸಿನಿಮಾ ಸೆಟ್ನಲ್ಲಿ ದಿನಚರಿ ಹೇಗಿರ್ತಿತ್ತು ಎಂದು ಧ್ರುವ್ ಹೇಳಿದ್ದಾರೆ. ಸೈಕಲ್ನಲ್ಲಿ ಸುತ್ತಾಡುತ್ತಿದ್ದೆ, ಸೆಟ್ನಲ್ಲಿ ಮೇಕೆಗಳ ಜೊತೆ ಆಟ ಆಡುತ್ತಿದ್ದೆ ಎಂದಿದ್ದಾರೆ. ಕೂಡಲೇ ಅನುಪಮಾ "ಆಟ ಆಡಿದ ಅದೇ ಮೇಕೆ ತಿನ್ನುತ್ತಿದ್ರು" ಎಂದು ತಮಾಷೆ ಮಾಡಿದ್ದಾರೆ.
ಅನುಪಮಾ ತಮಾಷೆ ಮಾಡುತ್ತಿದ್ದಂತೆ ಧ್ರುವ್ ಆಕೆಯ ಕಾಲೆಳೆದಿದ್ದಾರೆ. ನಿಮಗೆ ಗೊತ್ತಾ ಅನುಪಮಾ ಬೆಳಗ್ಗೆ ಆಟ ಆಡಿದ್ದೆ ಅದೇ ಮೇಕೆಯನ್ನು ಬಳಿಕ ಬಿರಿಯಾನಿ ಮಾಡ್ಕೊಂಡು ತಿಂದಿದ್ದಾರೆ ಎಂದು ಎಂದಿದ್ದಾರೆ. ಆಗ 'ಕಾರ್ತಿಕೇಯ'-2 ಸೆಟ್ನಲ್ಲಿ ನಡೆದ ಘಟನೆಯನ್ನು ಅನುಪಮಾ ಬಿಚ್ಚಿಟ್ಟಿದ್ದಾರೆ. "ಸೆಟ್ನಲ್ಲಿ ಬೆಳಗ್ಗೆ ಕೂತಿದ್ದಾಗ ಒಂದು ಮೇಕೆ ಮರಿ ಬಂತು. ಕ್ಯೂಟ್ ಆಗಿದೆ ಅಂತ ನಾನು ಅದರ ಜೊತೆ ಆಟ ಆಡಿದ್ದೆ. ಮಧ್ಯಾಹ್ನ ಅದನ್ನೇ ಬಿರಿಯಾನಿ ಮಾಡಿ ತಟ್ಟೆಗೆ ಹಾಕಿದ್ರು.. ಎರಡು ತುತ್ತು ಬಾಯಿಗೆ ಇಟ್ಟಮೇಲೆ ನನ್ನ ಅಸಿಸ್ಟೆಂಟ್ ಹೇಳ್ದ. ಮೇಡಂ, ಬೆಳಗ್ಗೆ ನೀವು ಆಡ್ತಿದ್ರಲ್ಲ, ಅದೇ ಮೇಕೆ ಕಟ್ ಮಾಡಿ ಮಾಡಿರೋ ಬಿರಿಯಾನಿ ಅಂತ. ಸಡನ್ ಆಗಿ ಆಗಿ ವಾಂತಿ ಮಾಡಿಬಿಟ್ಟೆ. ಬಹಳ ಬೇಜಾರ್ ಆಯ್ತು.. ಅಯ್ಯೋ ಅದೇ ಮೇಕೆ ಜೊತೆ ಬೆಳಗ್ಗೆ ಆಡ್ತಿದ್ದೆ ಅಲ್ಲ, ಅಂತ ಮನಸ್ಸಿಗೆ ಬಹಳ ನೋವಾಯಿತು. ಅವತ್ತಿಂದ ನಾನ್ ವೆಜ್ ತಿನ್ನುವುದು ಬಿಟ್ಟೆ" ಎಂದಿದ್ದಾರೆ.
ಕೇರಳ ಮೂಲದ ನಟಿ ಅನುಪಮಾ ಪರಮೇಶ್ವರನ್ ದಕ್ಷಿಣದ 4 ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೋಡಿಯಾಗಿ ಮಿಂಚಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಧ್ರುವ್ ಹಾಗೂ ಅನುಪಮಾ ಡೇಟಿಂಗ್ ವದಂತಿ ಭಾರೀ ಸದ್ದು ಮಾಡ್ತಿದೆ.


Click it and Unblock the Notifications











