AR Rahman: ದುಡ್ಡು ತಗೊಂಡು ಮೋಸ? ಇದು ದೊಡ್ಡ ಸ್ಕ್ಯಾಮ್: ರಹಮಾನ್ ಕ್ಷಮೆ ಕೇಳಬೇಕು ಎಂದು ಫ್ಯಾನ್ಸ್ ಆಗ್ರಹ
ತಮ್ಮ ಸಂಗೀತದಿಂದ ಸಿನಿರಸಿಕರನ್ನು ಕುಣಿಸಿದ, ಮೈಮರೆಸಿದ ಮಾಂತ್ರಿಕ ಎ. ಆರ್ ರಹಮಾನ್. ಇತ್ತೀಚಿನ ವರ್ಷಗಳಲ್ಲಿ ಆ ಮ್ಯಾಜಿಕ್ ನಡೀತಿಲ್ಲ. ಆದರೆ ಒಂದ್ಕಾಲದಲ್ಲಿ ಸಂಗೀತಲೋಕದಲ್ಲಿ ರಹಮಾನ್ ಮಾಡಿದ ಜಾದೂ ಅಂತಿಂಥದ್ದಲ್ಲ. ಎಷ್ಟೋ ಸಿನಿಮಾಗಳನ್ನು ತಮ್ಮ ಸಂಗೀತದಿಂದಲೇ ಅವರು ಗೆಲ್ಲಿಸಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಚೆನ್ನೈನಲ್ಲಿ ನಡೆದ ರಹಮಾನ್ ಕಾನ್ಸರ್ಟ್ ಅಭಿಮಾನಿಗಳಿಗೆ ಬೇಸರ ತಂದಿದೆ.
'ಮುರುಕ್ಕಂ ನೆಂಜಮ್' ಹೆಸರಿನಲ್ಲಿ ನಿನ್ನೆ(ಸೆಪ್ಟೆಂಬರ್ 10) ಚೆನ್ನೈನಲ್ಲಿ ರಹಮಾನ್ ಕಾನ್ಸರ್ಟ್ ನಡೀತು. ರಹಮಾನ್ ಸಂಗೀತ ರಸಸಂಜೆ ಕಾರ್ಯಕ್ರಮ ಅಂದರೆ ಸಾವಿರಾರು ಜನ ಭಾಗಿ ಆಗುತ್ತಾರೆ. ಇನ್ನು ಚೆನ್ನೈ ಮಹಾನಗರಿಯಲ್ಲಿ ನಡೆದರೆ ಎಷ್ಟರಮಟ್ಟಿಗೆ ಅಭಿಮಾನಿಗಳು ಜಮಾಯಿಸುತ್ತಾರೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಪ್ರಸಿದ್ಧ ಎಸಿಟಿಸಿ ಈವೆಂಟ್ ಆಯೋಜಕ ಸಂಸ್ಥೆ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಅದ್ಧೂರಿ ಪ್ರಚಾರದಿಂದಾಗಿ ಟಿಕೆಟ್ಗಳು ಭರ್ಜರಿಯಾಗಿ ಟಿಕೆಟ್ ಮಾರಾಟವಾಗಿತ್ತು.

ಭಾನುವಾರ ಪಾಕ್-ಭಾರತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಇದ್ದರೂ ಲೆಕ್ಕಿಸದೇ ಸಾವಿರಾರು ರೂಪಾಯಿ ಹಣ ಕೊಟ್ಟು ಟಿಕೆಟ್ ಖರೀದಿಸಿ ಜನ ಬಂದಿದ್ದರು. ಆದರೆ ಟಿಕೆಟ್ ಖರೀದಿಸಿದ ಸಾಕಷ್ಟು ಜನಕ್ಕೆ ರಹಮಾನ್ ಕಾನ್ಸರ್ಟ್ನಲ್ಲಿ ಭಾಗಿ ಆಗಲು ಸಾಧ್ಯವಾಗಲಿಲ್ಲ. ಟಿಕೆಟ್ ಪಡೆದವರಿಗಿಂತ ಹೆಚ್ಚು ಜನ ವೇದಿಕೆ ಮುಂದೆ ಜಮಾಯಿಸಿದ್ದರಿಂದ ಈ ಗೊಂದಲ ನಿರ್ಮಾಣವಾಯಿತು. ಕೂರಲು ಸೀಟ್ ಸಿಗದೇ ಕೊನೆ ಪಕ್ಷ ವೇದಿಕೆ ಮುಂಭಾಗಕ್ಕೂ ಹೋಗಲು ಸಾಧ್ಯವಾಗದೇ ತಳ್ಳಾಟ ನೂಕಾಟ ನಡೆಯಿತು. ಮಹಿಳೆಯರು, ಮಕ್ಕಳು, ವಯಸ್ಸಾದವರು ಇದರಿಂದ ಸಮಸ್ಯೆ ಎದುರಿಸುವಂತಾಯಿತು.
ನೂಕು ನುಗ್ಗಲಿನಲ್ಲಿ ಕೆಲ ಮಹಿಳೆಯರು ಕಿರುಕುಳ ಅನುಭವಿಸುವಂತಾಯಿತು. ಎ. ಆರ್ ರಹಮಾನ್ ಕಾನ್ಸರ್ಟ್ ನೋಡಿ ಎಂಜಾಯ್ ಮಾಡಲು ಬಂದ ಅಭಿಮಾನಿಗಳಿಗೆ ನಿರಾಸೆ ಜೊತೆಗೆ ಬೇಸರವಾಯಿತು. ಕೆಲವರು ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೇಸರದಿಂದ ಹೊರ ನಡೆದರು. ಸರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಟಿಕೆಟ್ ಇದ್ದವರನ್ನು ಮಾತ್ರ ಒಳಗೆ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ದೊಡ್ಡ ಸ್ಕ್ಯಾಮ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ.
500 ರೂಪಾಯಿಯಿಂದ ಶುರುವಾಗಿ 50 ಸಾವಿರ ರೂಪಾಯಿಯವರೆಗೆ ಪಾಸ್ ದರ ನಿಗದಿಯಾಗಿತ್ತು. 500 ರೂಪಾಯಿಗೆ ಸ್ಯಾಂಡಿಂಗ್ ಜೋನ್(ಜನರಲ್ ಪಾಸ್), 1000 ರೂಪಾಯಿಗೆ ಸೀಟಿಂಗ್ ಜೋನ್(ಸಿಲ್ವರ್ ಪಾಸ್) 2000 ರೂಪಾಯಿಗೆ ವೇದಿಕೆಗೆ ಮತ್ತಷ್ಟು ಹತ್ತಿರದ ಸೀಟ್(ಗೋಲ್ಡ್ ಪಾಸ್), 5 ಸಾವಿರಕ್ಕೆ ಡೈಮಂಡ್ ಪಾಸ್, 10 ಸಾವಿರಕ್ಕೆ ಪ್ಲಾಟಿನಂ ಪಾಸ್, 25 ಸಾವಿರಕ್ಕೆ ವಿಐಪಿ ಪಾಸ್, 50 ಸಾವಿರಕ್ಕೆ ಪ್ರೀಮಿಯಮ್ ಲಾಂಜ್ ಪಾಸ್ ಮಾರಾಟ ಮಾಡಲಾಗಿತ್ತು. ಆದರೆ 10 ಕೊಟ್ಟು ಪಾಸ್ ಖರೀದಿಸಿದ್ದವರು ಕೂಡ ಕಾರ್ಯಕ್ರಮ ವೀಕ್ಷಣೆ ಸಾಧ್ಯವಾಗದೇ ಅಸಮಾಧಾನ ಹೊರ ಹಾಕಿದ್ದರು.
100, 200 ಕಿ. ಮೀ ದೂರದ ಊರುಗಳಿಂದ ರಹಮಾನ್ ಕಾನ್ಸರ್ಟ್ಗಾಗಿ ಅಭಿಮಾನಿಗಳು ಚೆನ್ನೈಗೆ ಬಂದಿದ್ದರು. ಒಮ್ಮೆಲೆ ದೊಡ್ಡಮಟ್ಟದಲ್ಲಿ ಜನ ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರ್ಯಕ್ರಮ ನಡೆದ ಅಡ್ಯಾರಂ ಪ್ಯಾಲೇಸ್ ಗ್ರೌಂಡ್ ಸುತ್ತಲೂ ಟ್ರಾಫಿಕ್ ಜಾಮ್ನಿಂದ ಸಮಸ್ಯೆ ಎದುರಾಗಿತ್ತು. ಎಲ್ಲವನ್ನು ದಾಟಿ ಒಳಗೆ ಹೋಗಲು ಪ್ರಯತ್ನಿಸಿದವರಿಗೆ ಜಾಗ ಇಲ್ಲ ಎಂದು ಹೊರಗೆ ಕಳುಹಿಸಲಾಯಿತು. ಪಾಸ್ ಇದ್ದರೂ ಒಳಗೆ ಬಿಡದ ಕಾರಣಕ್ಕೆ ಅಭಿಮಾನಿಗಳು ಬೇಸರ ಹೊರ ಹಾಕಿದರು.
ಕೊನೆ ಪಕ್ಷ ಒಳಗೆ ಕಾನ್ಸರ್ಟ್ ಅಟೆಂಡ್ ಮಾಡಿದವರು ಕೂಡ ಸರಿಯಾಗಿ ಶೋ ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲ. ಸೌಂಡ್ ಸಿಸ್ಟಂ ಸರಿ ಇರಲಿಲ್ಲ.. ಹಿಂದೆ ಕುಳಿತವರಿಗೆ ಸರಿಯಾಗಿ ಹಾಡುಗಳೇ ಕೇಳಿಸುತ್ತಿರಲಿಲ್ಲ. ಕೊನೆಗೆ ಪರಿಸ್ಥಿತಿ ಯಾವ ಹಂತಕ್ಕೆ ಹೋಯಿತು ಅಂದರೆ ಮಧ್ಯದಲ್ಲೇ ಕಾನ್ಸರ್ಟ್ ನಿಲ್ಲಿಸಬೇಕಾಯಿತು.
ಸದ್ಯ ಇದೇ ವಿಷಯ ತಮಿಳುನಾಡಿನಲ್ಲಿ ಟ್ರೆಂಡಿಂಗ್ ಆಗಿದೆ. ನೂರಾರು ರೆಹಮಾನ್ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಕಾನ್ಸರ್ಟ್ ನಡೆದಿದ್ದರೂ ಈ ರೀತಿ ನಡೆದಿರೋದು ಇದೇ ಮೊದಲು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ Scam2023 ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದೆ. 50 ಸಾವಿರ ಜನರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಎವಿಟಿಸಿ ಸಂಘಟಕರು ಸಂಪೂರ್ಣ ವಿಫಲರಾಗಿದ್ದಾರೆ.
ಸಾಮರ್ಥ್ಯ ಮೀರಿ ಪಾಸ್ ಮಾರಾಟ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.ಇನ್ನು ಆಯೋಜರು, ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಎಸಿಟಿಸಿ ಈವೆಂಟ್ ಆಯೋಜಕ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದೆ. ಎ. ಆರ್ ರಹಮಾನ್ ತಂಡ ಕೂಡ ಪ್ರತಿಕ್ರಿಯಿಸಿದ್ದು ಟಿಕೆಟ್ ಇದ್ದು ಶೋನಲ್ಲಿ ಭಾಗವಹಿಸಲು ಸಾಧ್ಯವಾಗದವರು ಟಿಕೆಟ್ ಜೊತೆ ಸಂಪರ್ಕಿಸಿ, ನಮ್ಮ ತಂಡ ನಿಮಗೆ ಪ್ರತಿಕ್ರಿಯಿಸುತ್ತದೆ ಎಂದು ಪೋಸ್ಟ್ ಮಾಡಿದೆ.


Click it and Unblock the Notifications











