ನೋ ಕಾಮೆಂಟ್ಸ್, ಪ್ರಕಾಶ್ ರಾಜ್ ಟಾಪಿಕ್ ಮಾತನಾಡುವುದೇ ಬೇಡ ಬಿಟ್ಹಾಕಿ; ನಟ ಅರ್ಜುನ್ ಸರ್ಜಾ
ಬಹುಭಾಷಾ ನಟ ಪ್ರಕಾಶ್ ರಾಜ್ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡವರು. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿ ಸೋತಿದ್ದರು. ಬಳಿಕ ಯಾವುದೇ ಚುನಾವಣೆಗೆ ನಿಲ್ಲಿಲ್ಲ. ಆದರೆ ಕೆಲ ಪಕ್ಷಗಳನ್ನು ಬೆಂಬಲಿಸಿ ಪ್ರಚಾರ ಮಾಡಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಬೆಂಬಲಸಿದ್ದರು. ಸದ್ಯ ಪ್ರಕಾಶ್ ರಾಜ್ ಬಗ್ಗೆ ಅರ್ಜುನ್ ಸರ್ಜಾ ಹೇಳಿಕೆ ವೈರಲ್ ಆಗ್ತಿದೆ.
ತಮಿಳು ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಬ್ಯುಸಿಯಾಗಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕನಾಗಿಯೂ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದಾರೆ. ಮಗಳಿಗಾಗಿ 'ಸೀತಾಪಯಣ' ಎಂಬ ಚಿತ್ರವನ್ನು ಇತ್ತೀಚೆಗೆ ನಿರ್ಮಿಸಿದ್ದರು. ತಾವೇ ಆಕ್ಷನ್ ಕಟ್ ಹೇಳಿ ಪ್ರಮುಖ ಪಾತ್ರದಲ್ಲಿ ಕೂಡ ನಟಿಸಿದ್ದರು. ಸದ್ಯ 'ಬ್ಲಾಸ್ಟ್' ಎಂಬ ಸಿನಿಮಾ ಮೂಲಕ ಆಕ್ಷನ್ ಕಿಂಗ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

'ಬ್ಲಾಸ್ಟ್' ಸಿನಿಮಾ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಅಭಿರಾಮಿ, ಪ್ರೀತಿ ಮುಕುಂದನ್ ಕೂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸುಭಾಷ್ ರಾಜ್ ನಿರ್ದೇಶನದ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ Behindwoods ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. ಈ ವೇಳೆ ತಮಿಳುನಾಡು ರಾಜಕೀಯದ ಬಗ್ಗೆಯೂ ಚರ್ಚೆ ನಡೆದಿದೆ.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ರಿ.. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆಗೂ ಆತ್ಮೀಯ ಒಡನಾಟವಿದೆ. ನಿಮಗೆ ರಾಜಕೀಯ ಅಭಿಲಾಷೆ ಇದ್ಯಾ? ಎನ್ನುವ ಪ್ರಶ್ನೆಗೆ ಅರ್ಜುನ್ ಸರ್ಜಾ ಉತ್ತರಿಸಿದ್ದಾರೆ. ನನಗೆ ರಾಜಕೀಯದ ಜ್ಞಾನ ಕಮ್ಮಿ. ಗೊತ್ತಿದ್ದರೆ ರಾಜಕೀಯರಂಗಕ್ಕೆ ಬಂದು ಏನಾದರೂ ಮಾಡಬಹುದು. ಗೊತ್ತಿಲ್ಲದೇ ಬಂದು ಏನು ಮಾಡೋಣ. ನಿಷ್ಪ್ರಯೋಜಕರಾಗುವುದು ಬೇಡ. ಒಳ್ಳೆಯದು ಮಾಡುವ ಆಸೆಯಿದೆ. ರಾಜಕೀಯಕ್ಕೆ ಬರದೇ ಅದನ್ನು ಮಾಡಬಹುದು ಎಂದಿದ್ದಾರೆ.
ಪ್ರಕಾಶ್ ರಾಜ್ ರೀತಿಯ ವ್ಯಕ್ತಿಗಳು ಬಹಳ ಬುದ್ಧಿವಂತರು. ಸಕ್ರಿಯ ರಾಜಕಾರಣದಲ್ಲಿ ಗುರ್ತಿಸಿಕೊಂಡವರು. ಅವರ ರೀತಿ ನೀವು ಕೂಡ ಎಂದು ನಿರೂಪಕ ಹೇಳುತ್ತಿದ್ದಂತೆ "ನೋ ಕಾಮೆಂಟ್ಸ್.. ಪ್ರಕಾಶ್ ರಾಜ್ ಬಗ್ಗೆ ಮಾತನಾಡುವುದೇ ಬೇಡ" ಎಂದು ಅರ್ಜುನ್ ಸರ್ಜಾ ನಕ್ಕು ಸುಮ್ಮನಾಗಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಗೆದ್ದು ಅಧಿಕಾರಕ್ಕೇರಿರುವ ಬಗ್ಗೆ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. "ಸಮಾಜಕ್ಕೆ ಒಳ್ಳೆದು ಮಾಡಬೇಕು ಎಂಬ ತುಡಿತ ಇರಬೇಕು. ವಿಜಯ್ಗೆ ಆ ಮನಸ್ಸಿದೆ. ಖಂಡಿತ ಒಳ್ಳೆ ಸರ್ಕಾರ ನಡೆಸುತ್ತಾರೆ. ಜನರಿಗೆ ನೆರವಾಗುತ್ತಾರೆ. ನಾನು ಅಣ್ಣಾಮಲೈ ಸರ್ ಫ್ಯಾನ್. ಯಾವುದೇ ವಿಚಾರದ ಬಗ್ಗೆ ಬೇಕಾದರೂ ಅವ್ರು ಮಾತನಾಡ್ತಾರೆ. ಅಂತಹವರನ್ನು ನೋಡಿದಾಗ ಹೆಚ್ಚು ಕಲಿಯಬೇಕು ಎನಿಸುತ್ತೆ" ಎಂದಿದ್ದಾರೆ.
ಅರ್ಜುನ್ ಸರ್ಜಾ ಹಾಗೂ ಪ್ರಕಾಶ್ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ 'ಸೀತಾಪಯಣ' ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಪ್ರಕಾಶ್ ರಾಜ್ ಅವರಿಗೆ ಅರ್ಜುನ್ ಸರ್ಜಾ ಅವಕಾಶ ಕೊಟ್ಟಿದ್ದರು. ಆದರೂ ಸಿದ್ಧಾಂತಗಳ ವಿಚಾರದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯಗಳಿವೆ. ಅದೇ ಕಾರಣಕ್ಕೆ ಅವರ ಬಗ್ಗೆ ಮಾತನಾಡಲು ಅರ್ಜುನ್ ಸರ್ಜಾ ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರಕಾಶ್ ರಾಜ್ ಬಹಳ ಆಕ್ಟೀವ್ ಆಗಿದ್ದಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಕೇಂದ್ರ ಬಿಜೆಪಿ ಸರ್ಕಾರದ ನಡೆಯ ಬಗ್ಗೆ ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ಟ್ರೋಲ್ ಕೂಡ ಎದುರಿಸುವಂತಾಗಿದೆ. ಆದರೂ Just Asking ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡುತ್ತಲೇ ಇರುತ್ತಾರೆ.


Click it and Unblock the Notifications