ಇಂಡಸ್ಟ್ರಿ ಮೇಲಿನ ಕೋಪಕ್ಕೆ ಆ ಸಿನಿಮಾ ಬೇಡ ಅಂದ್ಕೊಂಡಿದ್ದೆ, ಆದ್ರೆ ಬ್ಲಾಕ್ಬಸ್ಟರ್ ಹಿಟ್ ಆಯ್ತು- ಅರ್ಜುನ್ ಸರ್ಜಾ
ಯಾವ ಸಿನಿಮಾ ಹಿಟ್ ಆಗುತ್ತದೆ ಎಂದು ಹೇಳುವುದು ಕಷ್ಟ. ಯಾರ ಮಾಡಬೇಕಿದ್ದ ಕಥೆ ಮತ್ತೊಬ್ಬರ ಪಾಲಾಗಿ ಸಿನಿಮಾ ಹಿಟ್ ಆಗಿರುವ ಉದಾಹರಣೆಗಳಿವೆ. ನಟ ಅರ್ಜುನ್ ಸರ್ಜಾ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ಬ್ಲಾಕ್ಬಸ್ಟರ್ ಹಿಟ್ ಆಗಿರುವ ಸಿನಿಮಾಗಳು ಇವೆ.
ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿರುವ 'ಸೀತಾ ಪಯಣ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಮಗಳು ಐಶ್ವರ್ಯ ಸರ್ಜಾ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್ ಹೀರೊ ಆಗಿ ಮಿಂಚಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಸರ್ಜಾ ಅಂಡ್ ಟೀಂ ಬ್ಯುಸಿಯಾಗಿದೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಅರ್ಜುನ್ ಸರ್ಜಾ ಮೆಲುಕು ಹಾಕಿದ್ದಾರೆ.

ಶಂಕರ್ ನಿರ್ದೇಶನದಲ್ಲಿ ಅರ್ಜುನ್ ಸರ್ಜಾ ನಟಿಸಿದ್ದ 'ಜಂಟಲ್ಮನ್' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಬ್ಲಾಕ್ಬಸ್ಟರ್ ಹಿಟ್ ಆಗಿ ದಾಖಲೆ ಬರೆದಿತ್ತು. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಮುಂದೆ ಹಿಂದಿಗೂ ಸಿನಿಮಾ ರೀಮೆಕ್ ಆಗಿತ್ತು. ಆದರೆ ಕಥೆ ಹೇಳುವ ಮುನ್ನ ಈ ಚಿತ್ರದಲ್ಲಿ ನಟಿಸೋದು ಬೇಡ ಎಂದು ಅರ್ಜುನ್ ಸರ್ಜಾ ಭಾವಿಸಿದ್ದರಂತೆ. ಚಿತ್ರರಂಗದ ಮೇಲಿನ ಕೋಪದಿಂದ ಆ ನಿರ್ಧಾರಕ್ಕೆ ಬಂದಿದ್ದೆ ಎಂದು ಹೇಳಿದ್ದಾರೆ.
1993ರಲ್ಲಿ 'ಜಂಟಲ್ಮನ್' ಸಿನಿಮಾ ತೆರೆಗೆ ಬಂದಿತ್ತು. ಭ್ರಷ್ಟ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ನಾಯಕನ ಕಥೆ ಚಿತ್ರದಲ್ಲಿತ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ನಾಯಕ ಶ್ರೀಮಂತರಿಂದ ದರೋಡೆ ಮಾಡಿ ಬಡವರ ಶಿಕ್ಷಣಕ್ಕೆ ಸಹಾಯಮಾಡುವ ಕಥೆಯಿತ್ತು. idlebrain.com ಯೂಟ್ಯೂಬ್ ಸಂದರ್ಶನದಲ್ಲಿ ಈ ಸಿನಿಮಾ ಬಗ್ಗೆ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. ಶರತ್ಕುಮಾರ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಕಥೆ ನನ್ನ ಬಳಿ ಬಂದಿತ್ತು ಎಂದು ನೆನಪಿಸಿಕೊಂಡಿದ್ದಾರೆ.

"ಶರತ್ಕುಮಾರ್ 'ಜಂಟಲ್ಮನ್' ಚಿತ್ರದಲ್ಲಿ ನಟಿಸಬೇಕಿತ್ತು. ಫೋಟೊಶೂಟ್ ಕೂಡ ಮಾಡಿದ್ದರಂತೆ. ಬಳಿಕ ನಿರ್ದೇಶಕರು ನನ್ನ ಬಳಿ ಬಂದಿದ್ದರು. ಆ ಸಮಯದಲ್ಲಿ ನಾನು ಚಿತ್ರರಂಗದ ಮೇಲೆ ಕೋಪಗೊಂಡಿದ್ದೆ. ಬೇರೆ ಬ್ಯಾನರ್ನಲ್ಲಿ ಸಿನಿಮಾ ಮಾಡಬಾರದು, ನನ್ನ ಕಷ್ಟದಲ್ಲಿ ಯಾರು ಸಹಾಯಕ್ಕೆ ಬರಲಿಲ್ಲ. ನಾನೇ ಮನೆ ಮಾರಿ 'ಸೇವಗನ್' ಸಿನಿಮಾ ಮಾಡಿದ್ದೆ. ಅಂತಹ ಸಮಯದಲ್ಲಿ 'ಜಂಟಲ್ಮನ್' ಕಥೆ ನನ್ನ ಬಳಿ ಬಂದಿತ್ತು" ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
ಪದೇ ಪದೆ ಬಂದು ಕೇಳುತ್ತಿದ್ದರು. ಕೊನೆ ಪಕ್ಷ ಕಥೆ ಕೇಳಿ ಇಷ್ಟವಾಗದಿದ್ದರೆ ಬೇಡ ಎಂದು ಬಿಡಿ ಎಂದು ಕೆಲವರು ಸಲಹೆ ಕೊಟ್ಟರು. ಇಷ್ಟೆಲ್ಲಾ ಕೇಳುವಾಗ ಬೇಡ ಎನ್ನುವುದು ತಪ್ಪಾಗುತ್ತದೆ. ಕಥೆ ಕೇಳೋಣ ಎಂದುಕೊಂಡೆ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. "ಕತೆ ಕೇಳಿ ಬೇಡ ಎಂದು ಹೇಳಿಬಿಡೋಣ ಎಂದುಕೊಂಡಿದ್ದೆ. ಆ ರೀತಿ ಕಥೆ ಕೇಳಿ ಮಾಡಿದ್ದು 'ಜಂಟಲ್ಮನ್'. ಆದರೆ ಕಥೆ ಕೇಳಿದ ಮೇಲೆ ಬೇಡ ಎನ್ನಲು ಮನಸ್ಸಾಗಲಿಲ್ಲ" ಎಂದು ವಿವರಿಸಿದ್ದಾರೆ.
'ಜಂಟಲ್ಮನ್' ಬಳಿಕ ನಿರ್ದೇಶಕ ಶಂಕರ್ ಕಾಂಬಿನೇಷನ್ನಲ್ಲಿ ಅರ್ಜುನ್ ಸರ್ಜಾ ನಟಿಸಿದ್ದ 'ಮುದಲ್ವನ್' ಸಿನಿಮಾ ಕೂಡ ಬಂದು ಗೆದ್ದಿತ್ತು. ಬಾಲಿವುಡ್ನಲ್ಲಿ ಈ ಸಿನಿಮಾ ರಿಮೇಕ್ ಆಗಿತ್ತು. ಭ್ರಷ್ಟ ವ್ಯವಸ್ಥೆಯ ವಿರುದ್ಧವೇ ಶಂಕರ್ ಮುಂದೆ 'ಇಂಡಿಯನ್', 'ಅನ್ನಿಯನ್', 'ಶಿವಾಜಿ' ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟರು. ಎಲ್ಲದ್ದಕ್ಕೂ 'ಜಂಟಲ್ಮನ್' ಸಕ್ಸಸ್ ಬಲ ತುಂಬಿದ್ದು ಸುಳ್ಳಲ್ಲ.
'ಸೀತಾ ಪಯಣ' ಚಿತ್ರದಲ್ಲಿ ಅರ್ಜುನ್ ಸರ್ಜಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಸಿನಿಮಾ ತೆಲುಗು, ತಮಿಳಿಗೂ ಡಬ್ ಆಗಿ ತೆರೆಗೆ ಬರ್ತಿದೆ.


Click it and Unblock the Notifications











