ನಟಿ ಮೀರಾ ಮಿಥುನ್ಗೆ ಸಿಕ್ತು ಜಾಮೀನು: ಆದರೂ ಬಿಡುಗಡೆ ಭಾಗ್ಯವಿಲ್ಲ
ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧನವಾಗಿರುವ ನಟಿ, ಬಿಗ್ ಬಾಸ್ ಖ್ಯಾತಿಯ ಮೀರಾ ಮಿಥುನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಈ ಕೇಸ್ನಲ್ಲಿ ನಟಿಗೆ ಜಾಮೀನು ಮಂಜೂರಾಗಿದೆ.
ಈವೆಂಟ್ ಮ್ಯಾನೇಜರ್ ಜೋ ಮೈಕೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಿದ ಹಿನ್ನೆಲೆ ಕಳೆದ ವರ್ಷ ಸ್ವಯಂ ಘೋಷಿತ ಸೂಪರ್ ಮಾಡೆಲ್ ಮೀರಾ ಮಿಥುನ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಗುರುವಾರ ನಟಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಷರತ್ತುಬದ್ಧ ಜಾಮೀನು ಮಂಜೂರು ನೀಡಿದೆ.
ಈವೆಂಟ್ ಮ್ಯಾನೇಜರ್ ಜೋ ಮೈಕೆಲ್ ಕೇಸ್ನಲ್ಲಿ ಜಾಮೀನು ನೀಡಿದರೂ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ನಟಿಗೆ ಸಿಕ್ಕಿಲ್ಲ. ಏಕಂದ್ರೆ ದಲಿತ ಸಮುದಾಯದ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಮೀರಾ ಮಿಥುನ್ಗೆ ಜಾಮೀನು ಸಿಕ್ಕಿಲ್ಲ. ನಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಮೀರಾ ಮಿಥುನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಕಳೆದ ವಾರ ಕೇರಳದ ಆಲಪ್ಪುಳದಲ್ಲಿ ನಟಿಯನ್ನು ಬಂಧಿಸಿದ್ದರು. ಸೋಮವಾರ (ಆಗಸ್ಟ್ 23) ಮದ್ರಾಸ್ ಹೈ ಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ಹೈ ಕೋರ್ಟ್ ನಟಿಯ ಮನವಿಯನ್ನು ತಿರಸ್ಕರಿಸಿ ಜಾಮೀನು ವಜಾಗೊಳಿಸಿತ್ತು.
ಮೀರಾ ಮಿಥುನ್ ಏನು ಹೇಳಿದ್ದರು?
"ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. "ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದಿದ್ದರು.
ಮೀರಾ ಮಿಥುನ್ ಈ ಹೇಳಿಕೆ ನೀಡಿದ ನಂತರ ವ್ಯಾಪಕ ಖಂಡನೆ ವ್ಯಕ್ತವಾಯಿತು. ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ನಟಿ ವಿರುದ್ಧ ದೂರು ದಾಖಲಿಸಿದರು. ಈ ದೂರಿನ ಹಿನ್ನೆಲೆ ಚೆನ್ನೈನ ಪೊಲೀಸರು ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಏಳು ನಿಬಂಧನೆಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದರು. ದೂರಿನ ಬಳಿಕ ತಲೆಮರೆಸಿಕೊಂಡ ಮೀರಾ ಮಿಥುನ್ ಕೇರಳದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೀರಾ ತಂಗಿದ್ದ ಹೋಟೆಲ್ಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಯಿತು. ಬಂಧಿಸಲು ಬಂದ ಪೊಲೀಸರ ವಿರುದ್ಧ ಮೀರಾ ಆರೋಪ ಮಾಡಿದರು. ಫೇಸ್ಬುಕ್ ವಿಡಿಯೋ ಮಾಡಿ, ''ಪೊಲೀಸರು ನನ್ನ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ, ತೊಂದರೆ ಕೊಡ್ತಿದ್ದಾರೆ, ನನಗೆ ರಕ್ಷಣೆ ಕೊಡಿ'' ಎಂದು ಹೈಡ್ರಾಮ ಮಾಡಿದರು.

ಆತ್ಮಹತ್ಯೆಗೆ ಯತ್ನಿಸಿದ್ದ ನಟಿ
ಮೀರಾ ಮಿಥುನ್ ಮಾತ್ರವಲ್ಲ ಮೀರಾ ಬಾಯ್ಫ್ರೆಂಡ್ ಸ್ಯಾಮ್ ಅಭಿಷೇಕ್ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಲಿತರ ಬಗ್ಗೆ ನಟಿ ನೀಡಿದ ಹೇಳಿಕೆಗೆ ಬಾಯ್ಫ್ರೆಂಡ್ ಕುಮ್ಮಕ್ಕಿದೆ ಎಂಬ ಅನುಮಾನದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಅದಕ್ಕೂ ಮುಂಚೆ ತನ್ನ ಬಾಯ್ಫ್ರೆಂಡ್ ಜೊತೆ ಮೀರಾ ಹಸಿಬಿಸಿಯಾಗಿ ಕಾಣಿಸಿಕೊಂಡು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಯೂಟ್ಯೂಬ್ ಹಾಗು ಫೇಸ್ಬುಕ್ ವಿಡಿಯೋದಲ್ಲಿ ಬಾಯ್ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ನಹತ್ಯೆಗು ಯತ್ನಿಸಿದ್ದರು.


Click it and Unblock the Notifications











