ಮೋದಿ ಬಳಿಕ ವಿಜಯ್ ದೇಶದ ಪ್ರಧಾನಿ ಆಗ್ತಾರೆ; ದಳಪತಿ ಆಪ್ತ ಜ್ಯೋತಿಷಿಯಿಂದಲೇ ಭವಿಷ್ಯ!
ಸ್ವಂತ ಪಕ್ಷ ಕಟ್ಟಿ ನಟ ವಿಜಯ್ ಎರಡೇ ವರ್ಷದಲ್ಲಿ ಗೆದ್ದು ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾರೆ. ದ್ರಾವಿಡ ಪಕ್ಷಗಳನ್ನು ಮೂಲೆಗುಂಪು ಮಾಡಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. 144 ಶಾಸಕರ ಬೆಂಬಲದೊಂದಿಗೆ ಸದ್ಯಕ್ಕೆ ವಿಜಯ್ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುವಂತಾಗಿದೆ. ವಿಜಯ್ ಮುಂದೆ ದೇಶದ ಪ್ರಧಾನಿ ಆಗುತ್ತಾರೆ ಎಂದು ಆಪ್ತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ಕಳೆದೆರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ವಿಜಯ್ ಬಗ್ಗೆ ಅವರು ಹೇಳಿರುವ ಭವಿಷ್ಯ ಭಾರೀ ಚರ್ಚೆ ಹುಟ್ಟಾಕ್ಕಿದೆ. ರಿಕ್ಕಿ ರಾಧನ್ ಅವರನ್ನು ವಿಜಯ್ ತಮ್ಮ ಸರ್ಕಾರದ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ(OSD) ನೇಮಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ನೇಮಕಾತಿಯನ್ನು ರದ್ದು ಪಡಿಸಲಾಗಿದೆ. ಒಎಸ್ಡಿಯಾಗಿ ರಿಕ್ಕಿ ರಾಧನ್ ನೇಮಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೊಳಗಾಗಿತ್ತು. ವಿರೋಧ ಪಕ್ಷಗಳು, ಟಿವಿಕೆ ಮಿತ್ರಪಕ್ಷಗಳು ಸಹ ಖಂಡಿಸಿದ್ದವು.

ಬಿಜೆಪಿ ನಾಯಕ ಎಲ್. ಕೆ ಅಡ್ವಾನಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರಿಗೂ ರಿಕ್ಕಿ ರಾಧನ್ ಆಪ್ತರಾಗಿದ್ದರು. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಸುನಾಮಿ ಎಬ್ಬಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಹಳ ಹಿಂದಿಯೇ ಅವರು ಭವಿಷ್ಯ ನುಡಿದಿದ್ದರು. ಅವರು ನುಡಿದಂತೆಯೇ ಆಗಿದೆ. ಹಾಗಾಗಿ ರಿಕ್ಕಿ ರಾಧನ್ ಮೇಲೆ ವಿಜಯ್ಗೆ ಬಹಳ ನಂಬಿಕೆ ಬಂದಿದೆ.
ಸದ್ಯ ತಂತಿ ಟಿವಿ ಸುದ್ದಿ ವಾಹಿನಿ ಸಂದರ್ಶನಲ್ಲಿ ರಿಕ್ಕಿ ರಾಧನ್ ಮಾತನಾಡಿದ್ದಾರೆ. ವಿಜಯ್ ಜಾತಕದ ಪ್ರಕಾರ ಮುಂದೆ ಅವರಿಗೆ ದೇಶದ ಪ್ರಧಾನಿ ಆಗುವ ಯೋಗ ಇದೆ ಎಂದಿದ್ದಾರೆ. ಅವರ ಹೇಳಿಕೆ ಸಖತ್ ವೈರಲ್ ಆಗ್ತಿದೆ. "ತಮಿಳುನಾಡು ಮುಖ್ಯಮಂತ್ರಿ ವಿಜಯ್ ದೇಶದ ಪ್ರಧಾನಿ ಆಗುವ ಅವಕಾಶವಿದೆ. ಪ್ರಧಾನಿ ಮೋದಿ ಜೆರಾಕ್ಸ್ ಕಾಪಿ ರೀತಿ ವಿಜಯ್ ಜಾತಕ ಇದೆ. ಅವರ ಜಾತಕದಲ್ಲಿ ಇರುವಂತೆ ಇವರ ಜಾತಕ ಗಮನಿಸಬಹುದು. ಒಂದು ಹಂತದಲ್ಲಿ ಮೋದಿಗಿಂತಲೂ ಒಳ್ಳೆ ಜಾತಕ ವಿಜಯ್ ಅವರದ್ದು ಎನ್ನಬಹುದು" ಎಂದಿದ್ದಾರೆ.
ವಿಜಯ್ಗಿಂತ ಪ್ರಧಾನಿ ಮೋದಿ 25 ವರ್ಷ ಹಿರಿಯರು. ಅವರ ಬಳಿಕ ಅಂತಹ ಅದೃಷ್ಠವಂತ ದೇಶದಲ್ಲಿ ಸಿಗುವುದು ಕಷ್ಟ. ಇದ್ದರೆ ಅದು ವಿಜಯ್ ಮಾತ್ರ. ಒಂದೊಂದು ಸೀಸನ್ಗೆ ಒಬ್ಬೊಬ್ಬರು ಭಾರತೀಯ ಕ್ರಿಕೆಟ್ ತಂಡದ ನಾಯಕರಾದಂತೆ ಮುಂದೆ ವಿಜಯ್ ಪ್ರಧಾನಿ ಆಗುವ ಸಾಧ್ಯತೆಯಿದೆ. ಪ್ರಧಾನಿ ಮಾತ್ರವಲ್ಲ ದೇಶದಲ್ಲಿ ವಿಜಯ್ ಮಹಾನ್ ನಾಯಕರಾಗುತ್ತಾರೆ. ಪ್ರಪಂಚ ವಿನಾಶ ಆಗುವವರೆಗೂ ತಮ್ಮ ಹೆಸರು ಇರುವಂತೆ ಸಾಧನೆ ಮಾಡುತ್ತಾರೆ ಎಂದು ರಿಕ್ಕಿ ರಾಧನ್ ಹೇಳಿದ್ದಾರೆ.
2017ರಲ್ಲೇ ನಾನು ರಜನಿಕಾಂತ್ ಹಾಗೂ ಅಜಿತ್ ಅವರನ್ನು ಭೇಟಿ ಮಾಡಿ ರಾಜಕೀಯಕ್ಕೆ ಬರುವಂತೆ ಮನವಿ ಮಾಡಿದ್ದೆ. ಅವರಿಬ್ಬರಿಗೂ ರಾಜಕೀಯರಂಗದಲ್ಲಿ ಒಳ್ಳೆ ಭವಿಷ್ಯ ಇತ್ತು. ಅಜಿತ್ ಸರ್ ಅವರಿಗೆ ಜಾತಕದಲ್ಲಿ ಇವತ್ತಿಗೂ ಅವಕಾಶ ಇದೆ. ಅವರು ಬಳಸಿಕೊಳ್ಳುತ್ತಿಲ್ಲ ಎಂದು ರಿಕ್ಕಿ ರಾಧನ್ ಹೇಳಿದ್ದಾರೆ. ವಿಜಯ್ ಸಿಎಂ ಆಗುತ್ತಾರೆ ಎಂದು ನಾನು ನಿನ್ನೆ ಮೊನ್ನೆ ಹೇಳಿಲ್ಲ. ಏಳೆಂಟು ವರ್ಷಗಳಿಂದ ಹೇಳುತ್ತಾ ಬರ್ತಿದ್ದೀನಿ ಎಂದಿದ್ದಾರೆ.
ವಿಜಯ್ ಅವರಿಗೆ ನನ್ನ ಮೇಲೆ ವಿಶೇಷ ಕಾಳಜಿ. ತಮ್ಮನ್ನು ಸರ್ಕಾರದ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿದ್ದ ವಿಷಯ ನನಗೂ ಗೊತ್ತಿರಲಿಲ್ಲ. ನನಗೆ ಹೇಳದೇ ಈ ಹುದ್ದೆ ಸೃಷ್ಟಿಸಿದ್ದರು. ಗೊತ್ತಾದಾಗ ಖುಷಿಯಾಗಿತು. ಬಳಿಕ ಹುದ್ದೆ ರದ್ದು ಮಾಡಿದ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ರಿಕ್ಕಿ ರಾಧನ್ ಹೇಳಿದ್ದಾರೆ. ವಿಜಯ್ ಅವರಿಗೆ ಜಾತಕ, ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲ. ಆದರೆ ನನ್ನ ಮಾತು ಕೇಳಿ ಅವರಿಗೆ ಇಷ್ಟವಾಗರಬಹುದು ಎಂದಿದ್ದಾರೆ.


Click it and Unblock the Notifications