ಏನ್ ಮನೆಹಾಳು 'ಭವಿಷ್ಯ' ಗುರು ? ನಯನತಾರಾ 'ಡಿವೋರ್ಸ್' ಬಗ್ಗೆ ಅವತ್ತೇ ಹೇಳಿದ್ದ ವೇಣು ಸ್ವಾಮಿ..!
ವೇಣು ಸ್ವಾಮಿ ಗೊತ್ತಲ್ಲವಾ..? ಪಕ್ಕದ ಮನೆ ಆಂಧ್ರದ ಸ್ಟಾರ್ ಜ್ಯೋತಿಷಿ. ಕಲಾವಿದರು ಇರಲಿ, ರಾಜಕಾರಣಿಗಳಿರಲಿ ಎಲ್ಲರ ಜಾತಕವನ್ನ ಕೈಯಲ್ಲಿ ಹಿಡಿದು ಕುಳಿತಿರುವ ವ್ಯಕ್ತಿ. ಸೆಲೆಬ್ರಿಟಿ ಹಾಗೂ ರಾಜಕಾರಣಿಗಳ ಬದುಕು ಹೀಗೀಗೇ ಸಾಗುತ್ತೆ ಅಂತ ಹೇಳುವ ವೇಣು ಸ್ವಾಮಿ ಇದೀಗ ಇನ್ನೊಮ್ಮೆ ಚರ್ಚೆಯ ವಸ್ತುವಾಗಿದ್ದಾರೆ. ಯಾಕೆಂದರೆ ಈ ಮಹಾನುಭಾವ ಹೇಳಿದ್ದ ಭವಿಷ್ಯವೊಂದು ನಿಜವಾಗುವ ಎಲ್ಲ ಲಕ್ಷಣ ಸದ್ಯಕ್ಕೆ ದಟ್ಟವಾಗಿ ಕಂಡು ಬರುತ್ತಿದೆ.
ಹೌದು, ನಯನತಾರಾ ಹಾಗೂ ವಿಘ್ನೇಶ್ ನಡುವಿನ ಅಂತರ ಹಾಗೂ ಸಮಾಚಾರ ಕಥೆ ನಿಮಗೆ ಈಗಾಗಲೇ ಗೊತ್ತಿರಬೇಕು. ಇವತ್ತು ಎಲ್ಲೆಡೆ ಇವರಿಬ್ಬರದ್ದೇ ಬ್ರೇಕಿಂಗ್ ನ್ಯೂಸ್ ಬಿತ್ತರವಾಗಿದೆ. ಕೇವಲ ಇಲ್ಲಿ ಅಷ್ಟೇ ಅಲ್ಲ ದೇಶದೆಲ್ಲೆಡೆ ಇವತ್ತು Nation Wants To Know ಎಂಬ ಹ್ಯಾಶ್ ಟ್ಯಾಗ್ ನಡಿ ಚರ್ಚಿತವಾದವರು ಇವರು ಇಬ್ಬರು.

ಇಂಟ್ರೆಸ್ಟಿಂಗ್ ಅಂದರೆ ಈ ಸ್ಟಾರ್ ಜೋಡಿಯ ಬಗ್ಗೆ ವರ್ಷಗಳ ಹಿಂದೆಯೇ ಈ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ನಯನತಾರಾ ಹಾಗೂ ವಿಘ್ನೇಶ್ ಮದುವೆಯಾದರೂ ಇಬ್ಬರ ಸಂಸಾರ ನೌಕೆ ಮುಳುಗುತ್ತೆ ಎಂದಿದ್ದರು. ನಯನತಾರಾ ಅವರ ಬಗ್ಗೆ ಕೆಲವೊಂದಷ್ಟು ವಿಚಾರವನ್ನೂ ಹೇಳಿದ್ದರು. ಕಾಕತಾಳೀಯನಾ ಗೊತ್ತಿಲ್ಲ. ನಯನತಾರ ವಿಚಾರದಲ್ಲಿ ವೇಣು ಸ್ವಾಮಿ ಈ ಹಿಂದೆ ಹೇಳಿದ್ದೆಲ್ಲವೂ ನಿಜವಾಗಿದೆ.
ಮದುವೆ ನಂತರ ವಿವಾದಕ್ಕೀಡಾಗ್ತಾರೆ ಎಂದಿದ್ದ ಜ್ಯೋತಿಷಿ
ವಿಘ್ನೇಶ್ ಜೊತೆ ಒಂದು ವೇಳೆ ನಯನತಾರಾ ಸಪ್ತಪದಿ ತುಳಿದಿದ್ದೇ ಆದಲ್ಲಿ, ನಯನತಾರಾ ಕಾಲಿಟ್ಟಲೆಲ್ಲ ವಿವಾದ ಸೃಷ್ಟಿಯಾಗುತ್ತೆ ಎಂದು ಹಿಂದೆ ಇದೇ ವೇಣು ಸ್ವಾಮಿ ಹೇಳಿದ್ದರು. ಅದ್ರಂತೆ ಮದುವೆ ನಂತರ ವಿವಾದವೂ ನಯನತಾರಾ ಅವರನ್ನ ಸುತ್ತುವರೆದುಕೊಂಡಿತ್ತು. ಅದು, ಚಪ್ಪಲಿ ಧರಿಸಿ ತಿರುಪತಿ ದೇವಸ್ಥಾನ ಪ್ರವೇಶಿಸಿದ್ದ ಘಟನೆ ಇರಬಹುದು, ಅನ್ನಪೂರ್ಣಿ ಚಿತ್ರದ ವಿವಾದ ಇರಬಹುದು, ನಯನತಾರಾ ಬದುಕು ಬಹುತೇಕ ವಿವಾದಗಳಿಂದನೇ ಸುದ್ದಿಯಾಯಿತು.

ನಯನತಾರಗೆ ಗುರು ಬಲ ಇಲ್ಲವೆಂದಿದ್ದ ವೇಣು ಸ್ವಾಮಿ..!
ಇದಕ್ಕೂ ಹಿಂದೆ ನಯನತಾರ ಮದುವೆ ಬಗ್ಗೆ ಮಾತನಾಡಿದ್ದ ವೇಣು ಸ್ವಾಮಿ, ನಯನತಾರಾಗೆ ಗುರು ಬಲ ಇಲ್ಲ ಎಂದಿದ್ದರು. ಮದುವೆ ಆಗಲು ಇದು ಉತ್ತಮ ಸಮಯ ಅಲ್ಲ, ಯಾಕೆಂದರೆ ಗುರು ಪ್ರಬಲವಾಗಿಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದರು. ನಯನತಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ಭವಿಷ್ಯವನ್ನು ಅವತ್ತು ವೇಣು ಸ್ವಾಮಿ ನುಡಿದಿದ್ದರು
ಸಮಂತಾ, ರಶ್ಮಿಕಾ ಮಂದಣ್ಣ ಬಗ್ಗೆ ಕೂಡ ಭವಿಷ್ಯ ನುಡಿದಿದ್ದ ಜ್ಯೋತಿಷಿ..!
ನಯನತಾರ ಮಾತ್ರ ಅಲ್ಲ ರಶ್ಮಿಕಾ, ಮಂದಣ್ಣ, ಅನುಷ್ಕಾ ಶೆಟ್ಟಿ ಮತ್ತು ಸಮಂತಾ ಮದುವೆ ಬಗ್ಗೆಯೂ ವೇಣು ಸ್ವಾಮಿ ಭವಿಷ್ಯ ಹೇಳಿದ್ದರು. ಇವರು ಯಾರಿಗೂ ಗುರು ಬಲ ಇಲ್ಲ ಎಂದಿದ್ದರು. ದಾಂಪತ್ಯ ಜೀವನದಲ್ಲಿ ಇವರಲ್ಲಿ ಯಾರು ಯಶಸ್ವಿಯಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ವಿಶೇಷ ಅಂದರೆ ಇದು ಕೂಡ ನಿಜಾ ಆಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸಮಂತಾ ದಾಂಪತ್ಯ ಮುರಿದು ಬಿದ್ದಿದೆ. ಅನುಷ್ಕಾ ಶೆಟ್ಟಿ ಮದುವೆಯಾಗದೇ ಇದ್ದರೂ ಅವರಿಗೆ ಇದ್ದ ಬೆಲೆ ಪಾತಾಳಕ್ಕೆ ಕುಸಿದಿದೆ. ಇನ್ನೂ ರಶ್ಮಿಕಾ ಮಂದಣ್ಣ ಕಥೆ ನಿಮಗೆ ಗೊತ್ತು.

ಇವೆಲ್ಲ ಕಾರಣಗಳಿಂದ ನಯನತಾರಾ ಅವರ ಅಭಿಮಾನಿಗಳಲ್ಲಿ ಇದೀಗ ಆತಂಕ ಶುರುವಾಗಿದೆ. ನಯನತಾರ ದಾಂಪತ್ಯ ವಿಚಾರದಲ್ಲಿ ವೇಣು ಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗುತ್ತಾ ಎಂಬ ದಿಗಿಲು ಕಾಡುತ್ತಿದೆ. ನಿಜಾ.. ಇದೆಲ್ಲವೂ ಕಪೋಲಕಲ್ಪಿತ ಸುದ್ದಿಗಳು ಎಂಬ ವಾದವನ್ನ ನಯನತಾರಾ ಹಾಗೂ ವಿಘ್ನೇಶ್ ಅಭಿಮಾನಿಗಳು ಈ ಕ್ಷಣದವರೆಗೆ ಮಾಡುತ್ತಿದ್ದಾರೆ. ಆದರೆ ನೆನಪಿರಲಿ ಬೆಂಕಿ ಇಲ್ಲದೇ ಹೊಗೆ ಆಡಲ್ಲ.


Click it and Unblock the Notifications











