ಆಸ್ಕರ್ ಟ್ರೋಫಿ ಮುಟ್ಟೋಕು ಬಿಡಲಿಲ್ಲ.. ನಂಬಿಸಿ ಕುತ್ತಿಗೆ ಕುಯ್ದರು.. ಕೋರ್ಟ್ ಮೆಟ್ಟಿಲೇರಿದ ಬೊಮ್ಮನ್-ಬೆಳ್ಳಿ
95ನೇ ಆಸ್ಕರ್ ವೇದಿಕೆಯಲ್ಲಿ ಭಾರತದಿಂದ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷಚಿತ್ರ ಪ್ರಶಸ್ತಿ ಗೆದ್ದಿತ್ತು. ಎಲಿಫೆಂಟ್ ವಿಸ್ಪರರ್ಸ್ ಚಿತ್ರದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಟ್ರೋಫಿ ಎತ್ತಿ ಹಿಡಿದಿದ್ದರು. ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ನಗದು ರೂಪದಲ್ಲಿ ಕೆಲವರು ಪ್ರೋತ್ಸಾಹ ನೀಡಿದ್ದರು.
'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡ ನಿಜವಾದ ಆನೆ ಪಾಲಕರಾದ ಬೊಮ್ಮನ್ ಮತ್ತು ಬೆಳ್ಳಿ ಕೂಡ ಎಲ್ಲರ ಗಮನ ಸೆಳೆದರು. ಪ್ರಧಾನಿ ಮೋದಿ ಸೇರಿದಂತೆ ಹಲವರು ದಂಪತಿಯನ್ನು ಅಭಿನಂದಿಸಿದ್ದರು. ಆದರೆ ಇದೀಗ 'ದಿ ಎಲಿಫೆಂಟ್ ವಿಸ್ಪರರ್ಸ್' ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಹಾಗೂ ಚಿತ್ರ ನಿರ್ಮಾಣ ಸಂಸ್ಥೆ ಸಿಖ್ಯಾ ಎಂಟರ್ಟೈನ್ಮೆಂಟ್ ಮೇಲೆ ಬೊಮ್ಮನ್ ದಂಪತಿ ಗಂಭೀರ ಆರೋಪ ಮಾಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ದಂಪತಿ ಸಾಕ್ಷ್ಯಚಿತ್ರ ತಂಡ ನಮಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕ್ಷ್ಯಚಿತ್ರ ಚಿತ್ರೀಕರಣದ ವೇಳೆ ಕಾರ್ತಿಕಿ ಗೊನ್ಸಾಲ್ವಿಸ್ ಜೊತೆ ದಂಪತಿ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಹಾಗಾಗಿ ಚಿತ್ರೀಕರಣದ ವೇಳೆ ಅವರಿಬ್ಬರ ಮದುವೆ ಸನ್ನಿವೇಶವನ್ನು ಮರುಸೃಷ್ಟಿಸಲಾಗಿತ್ತು. ಅದಕ್ಕಾಗಿ 1 ಲಕ್ಷ ರೂ.ಯನ್ನು ದಂಪತಿ ಖರ್ಚು ಮಾಡಿದ್ದರಂತೆ. ಆದಷ್ಟು ಬೇಗ ಹಣ ವಾಪಸ್ ಕೊಡುತ್ತೇವೆ ಎಂದು ನಿರ್ದೇಶಕಿ ಮಾತು ಕೊಟ್ಟಿದ್ದರಂತೆ. ಆದರೆ ಈವರೆಗೆ ನಮಗೆ ಹಣ ಹಿಂತಿರುಗಿಸಿಲ್ಲ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಕಾರ್ತಿಕಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಫೋನ್ ಸಹ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ.
'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ಆಸ್ಕರ್ ಗೆದ್ದ ಬಳಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವು ಆಸ್ಕರ್ ಟ್ರೋಫಿ ಮುಟ್ಟಲು ಅವಕಾಶ ಕೊಡಲಿಲ್ಲ. ಮುಂಬೈನಿಂದ ನಮ್ಮೂರಿಗೆ(ನೀಲಗಿರಿ) ವಾಪಸ್ ಬರಲು ಹಣ ಕೂಡ ಕೊಡಲಿಲ್ಲ. ನಿಮ್ಮ ಅಕೌಂಟ್ಗೆ ಹಣ ಹಾಕಿದ್ದೇವೆ, ಜಾಗ ತೆಗೆದುಕೊಟ್ಟಿದ್ದೇವೆ ಎಂದು ಹೇಳಿದ್ದೆಲ್ಲಾ ಸುಳ್ಳು. ನಮಗೆ ಯಾವುದು ಸಿಗಲಿಲ್ಲ.
ಕಾರ್ತಿಕ್ ಗೊನ್ಸಾಲ್ವಿಸ್ ಹೇಳಿದ್ದನ್ನು ನಾವು ಮಾಡಿದ್ದೇವೆ. ಆ ಶೂಟಿಂಗ್ಗೆ ನಾವು ಹಣ ಕೊಟ್ಟಿದ್ದೇವೆ. ಚಿತ್ರಕ್ಕೆ ಒಳ್ಳೆಯ ಹೆಸರು ಬರಲಿ ಮುಂದೆ ಸಹಾಯ ಮಾಡುತ್ತೇವೆ, ಬೆಳ್ಳಿ ಮೊಮ್ಮಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇವೆ ಎಂದರು. ಅದಕ್ಕಾಗಿಯೇ ನಾವು ಅವರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದೇವೆ. ಅವರು ಮಾತ್ರ ಸರ್ಕಾರಗಳಿಂದ ಮತ್ತು ಬೇರೆ ಬೇರೆ ರೀತಿಯಲ್ಲಿ ಹಣನು ಪಡೆದರು. ಆದರೆ ಅವರು ನಮಗೆ ಸ್ವಲ್ಪವೂ ಸಹಾಯ ಮಾಡಲಿಲ್ಲ, ನಾವು ಗೊನ್ಸಾಲ್ವಿಸ್ಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದಿದ್ದಾರೆ. ಸಂದರ್ಶನದ ನಡುವೆಯೇ ನಿರ್ದೇಶಕಿಗೆ ಫೋನ್ ಮಾಡಿದ್ದು ಆಕೆ ಮಾತನಾಡದೇ ನುಣುಚಿಕೊಂಡಿದ್ದಾರೆ.

ಬೊಮನ್ ಮತ್ತು ಬೆಳ್ಳಿ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು 2 ಕೋಟಿ ರೂ. ಹಣ ನೀಡುವಂತೆ ಕಾರ್ತಿಕ್ ಗೊನ್ಸಾಲ್ವಿಸ್ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ಉತ್ತರಿಸಿದ 'ದಿ ಎಲಿಫೆಂಟ್ ವಿಸ್ಪರರ್ಸ್' ಸಿನಿಮಾ ನಿರ್ಮಾಣ ಸಂಸ್ಥೆ ಸ್ವಲ್ಪ ಹಣ ಕೊಟ್ಟಿದ್ದೇವೆ, ಅವರ ಆರೋಪಗಳೆಲ್ಲಾ ನಿರಾಧಾರ ಎಂದು ಎಂದಿದ್ದಾರೆ. ಈ ಆಸ್ಕರ್ ಸಿನಿಮಾ ವಿವಾದ ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದು ಗೊತ್ತಿಲ್ಲ. ಈ ವಿವಾದಕ್ಕೆ ಸಂಬಂಧಿಸಿ ಸಾಕಷ್ಟು ಜನ ಬೊಮನ್ ಮತ್ತು ಬೆಳ್ಳಿ ದಂಪತಿಯನ್ನು ಬೆಂಬಲಿಸಿದ್ದಾರೆ. ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರನ್ನು ಟೀಕಿಸುತ್ತಿದ್ದಾರೆ.
ತಮಿಳುನಾಡಿದ ಮಧುಮಲೈ ಅಭಯಾರಣ್ಯದಲ್ಲಿ ಮಾವುತರಾಗಿರುವ ಬೊಮ್ಮನ್- ಬೆಳ್ಳಿ ದಂಪತಿ ನಿಜಜೀವನವನ್ನು ಆಧರಿಸಿ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ನಿರ್ಮಾಣವಾಗಿತ್ತು. ರಘು, ಅಮ್ಮು ಎನ್ನುವ ಎರಡು ಅನಾಥ ಆನೆಗಳನ್ನು ಆಧರಿಸಿ ಪೋಷಿಸುವ ಕಥೆಯನ್ನು ನೈಜವಾಗಿಯೇ ಕಟ್ಟಿಕೊಡಲಾಗಿತ್ತು. ದಂಪತಿ ಚಿತ್ರದಲ್ಲಿ ನಟಿಸಿದ್ದರು ಎನ್ನುವುದಕ್ಕಿಂತ ಅವರ ಜೀವನವೇ ದೃಶ್ಯರೂಪ ಪಡೆದಿತ್ತು.
'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಿಕ್ಕ ಸಮಯದಲ್ಲಿ ಮಾತನಾಡಿದ್ದ ಬೆಳ್ಳಿ "ಆನೆಗಳು ಅಂದರೆ ನಮಗೆ ಮಕ್ಕಳ ಸಮಾನ. ತಾಯಿಯನ್ನು ಕಳೆದುಕೊಂಡ ಮರಿಯಾನೆಗಳ ಸೇವೆ ಮಾಡುವುದು ಹೆಮ್ಮೆ ಎನಿಸುತ್ತದೆ. ಇಂತಹ ಸಾಕಷ್ಟು ಆನೆಗಳನ್ನು ರಕ್ಷಿಸಿದ್ದೇವೆ. ಅಂತಹ ಆನೆಗಳನ್ನು ನಮ್ಮ ಸ್ವತಃ ಮಕ್ಕಳಂತೆ ನೋಡಿಕೊಲ್ಳುತ್ತೇವೆ. ಇದು ನಮ್ಮ ರಕ್ತದಲ್ಲೇ ಇದೆ. ನಮ್ಮ ಪೂರ್ವಿಕರು ಇದನ್ನೇ ಮಾಡುತ್ತಿದ್ದರು. ನಮಗೆ ಆಸ್ಕರ್ ಎಂದರೆ ಏನು ಅಂತಲೇ ಗೊತ್ತಿಲ್ಲ" ಎಂದಿದ್ದರು. ಈ ಮುಗ್ಧ ದಂಪತಿಯ ಮಾತಿಗೆ ಜನ ದೇಶವೇ ಸಲಾಂ ಎಂದಿತ್ತು.


Click it and Unblock the Notifications











