ಮಲೇಷಿಯಾದಲ್ಲಿ ಆಡಿಯೋ ಲಾಂಚ್ ಪ್ಲ್ಯಾನ್ ಮಾಡಿದ ಕೆವಿಎನ್; ನೆಕ್ಸ್ಟ್ ಲೆವೆಲ್ ಪ್ರಮೋಷನ್
ಭಾರತದ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಓವರ್ಸೀಸ್ ಮಾರ್ಕೆಟ್ ಮೇಲೆ ಕಣ್ಣಿಟ್ಟಿವೆ. ದಕ್ಷಿಣದ ಸಿನಿಮಾಗಳು ಈಗ ವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಅದೇ ಕಾರಣಕ್ಕೆ ದೇಶದ ಹೊರ ಭಾಗದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇತ್ತೀಚೆಗೆ ಜಪಾನ್ ದೇಶದಲ್ಲಿ ಪ್ರಚಾರ ಸಿನಿಮಾ ಬಿಡುಗಡೆ ಮಾಡಿದ್ದನ್ನು ನೋಡಿದ್ದೇವೆ.
ಇದೀಗ ಕೆವಿಎನ್ ಸಂಸ್ಥೆ ಮಲೇಷಿಯಾದಲ್ಲಿ ಚಿತ್ರದ ಆಡಿಯೋ ಲಾಂಚ್ ಪ್ಲ್ಯಾನ್ ಮಾಡುತ್ತಿದೆ. 'ಟಾಕ್ಸಿಕ್', 'ಕೆಡಿ' ರೀತಿಯ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾಗಳು ಬರ್ತಿವೆ. ಇನ್ನು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ಕೆವಿಎನ್ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿದೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.

ರಾಜಕೀಯರಂಗದತ್ತ ಮುಖ ಮಾಡಿರುವ ವಿಜಯ್ ನಟನೆಯ ಕೊನೆ ಸಿನಿಮಾ ಇದು ಎಂದು ಬಿಂಬಿಸಲಾಗುತ್ತಿದೆ. ಹಾಗಾಗಿ ಭಾರೀ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪೂಜಾ ಹೆಗ್ಡೆ, ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಹೆಚ್. ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.
ಮಲೇಷಿಯಾದಲ್ಲಿ 'ಜನ ನಾಯಗನ್' ಆಡಿಯೋ ಲಾಂಚ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ತಮಿಳು ಸಿನಿಮಾಗಳಿಗೆ ಮಲೇಷಿಯಾ, ಸಿಂಗಾಪುರದಲ್ಲಿ ದೊಡ್ಡ ಮಾರ್ಕೆಟ್ ಇದೆ. ಹಾಗಾಗಿ ಅಲ್ಲಿನ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಅಲ್ಲಿಗೆ ತೆರಳಿ ಪ್ರಚಾರ ನಡೆಸಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ಕ್ಕೆ 'ಜನ ನಾಯಗನ್' ಸಿನಿಮಾ ತೆರೆಗೆ ಬರಲಿದೆ. ಆದರೆ ಡಿಸೆಂಬರ್ನಲ್ಲಿ ಆಡಿಯೋ ಲಾಂಚ್ ಪ್ಲ್ಯಾನ್ ನಡೀತಿದೆ.

ಡಿಸೆಂಬರ್ 27ರಂದು ಮಲೇಷಿಯಾದಲ್ಲಿ ಅದ್ಧೂರಿಯಾಗಿ ಈವೆಂಟ್ ನಡೆಸುವ ಲೆಕ್ಕಾಚಾರ ಶುರುವಾಗಿದೆ. ತಮಿಳುನಾಡಿನಲ್ಲಿ ಕೂಡ ಒಂದು ಈವೆಂಟ್ ಮಾಡಲು ತಂಡ ತಯಾರಿ ನಡೆಸಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನು ಚಿತ್ರಕ್ಕಾಗಿ ವಿಜಯ್ ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.
ಸತ್ಯನ್ ಸೂರ್ಯನ್ ಛಾಯಾಗ್ರಹಣ 'ಜನ ನಾಯಗನ್' ಚಿತ್ರಕ್ಕಿದೆ. ಸಿನಿಮಾ ಬಜೆಟ್ 300 ಕೋಟಿ ರೂ.ಗೂ ಅಧಿಕ ಎನ್ನುವ ಮಾತುಗಳು ಕೇಳಿಬರ್ತಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಮಮಿತಾ ಬೈಜು ಚಿತ್ರದ ತಾರಾಗಣದಲ್ಲಿದ್ದಾರೆ. ರಾಕ್ಸ್ಟರ್ ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.
ಅಂದಹಾಗೆ ಇದು ವಿಜಯ್ ನಟನೆಯ 69ನೇ ಸಿನಿಮಾ. ತಮಿಳಗ ವೆಟ್ರಿ ಕಳಗಂ ಎಂಬ ಪ್ರಾದೇಶಿಕ ಪಕ್ಷವನ್ನು ನಟ ವಿಜಯ್ ಸ್ಥಾಪಿಸಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ವಿಜಯ್ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಪಕ್ಷ ಸಂಘಟನೆ ಆರಂಭಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ನೋಡಿ ಮುಂದೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆಯಿದೆ.
ವಿಜಯ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲ್ಲ. ತಮಿಳುನಾಡಿನಲ್ಲಿ ಮಾತ್ರ ಅವರ ಸಿನಿಮಾಗಳಿಗೆ ಒಳ್ಳೆ ಮಾರ್ಕೆಟ್ ಇದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೇ ದಳಪತಿ ಸಿನಿಮಾಗಳು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುತ್ತವೆ. ರಜನಿಕಾಂತ್ ಚಿತ್ರಗಳಿಗಿಂತ ಅಲ್ಲಿ ವಿಜಯ್ ಸಿನಿಮಾ ಸದ್ದು ಮಾಡುತ್ತವೆ. ಆದರೆ ಅದನ್ನೆಲ್ಲಾ ಬಿಟ್ಟು ಅವರು ಪಾಲಿಟಿಕ್ಸ್ ಕಡೆ ಮುಖ ಮಾಡಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ.


Click it and Unblock the Notifications











