ಮಣಿರತ್ನಂ ಮುಂದಿನ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ; ಹೀರೊ ಯಾರಂದ್ರೆ?
ಕನ್ನಡ ನಟಿ ರುಕ್ಮಿಣಿ ವಸಂತ್ ಈಗಾಗಲೇ ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ರುಕ್ಕು ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಸದ್ಯ ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ಹಾಗೂ ಸಿಂಬು ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಜೂನ್ 5ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಮಣಿರತ್ನಂ ಮತ್ತೊಂದು ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದು ರುಕ್ಮಿಣಿ ವಸಂತ್ ನಾಯಕಿಯಾಗುತ್ತಾರೆ ಎನ್ನಲಾಗ್ತಿದೆ.

ತೆಲುಗಿನ ನವೀನ್ ಪೊಲಿಶೆಟ್ಟಿ ಈ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಒಟ್ಟಾರೆ ಮಣಿರತ್ನಂ ನಿರ್ದೇಶನದಲ್ಲಿ ನಟಿಸೋ ಅವಕಾಶ ಅಂದ್ರೆ ನಿಜಕ್ಕೂ ವಿಶೇಷ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅದ್ಭುತ ಸಿನಿಮಾಗಳ ಸೂತ್ರಧಾರಿ ಮಣಿರತ್ನಂ. ಅಂತಹ ಮಹಾನ್ ನ ನಿರ್ದೇಶಕನ ಚಿತ್ರದಲ್ಲಿ ನಟಿಸಬೇಕು ಎನ್ನುವ ಸಾಕಷ್ಟು ನಟ, ನಟಿಯರ ಕನಸು. ರುಕ್ಮಿಣಿಗೆ ಬಹಳ ಬೇಗ ಅಂತಾದೊಂದು ಅವಕಾಶ ಸಿಗುವ ಸುಳಿವು ಸಿಕ್ತಿದೆ.
'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಎಂಬ ತೆಲುಗು ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿ ಬಂದಿದ್ದಾರೆ. ಸದ್ಯ ವಿಜಯ್ ಸೇತುಪತಿ ಜೊತೆ 'ಏಸ್' ಹಾಗೂ ಶಿವಕಾರ್ತಿಕೇಯನ್ ಜೊತೆ 'ಮದರಾಸಿ' ಎಂಬ 2 ತಮಿಳು ಸಿನಿಮಾಗಳಲ್ಲಿ ಬೆಂಗಳೂರು ಬೆಡಗಿ ಬಣ್ಣ ಹಚ್ಚಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್ಟಿಆರ್ ನಟನೆಯ ಚಿತ್ರಕ್ಕೂ ಈಕೆನೇ ನಾಯಕಿ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
'ಬೀರ್ಬಲ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರುಕ್ಮಿಣಿ ವಸಂತ್ ಬಳಿಕ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳಲ್ಲಿ ನಟಿಸಿದ್ದರು. ಗಣೇಶ್ ಜೊತೆ 'ಬಾನ ದಾರಿಯಲ್ಲಿ', ಶ್ರೀಮುರಳಿ ಜೊತೆ 'ಬಘೀರ' ಹಾಗೂ ಶಿವಣ್ಣನ ಜೋಡಿಯಾಗಿ 'ಭೈರತಿ ರಣಗಲ್' ನಟಿಸಿ ಮೋಡಿ ಮಾಡಿದ್ದಾರೆ. ತಮ್ಮ ಸ್ನಿಗ್ಧ ಸೌಂದರ್ಯ ಹಾಗೂ ಸಹಜ ನಟನೆಯಿಂದ ಸಿನಿರಸಿಕರ ಮನಗೆದ್ದಿದ್ದಾರೆ. ಪಕ್ಕದ್ಮನೆ ಹುಡುಗಿ ರೀತಿ ಮೋಡಿ ಮಾಡುತ್ತಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಪ್ರಿಯಾ ಆಗಿ ರುಕ್ಕು ಮ್ಯಾಜಿಕ್ ಮಾಡಿದ್ದರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಕಾಂಬಿನೇಷನ್ ಸಿನಿರಸಿಕರಿಗೆ ಬಹಳ ಇಷ್ಟವಾಗಿತ್ತು. 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳನ್ನು ಮಾಡಿ ಮಣಿ ನಿರಾಸೆ ಅನುಭವಿಸಿದ್ದರು. ನಿರ್ದೇಶಕನಾಗಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾದರೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿಲ್ಲ. ಕಾಲಿವುಡ್ ಬಾಹುಬಲಿ ಆಗಿ ಬಿಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು.
ಇದೀಗ 'ಥಗ್ ಲೈಫ್' ಸಿನಿಮಾ ಮೇಲೆ ಬಹಳ ಭರವಸೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಗ್ಯಾಂಗ್ಸ್ಟರ್ ಡ್ರಾಮಾ ಕಥೆ ಹೇಳುತ್ತಿದ್ದಾರೆ. ಕಮಲ್ ಜೊತೆ ಸೇರಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಎ. ಆರ್ ರಹಮಾನ್ ಸಂಗೀತದಲ್ಲಿ 5 ಹಾಡುಗಳು ರಿಲೀಸ್ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. 36 ವರ್ಷಗಳ ಬಳಿಕ ಕಮಲ್- ಮಣಿ ಒಟ್ಟಿಗೆ ಒಂದೇ ಚಿತ್ರಕ್ಕೆ ಕೈ ಜೋಡಿಸಿರುವುದು ವಿಶೇಷ.


Click it and Unblock the Notifications











