ಪೋಷಕರ ಜೊತೆ ವೈಮನಸ್ಸು, ಆದರೂ ತಾಯಿಗಾಗಿ ದೇವಸ್ಥಾನ ಕಟ್ಟಿಸಿದ ದಳತಿ ವಿಜಯ್!
ತಾಯಿಗಿಂತ ಮಿಗಿಲಾದ ದೇವರಿಲ್ಲ. ನಮ್ಮನ್ನು ಭೂಮಿಗೆ ತಂದ ತಾಯಿಗಾಗಿ ಏನು ಮಾಡಿದರೂ ಕಮ್ಮಿನೇ. ಕಾಲಿವುಡ್ ನಟ ದಳಪತಿ ವಿಜಯ್ ತಮ್ಮ ತಾಯಿಗಾಗಿ ಒಂದು ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕಾಲಿವುಡ್ನಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.
ತಮಿಳು ನಟ ವಿಜಯ್ ದೊಡ್ಡ ಅಭಿಮಾನಿಗಳ ಬಳಗ ಸಂಪಾದಿಸಿದ್ದಾರೆ. ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದ ದಳಪತಿ ಇದೀಗ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗಕ್ಕೂ ಧುಮುಕುವ ಸಾಹಸ ಮಾಡುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂದು ತಮ್ಮ ಪಕ್ಷಕ್ಕೆ ಹೆಸರಿಟ್ಟಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ.

ಕಳೆದ ವರ್ಷ ವಿಜಯ್ ನಟನೆಯ 'ಲಿಯೋ' ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸದ್ಯ 'ಗೋಟ್'(ದಿ ಗ್ರೇಟೆಸ್ಟ್ ಆಫ್ ಆಲ್ ಟೈಂ) ಎನ್ನುವ ಚಿತ್ರದಲ್ಲಿ ದಳಪತಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಳಿಕ ಒಂದೇ ಒಂದು ಚಿತ್ರದಲ್ಲಿ ಮಾತ್ರ ನಟಿಸಲು ವಿಜಯ್ ಮನಸ್ಸು ಮಾಡಿದ್ದು ಬಳಿಕ ಸಂಪೂರ್ಣವಾಗಿ ಪಾಲಿಟಿಕ್ಸ್ನಲ್ಲಿ ಗುರ್ತಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ವಿಜಯ್ ಕೊನೆಯ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ಇನ್ನು ದಳಪತಿ ವಿಜಯ್ ಹಾಗೂ ಪೋಷಕರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತದೆ. ವಿಜಯ್ ತಂದೆ ಎಸ್. ಎ ಚಂದ್ರಶೇಖರ್ ಒಂದು ಕಾಲದಲ್ಲಿ ತಮಿಳು ಸಿನಿಮಾಗಳನ್ನು ನಿರ್ದೇಶಿಸಿದ್ದರು. ತಾಯಿ ಶೋಭಾ ಚಂದ್ರಶೇಖರ್ ಸಹ ಗಾಯಕಿಯಾಗಿ, ನಿರ್ದೇಶಕಿಯಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ವಿಜಯ್ ಅಭಿಮಾನಿ ಸಂಘದ ಬೆಂಬಲದಿಂದ ತಂದೆ ಎಸ್. ಎ ಚಂದ್ರಶೇಖರ್ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ವಿಜಯ್ ಆಪ್ತರು ದೂರು ನೀಡಿದ್ದರು ಎಂದು ವರದಿಯಾಗಿತ್ತು.

ಏನೇ ಭಿನ್ನಾಭಿಪ್ರಾಯಗಳಿದ್ದರೂ ವಿಜಯ್ ಪೋಷಕರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಕಳೆದ ವರ್ಷ ತಂದೆಗೆ ಶಸ್ತ್ರ ಚಿಕಿತ್ಸೆ ನಡೆದಾಗ ವಿದೇಶದಿಂದ ಬಂದು ವಿಜಯ್ ಪೋಷಕರನ್ನು ಭೇಟಿ ಮಾಡಿದ್ದರು. ಆ ಫೋಟೊ ವೈರಲ್ ಆಗಿತ್ತು. ಇದೀಗ ವಿಜಯ್ ತಮ್ಮ ತಾಯಿ ಶೋಭಾಗಾಗಿ ದೊಡ್ಡ ದೇವಸ್ಥಾನ ಕಟ್ಟಿಸಿಕೊಟ್ಟಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ವಿಜಯ್ ಹಾಗೂ ತಾಯಿ ಶೋಭಾ ದೇವಸ್ಥಾನದ ಕುಂಭಾಭಿಷೇಕದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ವಿಜಯ್ ತಮ್ಮ ತಾಯಿಗಾಗಿ ದೊಡ್ಡ ಸಾಯಿಬಾಬ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ದೇವಸ್ಥಾನದ ಒಳಗೆ ಅರ್ಚಕರ ಜೊತೆ ವಿಜಯ್ ನಿಂತಿರುವ ಫೋಟೊ ಸಖತ್ ಸದ್ದು ಮಾಡ್ತಿದೆ. ವಿಜಯ್ ಕ್ರಿಶ್ಚಿಯನ್ ಮತಕ್ಕೆ ಸೇರಿದವರು. ಅವರು ಸಾಯಿಬಾಬ ಆಲಯ ಕಟ್ಟಿಸಿದ್ದು ನಿಜವೇ? ಎನ್ನುವ ಚರ್ಚೆ ಶುರುವಾಗಿದೆ.
ವಿಜಯ್ ಚೆನ್ನೈನ ಕೊರಟೂರಿನಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ತಾಯಿಗಾಗಿ ಈ ದೇವಸ್ಥಾನ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ದಳಪತಿ ತಾಯಿಗಾಗಿ ದೇವಸ್ಥಾನ ನಿರ್ಮಿಸಿದ್ರಾ? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











