₹1000 ಕೋಟಿ ಬಜೆಟ್ನಲ್ಲಿ 'ವೇಲ್ಪಾರಿ' ಚಿತ್ರಕ್ಕೆ ಶಂಕರ್ ಪ್ಲ್ಯಾನ್; ಮುಂದಿನ ವರ್ಷವೇ ಮುಹೂರ್ತ
ದಕ್ಷಿಣ ಭಾರತ ಸಿನಿಮಾರಂಗದ 'ದೃಶ್ಯ ವೈಭವದ ನಿರ್ದೇಶಕ' ಎಂದೇ ಖ್ಯಾತಿ ಪಡೆದಿರುವ ಶಂಕರ್ ಈಗ ದೊಡ್ಡ ಸುದ್ದಿಯಲ್ಲಿದ್ದಾರೆ. ಅವರ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ 'ವೇಲ್ಪಾರಿ'ಗೆ ಸಂಬಂಧಿಸಿದಂತೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದೆ. ಸೋಲಿನ ಸುಳಿಗೆ ಸಿಲುಕಿರುವ ಶಂಕರ್ ಮತ್ತೆ ಎದ್ದು ಬರುವ ನಿರೀಕ್ಷೆ ಮೂಡಿದೆ.
'ವೇಲ್ಪಾರಿ' ಸಿನಿಮಾವು ಇಡೀ ಭಾರತೀಯ ಚಿತ್ರರಂಗವನ್ನೇ ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ 'ವೇಲ್ಪಾರಿ' ಚಿತ್ರದ ಚಿತ್ರೀಕರಣವು ಜೂನ್ 2026 ರಿಂದ ಆರಂಭವಾಗಲಿದೆ. ಇದು ಸಿನಿಪ್ರಿಯರಿಗೆ ಮತ್ತು ಶಂಕರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ. 'ವೇಲ್ಪಾರಿ' ಸಿನಿಮಾ ಕೇವಲ ಒಂದು ಭಾಗದಲ್ಲಿ ಮುಗಿಯುವ ಕಥೆಯಲ್ಲ. ಇದನ್ನು ಭರ್ಜರಿ 3 ಭಾಗಗಳಲ್ಲಿ ನಿರ್ಮಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.

ತಮಿಳಿನ ಖ್ಯಾತ ಲೇಖಕ, ರಾಜಕಾರಣಿ ಮತ್ತು ಸಂಸದರಾದ ಸು. ವೆಂಕಟೇಶನ್ ಬರೆದಿರುವ 'ವೀರ ಯುಗ ನಾಯಕನ್ ವೇಲ್ಪಾರಿ' ಐತಿಹಾಸಿಕ ಕಾದಂಬರಿಯನ್ನು ಆಧರಿಸಿ ಶಂಕರ್ ಈ ಚಿತ್ರ ಕಟ್ಟಿಕೊಡುತ್ತಿದ್ದಾರೆ. ಇದು ತಮಿಳು ಸಂಗಮ ಸಾಹಿತ್ಯದ ಬೇರುಗಳನ್ನು ಹೊಂದಿರುವ ಶ್ರೇಷ್ಠ ಕಥೆಯಾಗಿದೆ. ಸಂಗಮ ಯುಗದ ಶ್ರೇಷ್ಠ ರಾಜ ಮತ್ತು ಪರೋಪಕಾರಿ ಎಂದು ಹೆಸರಾಗಿದ್ದ ರಾಜ 'ಪಾರಿ'ಯ ಜೀವನವನ್ನು ಈ ಸಿನಿಮಾವು ತೆರೆದಿಡಲಿದೆ.
ನಿರ್ದೇಶಕ ಶಂಕರ್ ಈ ಹಿಂದೆ 'ಎಂಧಿರನ್' (ರೋಬೋಟ್) ನನ್ನ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳಿದ್ದರು. ಆದರೆ ಈಗ 'ವೇಲ್ಪಾರಿ' ಚಿತ್ರವೇ ನನಗೆ ಹೆಚ್ಚು ಸ್ಫೂರ್ತಿ ನೀಡಿದ ಸಿನಿಮಾ ಎಂದು ಹೇಳಿದ್ದಾರೆ. ಈ ಚಿತ್ರದ ಮೇಕಿಂಗ್ ಗುಣಮಟ್ಟವು ಹಾಲಿವುಡ್ ದೊಡ್ಡ ಸರಣಿಗಳಾದ 'ಗೇಮ್ ಆಫ್ ಥ್ರೋನ್ಸ್' ಅಥವಾ 'ಅವತಾರ್' ಸಿನಿಮಾಗಳಿಗೆ ಸಮನಾಗಿರುತ್ತದೆ ಎಂದು ಶಂಕರ್ ಗ್ಯಾರಂಟಿ ನೀಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಂಕರ್ ಈ ವಿಷಯವನ್ನು ಬಹಿರಂಗಪಡಿಸಿದ್ದರು.

ಅಂದಹಾಗೆ'ವೇಲ್ಪಾರಿ' ಚಿತ್ರ ಸುಮಾರು ₹1000 ಕೋಟಿ ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಕಾರಣದಿಂದಲೇ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಈ ಬೃಹತ್ ಪ್ರಾಜೆಕ್ಟ್ಗೆ ಧರ್ಮ ಪ್ರೊಡಕ್ಷನ್ಸ್ ಮತ್ತು ನೆಟ್ಫ್ಲಿಕ್ಸ್ನಂತಹ ದೊಡ್ಡ ನಿರ್ಮಾಣ ಸಂಸ್ಥೆಗಳು ಹಾಗೂ ಒಟಿಟಿ ದೈತ್ಯರು ಕೈಜೋಡಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದ ಪ್ರಮುಖ ಪಾತ್ರಗಳಿಗಾಗಿ ತಮಿಳು ಸೂಪರ್ ಸ್ಟಾರ್ಗಳಾದ ಸೂರ್ಯ ಮತ್ತು ಚಿಯಾನ್ ವಿಕ್ರಮ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಇನ್ನು ಮುಖ್ಯ ಪಾತ್ರಗಳಿಗಾಗಿ ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಶಂಕರ್ ಮೊದಲ ಪೂರ್ಣ ಪ್ರಮಾಣದ ತಮಿಳು-ಬಾಲಿವುಡ್ ಸಂಯೋಜನೆಯಾಗುವ ಸಾಧ್ಯತೆ ಇದೆ. ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ವಹಿಸಿಕೊಳ್ಳುವ ನಿರೀಕ್ಷೆಯಿದೆ.
'ವೇಲ್ಪಾರಿ' ಚಿತ್ರದ ಕಥೆಯ ಕೇಂದ್ರ ಬಿಂದುವು ಶ್ರೇಷ್ಠ ರಾಜನಾದ 'ಪಾರಿ' ಅವರ ಸುತ್ತ ಸುತ್ತುತ್ತದೆ. ಪಾರಿ ಮುಳ್ಳೈ ಎಂಬ ರಾಜ್ಯದ ಕರುಣಾಮಯಿ ರಾಜರಾಗಿದ್ದರು. ಪಾರಿ ಅವರು ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದರು. ಪಾರಿ ಶ್ರೇಷ್ಠ ಚೇರ, ಚೋಳ ಮತ್ತು ಪಾಂಡ್ಯ ಸಾಮ್ರಾಜ್ಯಗಳ ವಿರುದ್ಧ ನಡೆಸಿದ ಭಯಂಕರ ಯುದ್ಧಗಳ ಕಥೆಯು ಈ ಚಿತ್ರದಲ್ಲಿದೆ. ಒಟ್ಟಿನಲ್ಲಿ ಇದು ಒಂದು ವೀರಯುಗದ ನಾಯಕನ ರೋಚಕ ಕಥೆ. ಸದ್ಯಕ್ಕೆ ಶಂಕರ್ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರಕಥೆ ಕೆಲಸವು ಸಂಪೂರ್ಣವಾಗಿ ಮುಗಿದಿದೆ. ಬೃಹತ್ ಸೆಟ್ಗಳು ಪಾತ್ರಗಳ ವಿನ್ಯಾಸ, ಯುದ್ಧದ ಸನ್ನಿವೇಶಗಳು ಮತ್ತು ಗ್ರಾಫಿಕ್ಸ್ ಕೆಲಸಗಳಿಗೆ ಸಂಬಂಧಿಸಿದಂತೆ ಪೂರ್ವ ತಯಾರಿ ಜೋರಾಗಿ ನಡೆಯುತ್ತಿದೆ. ಈ ಚಿತ್ರವು ತಮಿಳು ಚಿತ್ರರಂಗದ ಬಾಹುಬಲಿ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.


Click it and Unblock the Notifications











