Vishal Vs Abbas: ಸಿಸಿಎಲ್ ವೇಳೆ ನಡೆದ ಕಿರಿಕ್: "ಯಾವತ್ತೂ ವಿಶಾಲ್ ಮೇಲೆ ದ್ವೇಷ ಕಮ್ಮಿ ಆಗಲ್ಲ"- ಅಬ್ಬಾಸ್
ಒಂದ್ಕಾಲದಲ್ಲಿ ತಮಿಳಿನ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದಿದ್ದ ಅಬ್ಬಾಸ್ ಇದ್ದಕ್ಕಿದಂತೆ ಚಿತ್ರರಂಗದಿಂದ ದೂರಾಗಿದ್ದರು. ರೊಮ್ಯಾಂಟಿಕ್ ಹೀರೊ ಆಗಿ ಗೆಲ್ತಾರೆ ಎಂದುಕೊಂಡಿದ್ದ ನಟ ಸೈಲೆಂಟ್ ಆಗಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಫ್ಯಾಮಿಲಿ ಸಮೇತ ನ್ಯೂಜಿಲೆಂಡ್ಗೆ ಹೋಗಿ ಹೊಸ ಜೀವನ ಆರಂಭಿಸಿದ್ದರು.
ಬಹಳ ವರ್ಷಗಳ ಬಳಿಕ ನಟ ಅಬ್ಬಾಸ್ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುವ ಪ್ರಯತ್ನದಲ್ಲಿದ್ದಾರೆ. ವಿದೇಶದಿಂದ ವಾಪಸ್ ಬಂದ ನಟ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ತಮ್ಮ ವೃತ್ತಿ ಜೀವನ, ವೈಯಕ್ತಿಕ ಜೀವನ ಎಲ್ಲದರ ಬಗ್ಗೆಯೂ ಮಾತನಾಡುತ್ತಿದ್ದಾರೆ. ವಿದೇಶದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದ್ದು, ಟ್ಯಾಕ್ಸಿ ಡ್ರೈವರ್ ಆಗಿ ಇದ್ದಿದ್ದು ಎನ್ನುವನ್ನು ಹಂಚಿಕೊಳ್ಳುತ್ತಿದ್ಧಾರೆ. ಇದೇ ಹಾದಿಯಲ್ಲಿ ತಮಿಳು ನಟರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಹೈಂಡ್ವುಡ್ಸ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಥಲಾ ಅಜಿತ್, ದಳಪತಿ ವಿಜಯ್, ವಿಶಾಲ್ ಹೀಗೆ ಹಲವರ ಬಗ್ಗೆ ಮಾತನಾಡಿದ್ದಾರೆ. ವಿಶಾಲ್ ಜೊತೆಗಿನ ದ್ವೇಷದ ಬಗ್ಗೆ ಕೂಡ ಮೌನ ಮುರಿದಿದ್ದಾರೆ. ಸಿಸಿಎಲ್ ಕ್ರಿಕೆಟ್ ಟೂರ್ನಿ ವೇಳೆ ಅಬ್ಬಾಸ್ ಹಾಗೂ ವಿಶಾಲ್ ನಡುವೆ ಸಣ್ಣ ಕಿರಿಕ್ ಆಗಿತ್ತು. ಆದರೆ ಅದು ಏನು ಎನ್ನುವುದು ಗೊತ್ತಾಗಲಿಲ್ಲ. ಸಿಸಿಎಲ್ನ ಮೊದಲೆರಡು ಸರಣಿಯಲ್ಲಿ ಭಾಗಿ ಆಗಿದ್ದ ಅಬ್ಬಾಸ್ ನಂತರ 3ನೇ ಸರಣಿಯಲ್ಲಿ ಆಡಲಿಲ್ಲ. ಅದು ಯಾಕೆ ಎನ್ನುವುದನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ.
"ಅಂದು ನನ್ನ ಬಗ್ಗೆ ವಿಶಾಲ್ ನಡೆದುಕೊಂಡ ರೀತಿ ಬಹಳ ಕೋಪ ತರಿಸಿತ್ತು. ಆತ ಮಾಡಿದ ಕೆಲಸಕ್ಕೆ ಈಗಾಗಲೇ ಕ್ಷಮಿಸಿದ್ದೇನೆ. ಈಗ ಎಲ್ಲಾದರೂ ಸಿಕ್ಕರೆ ಸುಮ್ಮಗೆ ಹಾಯ್ ಎಂದು ಮಾತನಾಡಿಸುತ್ತೇನೆ. ಆದರೆ ಯಾವತ್ತೂ ವಿಶಾಲ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಳ್ಳಲ್ಲ. ಚಿತ್ರರಂಗದಲ್ಲಿ ಎಲ್ಲರೊಟ್ಟಿಗೂ ಒಳ್ಳೆ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ಆಸೆ. ಆದರೆ ವಿಶಾಲ್ ವಿಚಾರದಲ್ಲಿ ಅದು ಎಂದಿಗೂ ಸಾಧ್ಯವಿಲ್ಲ" ಎಂದಿದ್ದಾರೆ.
"ಚಿತ್ರರಂಗದಲ್ಲಿರುವ ಎಲ್ಲಾ ನಟ-ನಟಿಯರನ್ನು ಒಂದೆಡೆ ಸೇರಿಸಬೇಕು ಎನ್ನುವ ಕಾರಣಕ್ಕೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಆರಂಭಿಸಲಾಯಿತು. ನಟನಟಿಯರ ನಡುವೆ ಸೋದರ ಭಾವ ಬರುವಂತೆ ಮಾಡುವುದೇ ಅದರ ಉದ್ದೇಶವಾಗಿತ್ತು. ಆದರೆ ಸಿಸಿಎಲ್ 2ನೇ ಆವೃತ್ತಿ ವೇಳೆ ಆತನೊಟ್ಟಿಗೆ ಕಿರಿಕ್ ಆಯಿತು. ಆತ ಸುಳ್ಳು ಹೇಳಲು ಆರಂಭಿಸಿದ. ತನ್ನ ಮಾತಿನಿಂದ ಎಲ್ಲರನ್ನು ಹಾಳು ಮಾಡಿದ. ನನಗೆ ಇಷ್ಟವಿಲ್ಲದ ವಾತಾವರಣದಲ್ಲಿ ಇರಲು ನನಗೆ ಇಷ್ಟವಿಲ್ಲ. ಅದಕ್ಕೆ ನಾನು ಟೂರ್ನಿಯಲ್ಲಿ ಮತ್ತೆ ಆಡಲಿಲ್ಲ."

"ನನಗೆ ಆ ವಿಚಾರದಿಂದ ಬಹಳ ಬೇಸರವಾಗಿತ್ತು. ಬಹುಶಃ ಒಂದಲ್ಲ ಒಂದು ದಿನ ಆತನಿಗೂ ಇದು ಅರಿವಾಗಿರುತ್ತದೆ. ಈಗಲೂ ಆತ ಚಿತ್ರರಂಗದ ಕುಟುಂಬದ ಭಾಗ. ಒಂದು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಹಜ." ಎಂದು ಅಬ್ಬಾಸ್ ವಿವರಿಸಿದ್ದಾರೆ.
ನಟ ಸೂರ್ಯ ಬಗ್ಗೆ ಮಾತನಾಡಿರುವ ಅಬ್ಬಾಸ್ "ನನಗೆ ಸೂರ್ಯ ಮೊದಲ ಚಿತ್ರದಲ್ಲಿ ನಟಿಸುವ ಸಮಯದಿಂದ ಗೊತ್ತು. ಆರಂಭದಲ್ಲಿ ಬಹಳ ಸಂಕೋಚದ ಸ್ವಭಾವದವರಾಗಿದ್ದರು. ಕ್ಯಾಮರಾ ಮುಂದೆ ಬರಲು ಸಂಕೋಚಪಡುತ್ತಿದ್ದರು. ಸೂರ್ಯ ಗೆಲುವಿನ ಹಿಂದೆ ಪತ್ನಿ ಜ್ಯೋತಿಕಾ ಬೆಂಬಲವೂ ಇದೆ. ನಟ-ನಟಿಯರಿಗೆಲ್ಲಾ ಸೂರ್ಯ ಮಾದರಿ" ಎಂದಿದ್ದಾರೆ.
ದಳಪತಿ ವಿಜಯ್ ಸೌಮ್ಯ ಸ್ವಭಾವದವರು. ಡೌನ್ ಟು ಅರ್ಥ್ ವ್ಯಕ್ತಿತ್ವ. ಯಾವುದನ್ನು ಅತಿಯಾಗಿ ತಲೆಕೆಡಿಸಿಕೊಳ್ಳಲ್ಲ. ಮೊದಲು ವಿಜಯ್ ಸಿನಿಮಾ ಎಂದರೆ ಇಷ್ಟವಾಗುತ್ತಿರಲಿಲ್ಲ. ಆದರೆ ಈಗ ಆತನ ಸಿನಿಮಾ ಇಷ್ಟ. ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಾರೆ.
ಇನ್ನು ಥಲಾ ಅಜಿತ್ ಕೂಡ ಒಳ್ಳೆ ವ್ಯಕ್ತಿತ್ವದವರು. ಹೆಚ್ಚು ಕಮ್ಮಿ ನನ್ನಂತೆ. ಬಹಳ ನೇರ ನಡೆನುಡಿ ಅವರದ್ದು. ಈಗಾಗಲೇ ಸಾಕಷ್ಟು ಶಸ್ತ್ರ ಚಿಕಿತ್ಸೆ ನಡೆದಿದೆ. ವೈದ್ಯರು ಎಚ್ಚರಿಸಿದರೂ ಬಿಡದೇ ಅಭಿಮಾನಿಗಳಿಗಾಗಿ ನಟಿಸುತ್ತಿದ್ದಾರೆ. ಅದಕ್ಕೆ ಅಭಿಮಾನಿಗಳಿಗೆ ಅಜಿತ್ ಅಂದ್ರೆ ಅಷ್ಟು ಇಷ್ಟ ಎಂದಿದ್ದಾರೆ.


Click it and Unblock the Notifications











