CCL 2026: ಬುಲ್ಡೋಜರ್ಸ್ ವಿರುದ್ಧ ಚೆನ್ನೈಗೆ ಹೀರೊ, ವಿಲನ್ ಎಲ್ಲವೂ ಆಗಿಬಿಟ್ಟರು ವಿಕ್ರಾಂತ್
ಕ್ರಿಕೆಟ್ ಆಟವೇ ಬಲು ರೋಚಕ. ಯಾವ ಕ್ಷಣದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ, ಒಂದು ಸಣ್ಣ ತಪ್ಪು ಇಡೀ ಪಂದ್ಯದ ದಿಕ್ಕನೇ ಬದಲಿಸಿಬಿಡುತ್ತದೆ. ಒಂದು ಒಂದು ಕ್ಯಾಚ್ ಪಂದ್ಯವನ್ನು ಗೆಲ್ಲಿಸಿಬಿಡುತ್ತದೆ. ಅದೇ ರೀತಿ ಒಂದು ಒಂದು ಓವರ್ ಪಂದ್ಯವನ್ನು ಸೋಲಿನ ಸುಳಿಗೆ ಕರೆದುಕೊಂಡು ಹೋಗಿಬಿಡುತ್ತದೆ. ಸಿಸಿಎಲ್ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಚೆನ್ನೈ ಕಿಂಗ್ಸ್ ಸೋಲುಂಡಿದೆ.
ಕೊಯಂಬತ್ತೂರಿನಲ್ಲಿ ನಿನ್ನೆ(ಜನವರಿ 31) ನಡೆದ ಪಂದ್ಯ ಬಹಳ ರೋಚಕವಾಗಿತ್ತು. ಜೆಕೆ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕಿಚ್ಚನ ಪಡೆ ಗೆದ್ದು ಬೀಗಿದೆ. ಇಂದು(ಫೆಬ್ರವರಿ 1) ಬೆಂಗಾಲ್ ಟೈಗರ್ಸ್ ವಿರುದ್ಧ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಲೀಗ್ ಹಂತದ 3 ಪಂದ್ಯಗಳಲ್ಲಿ ಗೆದ್ದು ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ಗೆ ಬಂದಿತ್ತು. ಕೇವಲ ಒಂದು ಪಂದ್ಯ ಗೆದ್ದು ರನ್ರೇಟ್ ಸಹಾಯದಿಂದ ಚೆನ್ನೈ ಕಿಂಗ್ಸ್ ಸೆಮಿಫೈನಲ್ ಪ್ರವೇಶಿಸಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ತಂಡದ ನಾಯಕ ವಿಕ್ರಾಂತ್ ಗಮನ ಸೆಳೆದರು. ಅಬ್ಬರದ ಬ್ಯಾಟಿಂಗ್ ಮೂಲಕ ಕಿಚ್ಚನ ಪಡೆಗೆ ನಡುಕ ಹುಟ್ಟಿಸಿದ್ದ ವಿಕ್ರಾಂತ್ ಬಳಿಕ ಒಂದು ಅದ್ಭುತ ಕ್ಯಾಚ್ ಹಿಡಿದು ಮೋಡಿ ಮಾಡಿದ್ದರು. ಆದರೆ ಒಂದು ಓವರ್ ಬೌಲಿಂಗ್ ಮಾಡಿ ಗೆಲುವು ಕರ್ನಾಟಕ ಬುಲ್ಡೋಜರ್ಸ್ ಕಡೆ ವಾಲುವಂತೆ ಮಾಡಿಬಿಟ್ಟರು. ಒಂದರ್ಥದಲ್ಲಿ ದುರಂತ ನಾಯಕ ಎನಿಸಿಬಿಟ್ಟರು.
ನಟ ವಿಕ್ರಾಂತ್ ಹಲವು ವರ್ಷಗಳಿಂದ ಸಿಸಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ಬಾರಿ ತಂಡದನ ನಾಯಕತ್ವ ವಹಿಸಿಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದರು. ಟಾಸ್ ಗೆದ್ದು ರಮಣ ಜೊತೆ ನಾಯಕ ವಿಕ್ರಾಂತ್ ಬ್ಯಾಟಿಂಗ್ ಆರಂಭಿಸಿದರು. ಬೌಂಡರಿ, ಸಿಕ್ಸರ್ಗಳ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಬೌಲರ್ಗಳನ್ನು ಬೆಂಡೆತ್ತಿದ್ದರು. ಮೊದಲ ವಿಕೆಟ್ಗೆ ಈ ಜೋಡಿ 63 ರನ್ ಕಲೆ ಹಾಕಿದರು. ಕೇವಲ 18 ಎಸೆತಗಳಲ್ಲಿ 58 ರನ್ ಸಿಡಿಸಿದರು. 63 ರನ್ಗಳ ಜೊತೆಯಾಟದಲ್ಲಿ ರಮಣ 2 ರನ್ ಮಾಡಿ ಗಳಿಸಿದ್ದರು. ಅಷ್ಟರಮಟ್ಟಿಗೆ ವಿಕ್ರಾಂತ್ ಆರ್ಭಟ ನಡೆದಿತ್ತು.
ರಮಣ ಔಟ್ ಆಗುತ್ತಿದ್ದಂತೆ ಚೆನ್ನೈ ಕಿಂಗ್ಸ್ ಆರ್ಭಟ ಕಮ್ಮಿ ಆಯಿತು. ನಿಧಾನವಾಗಿ ಬುಲ್ಡೋಜರ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ ಅಬ್ಬರದ 9 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 66 ರನ್ ಗಳಿಸಿ ವಿಕ್ರಾಂತ್ ಔಟ್ ಆಗಿದ್ದರು. ಚಂದನ್ ಬೌಲಿಂಗ್ನಲ್ಲಿ ಬೋಲ್ಡ್ ಆಗಿ ಹೊರ ನಡೆದರು. ಬಳಿಕ ತಂಡದ ಕುಸಿತ ಆರಂಭವಾಯಿತು. ಆದರೂ ಆಧವ್ ಬ್ಯಾಟಿಂಗ್ ನೆರವಿನಿಂದ ತಂಡ 160 ರನ್ಗಳ ಗುರಿಯನ್ನು ಬುಲ್ಡೋಜರ್ಸ್ ಮುಂದಿಟ್ಟಿತ್ತು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಕಿಚ್ಚನ ಪಡೆ ಸೊಗಸಾಗಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿತ್ತು. ನಿರೂಪ್ ಭಂಡಾರಿ ಹಾಗೂ ಡಾರ್ಲಿಂಗ್ ಕೃಷ್ಣ ಮೊದಲ ವಿಕೆಟ್ ಜೊತೆಯಾಟಕ್ಕೆ 40 ರನ್ ಸೇರಿಸಿದರು. ನಿರೂಪ್ ರನ್ ಔಟ್ ಆಗಿ ಹೊರ ನಡೆದರು. ನಂತರ ತಂಡದ ಭರವಸೆಯ ಆಟಗಾರ ಕೃಷ್ಣ ಬೋಲ್ಡ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್ಗೆ ಇಳಿದ ರಾಜೀವ್ ಮೊದಲ ಎಸೆತದಲ್ಲಿ ಔಟ್ ಆಗಿ ಶಾಕ್ ಕೊಟ್ಟಿದ್ದರು. ಪರಿ ಬೌಲಿಂಗ್ನಲ್ಲಿ ರಾಜೀವ್ ಹೊಡೆದ ಮೊದಲ ಎಸತವೇ ವಿಕ್ರಾಂತ್ ಕೈ ಸೇರಿತ್ತು. ಬೌಂಡರಿ ಲೈನ್ನಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದು ಸಂಭ್ರಮಿಸಿದ್ದರು.
ತಂಡದ ಆಧಾರಸ್ತಂಭ ರಾಜೀವ್ ವಿಕೆಡ್ ಕಬಳಿಸಿ ವಿಕ್ರಾಂತ್ ಪಡೆ ಸಂಭ್ರಮಿಸಿತ್ತು. ಇನ್ನು ಪಂದ್ಯ ನಮ್ಮದೇ ಎಂದು ಖುಷಿಯಾಗಿದ್ದರು. ಆದರೆ ಜೆಕೆ ಪಂದ್ಯವನ್ನು ಚೆನ್ನೈ ಕಿಂಗ್ಸ್ ಕೈಯಿಂದ ಕಿತ್ತುಕೊಂಡರು. ಹೀಗೆ ಆಕರ್ಷಕ ಅರ್ಧ ಶತಕ ಬಾರಿಸಿ, ಅದ್ಭುತವಾಗಿ ರಾಜೀವ್ ಕ್ಯಾಚ್ ಹಿಡಿದು ಚೆನ್ನೈ ತಂಡಕ್ಕೆ ವಿಕ್ರಾಂತ್ ನಿಜವಾದ ಹೀರೊ ಎನಿಸಿಕೊಂಡಿದ್ದರು. 18 ಓವರ್ ವಿಕ್ರಾಂತ್ ಬೌಲಿಂಗ್ ಮಾಡಿ ದುಬಾರಿ ಎನಿಸಿಬಿಟ್ಟರು.
ಮೊದಲ ಎಸೆತದಲ್ಲಿ ಬೌಂಡರಿ, 3ನೇ ಎಸೆತ ಸಿಕ್ಸರ್, 4ನೇ ಎಸೆತ ಸಿಕ್ಸರ್, ಕೊನೆಯ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿ ಜೆಕೆ ಅಬ್ಬರಿಸಿದರು. ಒಂದೇ ಓವರ್ನಲ್ಲಿ 23 ರನ್ ಬಿಟ್ಟುಕೊಟ್ಟು ವಿಕ್ರಾಂತ್ ತಂಡದ ಸೋಲಿಗೆ ಕಾರಣವಾಗಿಬಿಟ್ಟರು. ಅಷ್ಟು ಹೊತ್ತು ಹೀರೊ ಎನಿಸಿಕೊಂಡಿದ್ದ ವಿಕ್ರಾಂತ್ ಕೊನೆಗೆ ವಿಲನ್ ಆಗಿಬಿಟ್ಟರು.


Click it and Unblock the Notifications











